ವಿಧಾನಸಭಾ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳಿಗೆ ಮತದಾರರು ಒಳ್ಳೆಯ ಪಾಠ ಕಲಿಸಿದ್ದಾರೆನ್ನುವುದು (ಪ್ರ.ವಾ., ಸಂಪಾದಕೀಯ, ಮೇ 16) ನಿಜ. ಆದರೆ ಕಲಿಯುವ ವಿದ್ಯಾವಂತಿಕೆ ಗೊಡ್ಡು ರಾಜಕೀಯಕ್ಕಿಲ್ಲ. ಬರಲಿರುವ ಸರ್ಕಾರದ ಆದ್ಯತೆ ಜನಪರ ಆಡಳಿತವಾಗಬೇಕು ಎನ್ನುವುದು ಪಥ್ಯವಾದ ಮಾತೇ ಹೌದು. ಏಕೆಂದರೆ ಮತದಾರರು ಅತ್ಯುನ್ನತ ಪ್ರಜ್ಞಾವಂತಿಕೆ ಮೆರೆದಿದ್ದಾರೆ.
ಇಲ್ಲಿನ ಬಹುಪಾಲು ಮತದಾರರು ಪೂರ್ವಗ್ರಹದ ಪೀಡೆಗೆ ಸುಲಭವಾಗಿ ಬಲಿಬೀಳರು. ಚಿಲ್ಲರೆ ಕಾಸು-ಕೊಡುಗೆಗಳ ಆಮಿಷವೂ ಹೆಚ್ಚಿಗೆ ನಡೆಯದು. ಸರಿ-ತಪ್ಪು, ಒಳಿತು-ಕೆಡುಕುಗಳ ಆಯ್ಕೆ ಅವರಿಗೆ ಗೊತ್ತು. ಸಾರ್ವತ್ರಿಕ ಅಪಚಾರಗಳಿಗೆ ಸಮಯ ಬಂದಾಗ ಅವರು ತಕ್ಕ ಉತ್ತರ ಕೊಡಬಲ್ಲರು.
ಮುಖ್ಯಮಂತ್ರಿಯ ಉಡಾಫೆ ಧೋರಣೆ ಕಾಂಗ್ರೆಸಿನ ಕೆಲವು ಸ್ಥಾನಗಳನ್ನು ಬಲಿ ತೆಗೆದುಕೊಂಡಿರಬಹುದು. ಹಾಗಂತ ಈ ಆಡಳಿತ ವಿರೋಧಿ ಅಲೆ ಕುರುಡು-ಕುರುಡಾಗಿ ಬಿಜೆಪಿಯತ್ತ ವಾಲಿಕೊಂಡಿಲ್ಲ. ಹದ ಅರಿತೇ ಜೆಡಿಎಸ್ ಅನ್ನು ಜನ ಬೆಂಬಲಿಸಿದ್ದಾರೆ. ರಾಜ್ಯಪಾಲರ ನಡಾವಳಿಯನ್ನು ವಿಮರ್ಶಿಸುವ ಬೌದ್ಧಿಕ ಸಾಮರ್ಥ್ಯವನ್ನೂ ಇಲ್ಲಿನ ಜನರು ಹೊಂದಿದ್ದಾರೆ.
ಆರ್. ಕೆ. ದಿವಾಕರ, ಬೆಂಗಳೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.