ADVERTISEMENT

ಸಂಭಾವನೆ ಇಲ್ಲದೆ ಕೃಷಿ ಕಾಯಕದ ರಾಯಭಾರಿಯಾಗಿ ದರ್ಶನ್ ಅಧಿಕಾರ ಸ್ವೀಕಾರ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2021, 12:09 IST
Last Updated 5 ಮಾರ್ಚ್ 2021, 12:09 IST
'ಚಾಲೆಂಜಿಂಗ್ ಸ್ಟಾರ್' ದರ್ಶನ್ 
'ಚಾಲೆಂಜಿಂಗ್ ಸ್ಟಾರ್' ದರ್ಶನ್    

ಬೆಂಗಳೂರು: 'ಯಾವುದೇ ಸಂಭಾವನೆ ಇಲ್ಲದೇ ಕೃಷಿ ಇಲಾಖೆಯ ರಾಯಭಾರಿಯಾಗಲು ನಟ ದರ್ಶನ್ ಒಪ್ಪಿದ್ದಾರೆ. ಇದು ಮೆಚ್ಚುಗೆಯ ಸಂಗತಿ' ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಹೇಳಿದರು.

ವಿಕಾಸಸೌಧದಲ್ಲಿ ಶುಕ್ರವಾರ ನಡೆದ "ಕೃಷಿ ಕಾಯಕದ ರಾಯಭಾರಿ" ಸ್ವೀಕಾರ ಕಾರ್ಯಕ್ರಮದಲ್ಲಿಅವರು ಮಾತನಾಡಿದರು.

'ಸಿನಿಮಾ ರಂಗದಲ್ಲಿ‌ ಎತ್ತರಕ್ಕೆ ಬೆಳೆದಿರುವ ದರ್ಶನ್ ನಟ, ಜೊತೆಗೆ ಕೃಷಿಕ. ರೈತಾಪಿ ಚಟುವಟಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ರೈತರ ಪರವಾಗಿ ದರ್ಶನ್‌ಗೆ ಅಭಿನಂದನೆಗಳು. ನಾನು ಕೂಡಾ ದರ್ಶನ್ ಅವರ "ರಾಬರ್ಟ್" ಚಿತ್ರವನ್ನು ನೋಡುತ್ತೇನೆ' ಎಂದೂ ಯಡಿಯೂರಪ್ಪ ಹೇಳಿದರು.

ADVERTISEMENT

'ಇದು ಕೃಷಿ ಇಲಾಖೆಯ ಅಭೂತಪೂರ್ವ ಕಾರ್ಯಕ್ರಮ. ಚಾಲೆಂಜಿಂಗ್ ಸ್ಟಾರ್ ಚಿತ್ರರಂಗದಲ್ಲಿ ನಟನೆಯ ಜೊತೆಗೆ ಕೃಷಿ, ಪಶುಸಂಗೋಪನೆ ಚಟುವಟಿಕೆಯಲ್ಲಿಯೂ ತೊಡಗಿಸಿಕೊಂಡಿದ್ದಾರೆ. ದರ್ಶನ್ ಕೃಷಿ ಕಾಯಕದ ರಾಯಭಾರಿಯಾಗಿರುವುದು ಹೆಮ್ಮೆಯ ವಿಷಯ' ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.

'ರೈತ ನಾಯಕರಾಗಿ ರೈತಪರ ಹೋರಾಟ ಮಾಡಿ ರಾಜ್ಯದಲ್ಲಿ ನಾಲ್ಕು ಬಾರಿ ಮುಖ್ಯಮಂತ್ರಿಯಾಗಿರುವ ನಾಡಿನ ಅಭಿವೃದ್ಧಿಗೆ ಶ್ರಮಿಸುತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯುತ್ತಿರುವುದು ಸಂತಸದ ವಿಚಾರ‌. ದರ್ಶನ್ ಎತ್ತರವಿರುವಷ್ಟು ಅವರ ಹೃದಯವೂ ಅಷ್ಟೇ ವಿಶಾಲವಾಗಿದೆ. ದರ್ಶನ್‌ಗೆ ರೈತರ ಪರ ಕಳಕಳಿ ಇದೆ. ದರ್ಶನ್ ಅವರ ಫಾರ್ಮ್ ಎನ್ನುವುದು ಸಣ್ಣ ಝೂ ಇದ್ದಂತಿದೆ. ದರ್ಶನ್ ಸ್ವತಃ ರೈತರೊಂದಿಗೊಂದು ದಿನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತೇನೆ ಎಂದಿದ್ದಾರೆ' ಎಂದೂ ಹೇಳಿದರು.

'ಸೂಪರ್ ಸ್ಟಾರ್‌ಗಳು ಸಂಭಾವನೆ ಪಡೆದು ದೊಡ್ಡದೊಡ್ಡ ಕಂಪನಿಯ ಕಾರ್ಯಕ್ರಮಗಳಿಗೆ ರಾಯಭಾರಿಯಾಗುತ್ತಾರೆ. ಆದರೆ ದರ್ಶನ್ ಕೃಷಿ ಇಲಾಖೆಗೆ ಯಾವುದೇ ಸಂಭಾವನೆ ಪಡೆಯದೇ ರಾಯಭಾರಿಯಾಗಿದ್ದಾರೆ. ಇದು ಅವರಲ್ಲಿರುವ ಕೃಷಿ ಉತ್ಸಾಹ, ರೈತ ಪರ ಕಾಳಜಿಯನ್ನು ತೋರಿಸುತ್ತದೆ' ಎಂದರು.

'ದರ್ಶನ್ ನಟನೆಯ "ರಾಬರ್ಟ್" ಚಿತ್ರ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ಸ್ವತಃ ಸ್ಫೂರ್ತಿಯಿಂದ ಅಭಿಮಾನಿಗಳು ಜನರು ಸೇರಿರುವುದು ನೋಡಿದರೆ ಅವರಿಗೆ ಜನರ ಅಭಿಮಾನ ಎಷ್ಟಿದೆ ಎಂದು ಎದ್ದು ತೋರಿಸುತ್ತದೆ.ನಾನು ಅಧುನಿಕ ಕೌರವನಾಗಿ ನಟನೆ ಮಾಡಿದ್ದೆ. ಆದರೆ ಪೌರಾಣಿಕವಾಗಿ ನಟನೆಯಲ್ಲಿ ದರ್ಶನ್ ಕೌರವನಾಗಿ ನಟಿಸಿದ್ದಾರೆ. ಮಾರ್ಚ್ 11ರಂದು "ರಾಬರ್ಟ್" ಚಿತ್ರ ಬಿಡುಗಡೆ ಆಗಲಿದ್ದು ಚಿತ್ರ ಸೂಪರ್ ಸೂಪರ್ ಹಿಟ್ ಆಗಲಿ' ಎಂದು ಪಾಟೀಲ ಹಾರೈಸಿದರು.

ದರ್ಶನ್ ಮಾತನಾಡಿ, 'ಪೊಲೀಸ್ ಇಲಾಖೆಯಿಂದ ಸಿನಿಮಾ ರಂಗ, ಅಲ್ಲಿಂದ ರಾಜಕೀಯಕ್ಕೆ ಬಂದ ಬಿ.ಸಿ.ಪಾಟೀಲ ಅವರು ಕೃಷಿ ಸಚಿವರಾಗಿದ್ದಾರೆ. ನಾನು ಸರ್ಕಾರದ ಕೃಷಿ ಇಲಾಖೆಯ ಕಾರ್ಯಕ್ರಮಗಳಿಗೆ ಪ್ರಚಾರ ನೀಡುತ್ತೇನೆ. ರೈತರಿಗೂ ಜನರಿಗೂ ಇರುವುದು ರಕ್ತ ಸಂಬಂಧ. ಇದಕ್ಕೆ ನಾನು ಶ್ರಮಿಸುತ್ತೇನೆ' ಎಂದರು.

ಕಾರ್ಯಕ್ರಮದಲ್ಲಿ "ಕೃಷಿಕೈಪಿಡಿ-2021' ಬಿಡುಗಡೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.