ADVERTISEMENT

ವಾಚಕರ ವಾಣಿ | ಮಳೆಹಾನಿ: ಎಚ್ಚರಿಕೆ ಸಾಕು, ಪರಿಹಾರ ಬೇಕು

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 20 ಮೇ 2022, 19:45 IST
Last Updated 20 ಮೇ 2022, 19:45 IST

ಬೆಂಗಳೂರಿನಲ್ಲಿ ಬೀಳುತ್ತಿರುವ ಮಳೆಯಿಂದ ಕೆಲವೆಡೆ ಮನೆಗೆ ನೀರು ನುಗ್ಗಿ ಹಾನಿಗೊಳಗಾಗಿರುವುದರಿಂದ, ಇದಕ್ಕೆ ಕಾರಣವಾದ ರಾಜಕಾಲುವೆ ಒತ್ತುವರಿಯನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುಡುಗಿದ್ದಾರೆ. ಈ ಸಂಬಂಧ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡುತ್ತಿರುವವರಲ್ಲಿ ಇಂದಿನ ಮುಖ್ಯಮಂತ್ರಿ ಮೊದಲಿಗರಲ್ಲ, ಪ್ರಾಯಶಃ ಕೊನೆಯವರೂ ಆಗಲಾರರು. ಕಳೆದ ಐದು ವರ್ಷಗಳಲ್ಲಿ ಅಧಿಕಾರ ನಡೆಸಿರುವ ಮಂತ್ರಿಗಳೆಲ್ಲರೂ ಹೀಗೆ ಗುಟುರು ಹಾಕಿದವರೇ. ಪರಿಣಾಮ ಮಾತ್ರ ಶೂನ್ಯ.

ಅವನಿ ಶೃಂಗೇರಿ ಮತ್ತು ರಾಜರಾಜೇಶ್ವರಿ ನಗರ ಪ್ರದೇಶದಲ್ಲಿ ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡು ನಿರ್ಮಿತವಾಗಿದ್ದ ಹಲವು ಕಟ್ಟಡಗಳನ್ನು ಈ ಮೊದಲು ರೋಷಾವೇಶದಿಂದ ನೆಲಸಮ ಮಾಡಿದ್ದ ಬಿಬಿಎಂಪಿ ಅಧಿಕಾರಿಗಳ ಶೌರ್ಯ, ರಾಜರಾಜೇಶ್ವರಿ ನಗರದಲ್ಲಿನ ಪ್ರಮುಖ ರಾಜಕಾರಣಿಗಳು, ಇತರ ಪ್ರಭಾವಿಗಳು, ಖ್ಯಾತನಾಮರ ಆಸ್ಪತ್ರೆ, ಮಾಲ್ ಮತ್ತು ಬಂಗಲೆಗಳನ್ನು ಕಂಡೊಡನೆ ಉಡುಗಿಹೋಗಿತ್ತು. ಅವನ್ನು ರಕ್ಷಿಸುವುದಕ್ಕಾಗಿಯೇ ಒತ್ತುವರಿಯ ಸರ್ವೆ ಸಮರ್ಪಕವಾಗಿ ಆಗಿಲ್ಲ, ಮರು ಸರ್ವೆ ನಡೆಸಬೇಕೆಂಬ ನೆಪವನ್ನು ಮುಂದಿಟ್ಟ ಕಾರಣ, ಆ ಕಟ್ಟಡಗಳು, ‘ಮುಟ್ಟಿ, ನೋಡೋಣ’ ಎಂಬಂತೆ ಇನ್ನೂ ತಲೆ ಎತ್ತಿ ಮೆರೆಯುತ್ತಿವೆ! ಪ್ರಭಾವಿಗಳಿಂದಾಗಲೀ ಇತರರಿಂದಾಗಲೀ ಆಗಿರುವ ರಾಜಕಾಲುವೆಗಳ ಒತ್ತುವರಿಯೆಲ್ಲವನ್ನೂ ನಿರ್ದಾಕ್ಷಿಣ್ಯವಾಗಿ ತೆರವು ಮಾಡಿದರೆ ಮತ್ತು ಮಳೆಗಾಲಕ್ಕೂ ಮುನ್ನವೇ ಚರಂಡಿ, ಮಳೆಗಾಲುವೆ ಮತ್ತು ರಾಜಕಾಲುವೆಗಳ ಹೂಳೆತ್ತಿದರೆ, ಮಳೆಯ ನೀರು ಸರಾಗವಾಗಿ ಹರಿದು ಹೋಗುತ್ತದೆ ಮತ್ತು ಮಳೆಗಾಲದಲ್ಲಿ ಜನರು ಸಂಕಷ್ಟಕ್ಕೊಳಗಾಗುವುದು ತಪ್ಪುತ್ತದೆ.

–ಸ್ವಾತಿ ಪಿ. ಗೌಡ, ಬೆಂಗಳೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.