ದಾವಣಗೆರೆ: ವಕ್ಫ್ ಆಸ್ತಿ ಕಬಳಿಕೆ ತೆರವುಗೊಳಿಸುವಂತೆ ಒತ್ತಾಯಿಸಿ ಬೆಂಗಳೂರಿನಲ್ಲಿ ಫೆ.15ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ವಕ್ತಾರ ಅನ್ವರ್ ಮಾಣಿಪ್ಪಾಡಿ ತಿಳಿಸಿದರು.
ಬಿಜೆಪಿ ಕಚೇರಿಯಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ವಕ್ಫ್ ಆಸ್ತಿ ಕಬಳಿಕೆ ವಿರುದ್ಧ ಹೋರಾಟ ನಡೆಸಲು ‘ಮುಸ್ಲಿಂ ವಕ್ಫ್ ಆಸ್ತಿ ಭ್ರಷ್ಟಾಚಾರ ಮುಕ್ತಿ ಮಹಸಾಭಾ’ ರಚಿಸಲಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳಿಗೆ ಭೇಟಿ ನೀಡಿ ಮಹಾಸಭಾ ಜಾಗೃತಿ ಮೂಡಿಸುತ್ತಿದೆ. ಬೆಂಗಳೂರಿನಲ್ಲಿ ನಡೆಯುವ ಪ್ರತಿಭಟನೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಮರು ಭಾಗವಹಿಸಲಿದ್ದಾರೆ’ ಎಂದರು.
ಯಾವ ಜಿಲ್ಲೆಗಳಲ್ಲಿ ಆಸ್ತಿ ಪರಭಾರೆ ನಡೆದಿದೆಯೊ ಅಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಈಗಾಗಲೇ ಹಾವೇರಿ, ಬೆಂಗಳೂರು, ಗುಂಡ್ಲುಪೇಟೆ, ಚಿಕ್ಕಬಳ್ಳಾಪುರದಲ್ಲಿ ಭೂ ಒತ್ತುವರಿ ವಿರುದ್ಧ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ ಎಂದರು.
‘ರಾಜ್ಯದಲ್ಲಿ ವಕ್ಫ್ ಮಂಡಳಿಗೆ ಸೇರಿದ 55 ಸಾವಿರ ಎಕರೆ ಜಮೀನಿದೆ. ಅದರಲ್ಲಿ 30 ಸಾವಿರ ಎಕರೆ ಕಬಳಿಕೆಯಾಗಿದೆ. 20 ಸಾವಿರ ಎಕರೆ ವಕ್ಫ್ ಮಂಡಳಿಗೆ ನೋಂದಣಿಯೇ ಆಗಿಲ್ಲ. ಕಬಳಿಕೆಯಾದ ಆಸ್ತಿಯ ಮೌಲ್ಯವೇ ಸುಮಾರು ₹ 4 ಲಕ್ಷ ಕೋಟಿ’ ಎಂದರು.
1998ರಲ್ಲಿ ಸುಪ್ರೀಂ ಕೋರ್ಟ್ ‘ವಕ್ಫ್ ಮಂಡಳಿಗೆ ಸೇರಿದ ಆಸ್ತಿಯನ್ನು ಪರಭಾರೆ ಮಾಡುವಂತಿಲ್ಲ’ ಎಂದು ಮಹತ್ವದ ತೀರ್ಪು ನೀಡಿದೆ. ಬಳಿಕ 2013ರಲ್ಲಿ ಬಿಜೆಪಿ ಸರ್ಕಾರದ ಅಧಿಕಾರಾವಧಿಯಲ್ಲಿ ವಕ್ಫ್ ಆಸ್ತಿ ಒತ್ತುವರಿ ತೆರವಿಗೆ ಕಾರ್ಯಪಡೆ ರಚಿಸಲಾಗಿದೆ. ವಕ್ಫ್ ಆಸ್ತಿಯನ್ನು ಯಾರೂ ಕಬಳಿಕೆ ಮಾಡಲು ಸಾಧ್ಯವಿಲ್ಲ. ಮಂಡಳಿಗೆ ಮರಳಿಸಲೇಬೇಕು ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.