ಪ್ರಥಮ ದರ್ಜೆ ಸಹಾಯಕರ (ಎಫ್.ಡಿ.ಎ) ಹುದ್ದೆಗಳಿಗೆ ನಡೆಯಬೇಕಾಗಿದ್ದ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವುದು, ಸಾಂವಿಧಾನಿಕ ಸಂಸ್ಥೆಯಾದ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ವೈಫಲ್ಯಗಳ ಸಾಲಿಗೆ ಮತ್ತೊಂದು ಸೇರ್ಪಡೆಯಾಗಿದೆ. ಹಾಗೇ ಅದನ್ನು ಪತ್ತೆ ಹಚ್ಚಿದ ಸಿಸಿಬಿ ಪೊಲೀಸರ ಕಾರ್ಯಕ್ಷಮತೆಯು ಅತ್ಯಂತ ಶ್ಲಾಘನೀಯ. ಹಲವಾರು ಬಾರಿ ಈ ರೀತಿ ಅಕ್ರಮಗಳು ಜರುಗಿ ಸಾವಿರಾರು ಪ್ರತಿಭಾವಂತ ನಿರುದ್ಯೋಗಿಗಳಿಗೆ ಅನ್ಯಾಯವಾಗುತ್ತಿರುವುದು ಇಂದಿನ ಸಮಾಜದ ಮತ್ತು ಆಡಳಿತ ಸಂಸ್ಥೆಗಳ ಅಧಃಪತನವೇ ಸರಿ.
2015ರಲ್ಲಿ ನಡೆದ ಎಫ್.ಡಿ.ಎ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದರ ವಿರುದ್ಧ ಪ್ರತಿಭಟನೆಗಳು ನಡೆದಿದ್ದವು. ಆದರೂ ಕೆಪಿಎಸ್ಸಿ ಮಾತ್ರ ಯಾವುದೇ ಪ್ರಶ್ನೆಪತ್ರಿಕೆ ಸೋರಿಕೆಯಾಗಿಲ್ಲ ಎಂಬ ತನ್ನ ಹಳೇ ವಾದವನ್ನೇ ಮಂಡಿಸಿ ಮರುಪರೀಕ್ಷೆ ನಡೆಸಲಿಲ್ಲ. ಈಗಿನ ಪ್ರಶ್ನೆಪತ್ರಿಕೆಗೆ ಸೋರಿಕೆಯ ಬಗ್ಗೆ ಸೂಕ್ತ ತನಿಖೆ ನಡೆಯಬೇಕು. ಲೋಕಸೇವಾ ಆಯೋಗದ ಘನತೆಯನ್ನು ಕಾಪಾಡುವ ಮತ್ತು ಅದರ ಬಗ್ಗೆ ಸಾರ್ವಜನಿಕರಲ್ಲಿ ಭರವಸೆ ಮೂಡಿಸುವ ಸಲುವಾಗಿ ಈ ಕಾರ್ಯ ಅತೀ ಜರೂರಾಗಿ ಆಗಬೇಕಾಗಿದೆ.
- ಸುರೇಶ್ ಎಸ್.,ಚಿಕ್ಕಾಟಿ, ಗುಂಡ್ಲುಪೇಟೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.