ತಮಿಳುನಾಡಿನಲ್ಲಿ ಮಹಿಳಾ ಕಾಲೇಜಿಗೆ ನುಗ್ಗಿ ವಿದ್ಯಾರ್ಥಿಗಳು ದಾಂದಲೆ ನಡೆಸಿದ್ದಾರೆ ಎನ್ನಲಾದ ಎರಡು ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ.
ಮುಸ್ಲಿಂ ಹುಡುಗರ ಉಪಟಳ ಮಿತಿ ಮೀರಿದ್ದು, ಹಿಂದೂ ಹುಡುಗಿಯರಿಗೆ ಕಿರುಕುಳ ನೀಡಲಾಗುತ್ತಿದೆ ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ತಮಿಳುನಾಡು ಬಿಜೆಪಿ ಘಟಕದ ಮುಖ್ಯಸ್ಥ ಅಣ್ಣಾಮಲೈ ಅವರು ಮಧ್ಯಪ್ರವೇಶಿಸಿ ಮಹಿಳೆಯರಿಗೆ ನ್ಯಾಯ ಕೊಡಿಸಬೇಕು ಎಂದು ಸಾಮಾಜಿಕ ಜಾಲತಾಣ ಬಳಕೆದಾರರು ಆಗ್ರಹಿಸಿದ್ದಾರೆ. ಆದರೆ, ಈ ಎರಡೂ ಪ್ರಕರಣಗಳಲ್ಲಿ ಕೋಮುದ್ವೇಷ ಕಂಡುಬಂದಿಲ್ಲ.
ಈ ಎರಡೂ ವಿಡಿಯೊಗಳು ಪ್ರತ್ಯೇಕ ಘಟನೆಗೆ ಸಂಬಂಧಿಸಿವೆ.ಮಹಿಳಾ ಕಾಲೇಜಿಗೆ ನುಗ್ಗಿದ ಹುಡುಗರ ಗುಂಪೊಂದು ಭದ್ರತಾ ಸಿಬ್ಬಂದಿ ಹಾಗೂ ಕೆಲವು ವಿದ್ಯಾರ್ಥಿನಿಯರ ಮೇಲೆ ಹಲ್ಲೆ ನಡೆಸಿದ್ದ ದೃಶ್ಯಒಂದು ವಿಡಿಯೊದಲ್ಲಿದೆ. ಈ ಪ್ರಕರಣ ಸಂಬಂಧ 10 ಜನರನ್ನು ಬಂಧಿಸಲಾಗಿದೆ ಎಂದು ಮದುರೈ ಡಿಸಿಪಿ ತಿಳಿಸಿದ್ದಾರೆ. ಆರೋಪಿಗಳು ಮುಸ್ಲಿಂ ಧರ್ಮದವರು ಎಂದು ಅವರು ಹೇಳಿಲ್ಲ. ಮತ್ತೊಂದು ವಿಡಿಯೊದಲ್ಲಿ ವಿದ್ಯಾರ್ಥಿನಿಯೊಬ್ಬರ ತಂದೆಯ ಮೇಲೆ ಹುಡುಗರ ಗುಂಪು ಹಲ್ಲೆ ಮಾಡುವ ದೃಶ್ಯವಿದೆ. ಅಂತ್ಯಕ್ರಿಯೆ ಮೆರವಣಿಗೆ ನಡೆಯುತ್ತಿದ್ದು, ಶಾಂತವಾಗಿ ವರ್ತಿಸುವಂತೆ ತಿಳಿಹೇಳಿದ್ದ ವ್ಯಕ್ತಿಯ ಮೇಲೆ ಹುಡುಗರು ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಆರು ಜನರನ್ನು ಬಂಧಿಸಲಾಗಿದ್ದು, ಇವರಲ್ಲಿ ಯಾರೂ ಮುಸ್ಲಿಂ ಧರ್ಮೀಯರಿಲ್ಲ ಎಂಬುದು ಎಫ್ಐಆರ್ನಿಂದ ತಿಳಿದುಬಂದಿದೆ. ಎರಡೂ ಪ್ರಕರಣಗಳಲ್ಲಿ ಭಾಗಿಯಾದವರು ಮುಸ್ಲಿಮೇತರರು ಎಂದು ‘ಇಂಡಿಯಾಟುಡೇ’ ವರದಿ ಮಾಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.