ADVERTISEMENT

ಹಬ್ಬದ ಸಂಭ್ರಮಕ್ಕೆ ಬೇಲದ ಸವಿ

ಸೀತಾ ಎಸ್.ನಾರಾಯಣ
Published 16 ಮಾರ್ಚ್ 2018, 19:30 IST
Last Updated 16 ಮಾರ್ಚ್ 2018, 19:30 IST
ಹಬ್ಬದ ಸಂಭ್ರಮಕ್ಕೆ ಬೇಲದ ಸವಿ
ಹಬ್ಬದ ಸಂಭ್ರಮಕ್ಕೆ ಬೇಲದ ಸವಿ   

ಬೇಲದಹಣ್ಣಿನ ಸಿಹಿಮಿಶ್ರಣ

ಬೇಕಾಗುವ ಸಾಮಗ್ರಿಗಳು: ಬೇಲದಹಣ್ಣು – 1ಕಪ್‌, ಬೆಲ್ಲದಪುಡಿ – 1ಕಪ್‌, ಏಲಕ್ಕಿ ಅಥವಾ ಲವಂಗದ ಪುಡಿ ಸ್ವಲ್ಪ.

ತಯಾರಿಸುವ ವಿಧಾನ: ಬೇಲದಹಣ್ಣಿನ ತಿರುಳು, ಬೆಲ್ಲದಪುಡಿಯನ್ನು ಚೆನ್ನಾಗಿ ಬೆರೆಸಿ ಏಲಕ್ಕಿಪುಡಿಯನ್ನು ಹಾಕಿ ಸವಿಯಿರಿ. (ರುಬ್ಬಿಯೂ ಮಾಡಬಹುದು). ಇದು ಪಿತ್ತಶಮನಕಾರಿ. ಕೆಲವು ತಿಂಗಳವರೆಗೆ ಇಡುವುದಾದರೆ ನೀರು ಹಾಕದೇ ರುಬ್ಬಿ, ಸೇವಿಸುವಾಗ ಏಲಕ್ಕಿ ಬೆರೆಸಿ. ಪಸೆಯಿಲ್ಲದ ಗಾಜಿನ ಭರಣಿಗೆ ಹಾಕಿ ಫ್ರಿಜ್‌ನಲ್ಲಿಟ್ಟು ಬೇಕಾದಾಗ ಸವಿಯಿರಿ.

ADVERTISEMENT

**

ಹಣ್ಣಿನ ಖಾರದ ಮಿಶ್ರಣ

ಬೇಕಾಗುವ ಸಾಮಗ್ರಿಗಳು: ಬೇಲದಹಣ್ಣು – -1ಕಪ್, ಬೆಲ್ಲದಪುಡಿ – 1/2ಕಪ್ , ಸಾರಿನಪುಡಿ – 2ಚಮಚ (ಅಥವಾ ಹಸಿಮೆಣಸಿನ ಕಾಯಿ 3-4), ಜೀರಿಗೆ –1 ಚಮಚ, ಉಪ್ಪು ರುಚಿಗೆ, ಇಂಗು ಸ್ವಲ್ಪ.

ತಯಾರಿಸುವ ವಿಧಾನ: ಎಲ್ಲಾ ಪದಾರ್ಥವನ್ನೂ ರುಬ್ಬಿ ಗಾಜಿನ ಭರಣಿಗೆ ಹಾಕಿಡಿ. ಹುಣಸೆಹಣ್ಣಿನಿಂದ ಮಾಡುವ ಕುಟ್ಟುಂಡೆ (ಚಿಗಳಿ)ಯಂತೆ ಹಾಗೆಯೇ ಸವಿಯಬಹುದು. ಹಾಗೂ ಊಟದ ಜೊತೆ ಉಪ್ಪಿನಕಾಯಿಯಂತೆ ಸವಿಯಬಹುದು, ಈ ಮಿಶ್ರಣದಿಂದ ಚಿತ್ರಾನ್ನವನ್ನು ಕೂಡ ಮಾಡಬಹುದು.

**

ಗೊಜ್ಜು

ಬೇಕಾಗುವ ಸಾಮಗ್ರಿಗಳು: ಬೇಲದಹಣ್ಣು – 1ಕಪ್‌, ಬೆಲ್ಲದಪುಡಿ – 1/2ಕಪ್,  ಮೆಂತ್ಯ, ಜೀರಿಗೆ, ದನಿಯಾ – 1/2ಚಮಚ, ಕಡ್ಲೆಬೇಳೆ, ಉದ್ದಿನ ಬೇಳೆ – 2ಚಮಚ, ಹಸಿಮೆಣಸು ಅಥವಾ ಒಣಮೆಣಸು – 3-4, ಎಳ್ಳು – 1ಚಮಚ, ಕಾಯಿತುರಿ – 1/2ಕಪ್, ಉಪ್ಪು – ರುಚಿಗೆ, ಒಗ್ಗರಣೆಗೆ – ಎಣ್ಣೆ, ಸಾಸಿವೆ, ಉದ್ದಿನಬೇಳೆ, ಕಡ್ಲೆಬೇಳೆ, ಶೇಂಗಾಬೀಜ, ಇಂಗು, ಕರಿಬೇವು, ಅರಿಸಿನ.

ತಯಾರಿಸುವ ವಿಧಾನ: ಮೆಂತ್ಯ, ಜೀರಿಗೆ, ಕಡ್ಲೆಬೇಳೆ, ಉದ್ದಿನಬೇಳೆ, ದನಿಯಾ, ತುಂಡು ಮಾಡಿದ ಒಣಮೆಣಸಿನಕಾಯಿ, ಇಂಗು, ಅರಿಸಿನ, ಎಳ್ಳು ಎಲ್ಲವನ್ನೂ ಕ್ರಮವಾಗಿ ಹಾಕಿ ಸ್ವಲ್ಪ ಎಣ್ಣೆಯೊಂದಿಗೆ ಹದವಾಗಿ ಹುರಿದು, ಕಾಯಿತುರಿಯೊಂದಿಗೆ ರುಬ್ಬಿ. 1ಕಪ್ ನೀರಿನೊಂದಿಗೆ ಶೇಂಗಾಬೀಜ ಹಾಕಿ ಅರ್ಧ ಬೇಯುತ್ತಿದ್ದಂತೆ ಹಣ್ಣಿನ ತಿರುಳನ್ನು ಹಾಕಿ ಬೇಯಿಸಿ, ನಂತರ ರುಬ್ಬಿದ ಮಿಶ್ರಣ, ಉಪ್ಪು, ಬೆಲ್ಲ, ಸ್ವಲ್ಪ ನೀರು ಹಾಕಿ ಕುದಿಸಿ, ಒಲೆ ಆರಿಸಿ. ಗೊಜ್ಜು ಸಾಂಬಾರಿನ ಹದಕ್ಕಿರಲಿ, ಆರಿದ ಮೇಲೆ ಗಟ್ಟಿಯಾಗುತ್ತದೆ. ಎಣ್ಣೆ, ಸಾಸಿವೆ, ಇಂಗು, ಕರಿಬೇವು, ಅರಿಸಿನ ಕ್ರಮವಾಗಿ ಹಾಕಿ ಒಗ್ಗರಣೆ ಮಾಡಿ ಹಾಕಿ ಅನ್ನ, ಮುದ್ದೆ, ರೊಟ್ಟಿ, ಚಪಾತಿಯೊಂದಿಗೆ ಸವಿಯಿರಿ.

‌**

ಧಿಡೀರ್ ಗೊಜ್ಜು

ಬೇಕಾಗುವ ಸಾಮಗ್ರಿಗಳು: ಬೇಲದಹಣ್ಣು – 1ಕಪ್‌, ಬೆಲ್ಲದಪುಡಿ – 1/2ಕಪ್, ತಿಳಿಸಾರಿನ ಪುಡಿ – 2ಚಮಚ,  ಉಪ್ಪು, ಒಗ್ಗರಣೆಗೆ – ಎಣ್ಣೆ ಸಾಸಿವೆ, ಶೇಂಗಾಬೀಜ, ಇಂಗು, ಕರಿಬೇವು, ಅರಿಸಿನ

ತಯಾರಿಸುವ ವಿಧಾನ: 1 ಕಪ್ ನೀರು ಹಾಕಿ ಹಣ್ಣನ್ನು ಬೇಯಿಸಿ, ಉಪ್ಪು, ಸಾರಿನ ಪುಡಿ, ಬೆಲ್ಲ ಹಾಕಿ ಕುದಿಸಿ. ಒಗ್ಗರಣೆ ಮಾಡಿ ಹಾಕಿ.

**

ಮಧುಮೇಹಿಗಳಿಗೆ ಶರಬತ್ತು.

ಬೇಕಾಗುವ ಪದಾರ್ಥಗಳು: 1 ಕಪ್ ಬೇಲದ ಹಣ್ಣು, 1/2 ಕಪ್ ಬೆಲ್ಲ, ಉಪ್ಪು 1 [ರುಚಿಗೆ ತಕ್ಕಷ್ಟು] ಚ, 1 ಚ ಜೀರಿಗೆ ಪುಡಿ, 1/2//// ಚ.ಕಾಳು ಮೆಣಸಿನ ಪುಡಿ

ಮಾಡುವ ವಿಧಾನ: ಬೇಲದ ಹಣ್ಣು, ಬೆಲ್ಲದ ಪುಡಿ ರುಬ್ಬಿ ಬೇಕಿದ್ದಲ್ಲಿ ಶೋಧಿಸಬಹುದು, ಹಾಗೆಯೂ ಸೇವಿಸಬಹುದು. ಉಪ್ಪು, ಜೀರಿಗೆ-ಕಾಳುಮೆಣಸಿನ ಪುಡಿಯನ್ನು ಹಾಕಿ ಬೆರೆಸಿ, ಸವಿಯಲು ಕೊಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.