ಲಂಡನ್: ಧ್ಯಾನ ಮಾಡುವವರ ಮಿದುಳಿನಲ್ಲಿ ನಿರ್ದಿಷ್ಟ ಬದಲಾವಣೆ ಗಳು ಆಗುವುದರಿಂದ ಅವರು ಸಮಚಿತ್ತದಅನುಭೂತಿಯನ್ನು ಪಡೆಯುತ್ತಾರೆ ಎಂದು ಅಧ್ಯಯನವೊಂದು ತಿಳಿಸಿದ್ದು, ಧ್ಯಾನವೂ ಒಂದು ಚಿಕಿತ್ಸಾ ಮಾದರಿ ಎಂದು ಪ್ರತಿಪಾದಿಸಿದೆ.
ಇಟಲಿಯ ಲೂಕಾದ ‘ಐಎಂಟಿ ಸ್ಕೂಲ್ ಫಾರ್ ಅಡ್ವಾನ್ಸ್ಡ್ ಸ್ಟಡೀಸ್’ ಸಂಸ್ಥೆಯ ಸಂಶೋಧಕರ ಅಧ್ಯಯನ ವರದಿಯನ್ನು ‘ಬ್ರೈನ್ ಅಂಡ್ ಕಾಗ್ನಿಷನ್’ ನಿಯತಕಾಲಿಕೆ ಪ್ರಕಟಿಸಿದೆ. ತಮ್ಮ ಸಂಶೋಧನೆಗೆ ಬಳಸಿದ ಧ್ಯಾನದ ತಂತ್ರವನ್ನು ಸಂಶೋಧಕರು ‘ಅತೀಂದ್ರೀಯ ಧ್ಯಾನ’ (ಟಿಎಂ) ಎಂದು ಕರೆದಿದ್ದಾರೆ.
ಆರೋಗ್ಯಪೂರ್ಣ 34 ಮಂದಿ ಸ್ವಯಂಸೇವಕರನ್ನು ಎರಡು ಗುಂಪುಗಳಾಗಿ ವಿಭಜಿಸಿ ಅಧ್ಯಯನಕ್ಕೆ ಒಳಪಡಿಸಿದೆ. ನಿತ್ಯ 40 ನಿಮಿಷ ಧ್ಯಾನವನ್ನು ಮಾಡುವಂತೆ ಒಂದು ಗುಂಪಿಗೆ ಮಾತ್ರ ಸೂಚಿಸಿತ್ತು. ಇನ್ನೊಂದು ಗುಂಪನ್ನು ದಿನವಹಿ ಕಾರ್ಯಗಳನ್ನು ಮಾಡುವಂತೆ ಸ್ವತಂತ್ರವಾಗಿ ಬಿಡಲಾಗಿತ್ತು. ಎರಡೂ ಗುಂಪುಗಳಿಗೆ ಪ್ರಶ್ನೆಗಳನ್ನು ಕೇಳಿದಾಗ ಪ್ರತಿಕ್ರಿಯಿಸುತ್ತಿದ್ದ ರೀತಿ ವಿಭಿನ್ನವಾಗಿತ್ತು.
ಮೊದಲ ಗುಂಪಿನ ಸದಸ್ಯರು ಕೋಪ, ಆತಂಕ ಮತ್ತು ಒತ್ತಡಗಳಿಗೆ ಒಳಗಾಗದೇ ಸುಲಭವಾಗಿ ಉತ್ತರಿಸುತ್ತಿದ್ದರು. ಆದರೆ, ಎರಡನೇ ಗುಂಪು ಮಾನಸಿಕ ಒತ್ತಡಗಳಿಗೆ ಒಳಗಾಗುತ್ತಿತ್ತು ಎಂದು ವರದಿ ತಿಳಿಸಿದೆ.ಎಫ್ಎಂಆರ್ಐ (ಫಂಕ್ಶನಲ್ ಮ್ಯಾಗ್ನೆಟಿಕ್ ರೆಸೊನೆನ್ಸ್ ಇಮೇಜಿಂಗ್) ಮೂಲಕ ಎಲ್ಲರ ಮಿದುಳನ್ನು 3 ತಿಂಗಳ ಕಾಲ ತಪಾಸಣೆಗೆ ಒಳಪಡಿಸಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.