ವಿಜ್ಞಾನ ಮತ್ತು ಧರ್ಮ ಪಥದಲ್ಲಿ ನಡೆದ ಸನ್ಯಾಸಿ ಜಿ.ಡಿ. ಅಗರ್ವಾಲ್ (ಸಂತ ಜ್ಞಾನಸ್ವರೂಪ ಸಾನಂದ) ಅವರ ಸ್ಮರಣಾರ್ಥ ‘ನದಿಗಳನ್ನು ಉಳಿಸೋಣ ಬನ್ನಿ’ ಕಾರ್ಯಕ್ರಮವನ್ನು ಶನಿವಾರ ನಗರದಲ್ಲಿ ಆಯೋಜಿಸಲಾಗಿದೆ.
ವೈಜ್ಞಾನಿಕ ನದಿಗಳನ್ನು ಉಳಿಸುವ ಪ್ರಯತ್ನದ ಭಾಗವಾಗಿ ಈ ಕಾರ್ಯಕ್ರಮ ಆಯೋಜಿತವಾಗಿದೆ. ನಾಡಿನ ನೆಲ–ಜಲ ಅದರಲ್ಲೂ ಮುಖ್ಯವಾಗಿ ನದಿಗಳನ್ನು ಸಂರಕ್ಷಿಸುವೆಡೆಗೆ ಹೋರಾಡುತ್ತಿರುವ ಎಲ್ಲಾ ಹೋರಾಟಗಾರರು ಹಾಗೂ ವ್ಯಕ್ತಿಗಳನ್ನು ಒಟ್ಟಿಗೆ ತಂದು ಸಾರ್ವಜನಿಕರನ್ನು ಈ ಕುರಿತು ಪ್ರೇರೇಪಿಸುವ ಹಾಗೂ ಸಂಘಟಿಸುವ ಒಂದು ಪ್ರಯತ್ನವಿದು.
‘ಗಂಗೆ ನನ್ನ ತಾಯಿ, ಅವಳನ್ನು ರಕ್ಷಿಸುವುದು ನನ್ನ ಕರ್ತವ್ಯ, ಈ ಕೈಂಕರ್ಯದ ಹಾದಿಯಲ್ಲಿ ನನ್ನ ಪ್ರಾಣ ಹೋದರೆ ನಷ್ಟವೇನಿಲ್ಲ’ ಎಂಬ ನಿಲುವನ್ನು ಹಲವಾರು ಬಾರಿ ಘೋಷಿಸಿದ್ದ ಜಿ.ಡಿ. ಅಗರ್ವಾಲ್, 112 ದಿವಸಗಳ ಆಮರಣಾಂತ ಉಪವಾಸದ ಫಲವಾಗಿ ತಮ್ಮ ಪ್ರಾಣವನ್ನು ತ್ಯಜಿಸಿದರು.
ದಶಕಗಳಿಂದ ವೈಜ್ಞಾನಿಕ ಸಾಕ್ಷ್ಯಗಳ ಆಧಾರದ ಮೇಲೆ ನಡೆಸಿಕೊಂಡು ಬಂದ ಗಂಗಾ ನದಿಪಾತ್ರದ ರಕ್ಷಣಾ ಹೋರಾಟಕ್ಕೆ ತಮ್ಮ 79ನೇ ವಯಸ್ಸಿನಲ್ಲಿ (2011 ರಲ್ಲಿ) ಸನ್ಯಾಸ ಸ್ವೀಕರಿಸುವ ಮೂಲಕ ಹೊಸ ತಿರುವು ಕೊಟ್ಟವರು ಅವರು.
ಅಗರ್ವಾಲ್ ಅವರ ನೆನಪಿನ ಈ ಕಾರ್ಯಕ್ರಮವನ್ನು ಗ್ರಾಮ ಸೇವಾ ಸಂಘ, ಲೋಕವಿದ್ಯಾ ವೇದಿಕೆ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಭಾರತ ಯಾತ್ರಾ ಕೇಂದ್ರ ಜಂಟಿಯಾಗಿ ಆಯೋಜಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.