ಅಧಿಕ ಹೊರೆ ಇಲ್ಲ: ಗ್ರಾಮೀಣಾಭಿವೃದ್ಧಿಗೆ ಒತ್ತು
ನವದೆಹಲಿ, ಜುಲೈ 22– ಕೃಷಿ ಗ್ರಾಮೀಣಾಭಿವೃದ್ಧಿ, ಬಡತನ ನಿವಾರಣೆಗೆ ವಿಶೇಷ ಒತ್ತು. ಹೊಸ ನೇರ ತೆರಿಗೆಯಿಂದ ಮುಕ್ತ, ಹಿಂದಿನ ಸರ್ಕಾರದ ಆರ್ಥಿಕ ಸುಧಾರಣೆಗೆ ಬೆಂಬಲ, ವೇತನದಾರರಿಗೆ ಆದಾಯ ತೆರಿಗೆಯಲ್ಲಿ ಅಲ್ಪ ರಿಯಾಯಿತಿ, ಉದ್ಯಮ ಕ್ಷೇತ್ರಕ್ಕೆ ಶೇ. 54ರಷ್ಟು ಸರ್ಚಾರ್ಚ್ ಇಳಿತ, ಸಣ್ಣ ಉದ್ಯಮಗಳಿಗೆ ರಿಯಾಯಿತಿ ನೀಡುವ ಸಂಯುಕ್ತ ರಂಗ ಸರ್ಕಾರದ 1996–97ರ ಚೊಚ್ಚಲ ಬಜೆಟ್ಅನ್ನು ಹಣಕಾಸು ಸಚಿವ ಪಿ. ಚಿದಂಬರಂ ಇಂದು ಮಂಡಿಸಿದರು.
ಭಾರಿ ಪ್ರಮಾಣದ ತೆರಿಗೆ ರಿಯಾಯಿತಿ, ಸಬ್ಸಿಡಿಯಿಂದ ಪ್ರಸಕ್ತ ಹಣಕಾಸು ವರ್ಷದಲ್ಲಿ ರೂ. 6924ಕೋಟಿ ಕೊರತೆ ಬೀಳಲಿದೆಯಾದರೂ ಹಣಕಾಸಿನ ನಿರ್ವಹಣೆಗೆ ಹಣಕಾಸು ಸಚಿವರು ಕಸ್ಟಮ್ಸ್ ಸುಂಕದಿಂದ ರೂ. 950 ಕೋಟಿ ಮತ್ತು ಎಕ್ಸೈಜ್ ತೆರಿಗೆಯಿಂದ 650 ಕೋಟಿ ಸಂಗ್ರಹಿಸುವ ಗುರಿಯನ್ನು ಪ್ರಕಟಿಸಿದ್ದಾರೆ.
ಅರವತ್ತು ಸಾವಿರದವರೆಗೆ ಆದಾಯ ಹೊಂದಿರುವ ವೇತನದಾರರಿಗೆ ತೆರಿಗೆ ರಿಯಾಯಿತಿಯ ಮಿತಿಯನ್ನು ಶೇ. 20ರಿಂದ ಶೇ. 19ಕ್ಕೆ ಇಳಿಸಲಾಗಿದೆ. ಆದರೆ ಆದಾಯ ತೆರಿಗೆ ಮಿತಿಯಲ್ಲಿ ಬದಲಾವಣೆ ಇರುವುದಿಲ್ಲ. ಅಲೋಪತಿ ಔಷಧಗಳ ಬೆಲೆ ಅಲ್ಪ ಪ್ರಮಾಣದಲ್ಲಿ ಇಳಿಯಲಿದೆ. ಅದೇ ರೀತಿ ಹೆಚ್ಚು ಬಳಕೆ ಮಾಡುವ ಖಾದ್ಯ ತೈಲ್ಯ, ಟೂತ್ ಪೇಸ್ಟ್, ಡಿಟರ್ಜೆಂಟ್ ಮತ್ತು ಕೆಲವು ಗ್ಲಾಸ್ವೇರ್ಗಳಿಗೆ ತೆರಿಗೆಯಲ್ಲಿ ಇಳಿತ, ಕಲರ್ ಟಿವಿ, ಕಂಪ್ಯೂಟರ್, ಸೆಲ್ಯೂಲರ್ ಫೋನ್ಗಳು, ಪೇಜರ್ಗಳಿಗೆ ಕಸ್ಟಮ್ಸ್ ತೆರಿಗೆಯಲ್ಲಿ ಇಳಿಕೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.