‘ಕನ್ನಡತಿ’ ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟು, ‘ಬಡ್ಡೀಸ್’ ಚಿತ್ರದ ಮೂಲಕ ನಾಯಕನಾಗಿ ಬೆಳ್ಳಿತೆರೆ ಪ್ರವೇಶಿಸಿದ್ದ ನಟ ಕಿರಣ್ ರಾಜ್ ಸದ್ಯ ಸ್ಯಾಂಡಲ್ವುಡ್ನಲ್ಲೇ ತೊಡಗಿಸಿಕೊಂಡಿದ್ದಾರೆ.
ತಮ್ಮ ಹೊಸ ಚಿತ್ರ ‘ಭರ್ಜರಿ ಗಂಡು’ ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿರುವ ಕಿರಣ್ ರಾಜ್, ಹೊಸ ಪ್ರೊಜೆಕ್ಟ್ಗೆ ಕಾಲ್ಶೀಟ್ ನೀಡಿದ್ದಾರೆ.ಪ್ರಸಿದ್ಧ್ ನಿರ್ದೇಶಿಸುತ್ತಿರುವ, ಕಿರಣ್ ರಾಜ್ ನಾಯಕನಾಗಿ ನಟಿಸುತ್ತಿರುವ ‘ಶೇರ್’ ಚಿತ್ರದ ಮುಹೂರ್ತ ಇತ್ತೀಚೆಗೆ ಕಂಠೀರವ ಸ್ಟುಡಿಯೊದಲ್ಲಿ ನಡೆಯಿತು.
‘ಶೇರ್’ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾವಾಗಿದೆ. ಅನಾಥಾಶ್ರಮದಲ್ಲಿ ಈ ಕಥೆ ನಡೆಯುತ್ತದೆ.ನಾಯಕ-ನಾಯಕಿ ಅನಾಥರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಾಜಕಾರಣಿಯೊಬ್ಬನ ಹಿಂಬಾಲಕರು ಈ ಅನಾಥಾಶ್ರಮವನ್ನೇ ಅಡ್ಡೆ ಮಾಡಿಕೊಂಡ ಬಳಿಕ ನಡೆಯುವ ಘಟನೆ ಚಿತ್ರದ ಕಥಾಹಂದರ. ಕಿರಣ್ ರಾಜ್ ಚಾಕೊಲೇಟ್ ಹೀರೊ ಎಂದೇ ಗುರುತಿಸಿಕೊಂಡಿದ್ದಾರೆ. ಅವರಿಗೆ ರಗಡ್ ಲುಕ್ ಸರಿ ಹೊಂದುವುದೇ ಎಂದು ಅನೇಕರು ಪ್ರಶ್ನಿಸಿದರು. ಆದರೆ ಮಾಸ್ ಪಾತ್ರಕ್ಕೆ ಬೇಕಾದ ಕಿಕ್ ಬಾಕ್ಸಿಂಗ್, ಮಾರ್ಷಲ್ ಆರ್ಟ್ಸ್ ಮುಂತಾದವುಗಳನ್ನು ಕಿರಣ್ ರಾಜ್ ಅಭ್ಯಾಸ ಮಾಡಿದ್ದಾರೆ. ನನ್ನ ಹಾಗೂ ಕಿರಣ್ ರಾಜ್ ಕಾಂಬಿನೇಶನ್ನಲ್ಲಿ ಮೂಡಿಬಂದಿರುವ ‘ಭರ್ಜರಿ ಗಂಡು’ ಚಿತ್ರ ಸೆಪ್ಟೆಂಬರ್ನಲ್ಲಿ ತೆರೆ ಕಾಣಲಿದ್ದು, ‘ಶೇರ್’ ಚಿತ್ರದ ಚಿತ್ರೀಕರಣ ಆ.22ರಿಂದ ಆರಂಭವಾಗಲಿದೆ ಎಂದರು ಪ್ರಸಿದ್ಧ್.
ಚಿತ್ರದಲ್ಲಿ ನಾಯಕಿಯಾಗಿ ಸುರೇಖ ಬಣ್ಣಹಚ್ಚಿದ್ದು, ಪೊಲೀಸ್ ಅಧಿಕಾರಿಯಾಗಿ ತನೀಶಾ ಕಾಣಿಸಿಕೊಳ್ಳಲಿದ್ದಾರೆ. ಕಿಟ್ಟಿ ಕೌಶಿಕ್ ಛಾಯಾಗ್ರಹಣ, ಗುಮ್ಮಿನೇನಿ ವಿಜಯ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.