ADVERTISEMENT

ವಾರಾಣಸಿಯೇ ಹೆಚ್ಚು ಮಾಲಿನ್ಯ ನಗರ

ವಿಶ್ವ ಆರೋಗ್ಯ ಸಂಸ್ಥೆಯ 15 ನಗರಗಳ ಪಟ್ಟಿಯಲ್ಲಿ ಮೂರನೇ ಸ್ಥಾನ: ಕಾನ್ಪುರಕ್ಕೆ ಮೊದಲ ಸ್ಥಾನ

ಪಿಟಿಐ
Published 10 ಏಪ್ರಿಲ್ 2019, 17:47 IST
Last Updated 10 ಏಪ್ರಿಲ್ 2019, 17:47 IST
ಸ
   

ನವದೆಹಲಿ: ವಿಶ್ವದಲ್ಲೇ ಅತಿ ಹೆಚ್ಚು ಮಾಲಿನ್ಯಗೊಂಡಿರುವ 15 ನಗರಗಳ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಲೋಕಸಭಾ ಕ್ಷೇತ್ರದ ವಾರಾಣಸಿ ನಗರ ಮೂರನೇ ಸ್ಥಾನ ಪಡೆದಿದೆ.

ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ) ಈ ಪಟ್ಟಿಯನ್ನು ಸಿದ್ಧಪಡಿಸಿದೆ. ವಾರಾಣಸಿಯಲ್ಲಿ ಕಟ್ಟಡಗಳ ನಿರ್ಮಾಣ ಚಟುವಟಿಕೆಯನ್ನು ವ್ಯಾಪಕವಾಗಿ ಕೈಗೊಂಡಿರುವುದರಿಂದ ಉಸಿರಾಟ ಮತ್ತು ಅಲರ್ಜಿ ಸಮಸ್ಯೆಗಳಿಂದ ಬಳಲುತ್ತಿರುವ ನಾಗರಿಕರ ಸಂಖ್ಯೆ ಹೆಚ್ಚುತ್ತಿದೆ ಎಂದು ಡಬ್ಲ್ಯೂಎಚ್‌ಒ ವರದಿ ತಿಳಿಸಿದೆ.

ರಾಜ್ಯ ಸರ್ಕಾರ ಮತ್ತು ಸ್ಥಳೀಯ ಸಂಸ್ಥೆ ಮಾಲಿನ್ಯ ನಿಯಂತ್ರಣಕ್ಕೆ ಕೆಲವು ಕ್ರಮಗಳನ್ನು ಕೈಗೊಂಡಿವೆ. ಆದರೆ, ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಸಂಸದರು, ಸೌಂದರ್ಯ ಮತ್ತು ಮೂಲಸೌಕರ್ಯಕ್ಕೆ ಆದ್ಯತೆ ನೀಡಿದ್ದಾರೆ. ಇದರಿಂದ, ನಗರದಲ್ಲಿ ಕಳಪೆ ವಾಯುಗುಣಮಟ್ಟದ ಸಮಸ್ಯೆ ನಿವಾರಿಸಲು ಸಾಧ್ಯವಾಗಿಲ್ಲ ಎಂದು ಅದು ತಿಳಿಸಿದೆ.

ADVERTISEMENT

ಅತಿ ಹೆಚ್ಚು ಮಾಲಿನ್ಯಗೊಂಡಿರುವ ವಿಶ್ವದ 15 ನಗರಗಳಲ್ಲಿ ಭಾರತದ 14 ನಗರಗಳಿವೆ. ನಾಲ್ಕು ಉತ್ತರಪ್ರದೇಶಕ್ಕೆ ಸೇರಿವೆ. ಜಗತ್ತಿನಲ್ಲೇ ಕಾನ್ಪುರ ಅತಿ ಹೆಚ್ಚು ಮಾಲಿನ್ಯಗೊಂಡಿರುವ ನಗರವಾಗಿದ್ದು, ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ. ಕ್ರಮವಾಗಿ ಕಾನ್ಪುರ ಮತ್ತು ಲಖನೌ ಸಂಸದರು ಆಗಿರುವ ಗೃಹ ಸಚಿವ ರಾಜನಾಥ್‌ ಸಿಂಗ್‌ ಮತ್ತು ಹಿರಿಯ ಬಿಜೆಪಿ ನಾಯಕ ಮುರಳಿ ಮನೋಹರ ಜೋಶಿ ಅವರು ಮಾಲಿನ್ಯ ನಿಯಂತ್ರಣ ವಿಷಯದಲ್ಲಿ ಮೌನವಹಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಲಾಗಿದೆ. ಪಟ್ನಾ ಸಾಹೆಬ್‌ ಸಂಸದಶತ್ರುಘ್ನ ಸಿನ್ಹಾ ಅವರು ದೆಹಲಿಯಲ್ಲಿ ‘ಹೊಂಜು’ ರಾಜಕೀಯದ ಬಗ್ಗೆ ಹೆಚ್ಚು ಆಸಕ್ತಿವಹಿಸಿದ್ದಾರೆ ಎಂದು ವರದಿ ತಿಳಿಸಿದೆ.

ಗಂಭೀರ ಪರಿಸ್ಥಿತಿಗೆ ತಲುಪಿದ್ದ ನಗರಗಳು

ವಾರಾಣಸಿಯಲ್ಲಿನ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) 2017ರಲ್ಲಿ ಅಪಾಯಕಾರಿ ಮಟ್ಟವಾದ 490ಕ್ಕೆ ತಲುಪಿತ್ತು. 2018ರ ಡಿಸೆಂಬರ್‌ನಲ್ಲಿ 384 ಇತ್ತು.

ದೆಹಲಿಯಲ್ಲಿ ಎಕ್ಯೂಐ 448ಕ್ಕೆ ತಲುಪಿದೆ. ಕಟ್ಟಡ ನಿರ್ಮಾಣ, ತ್ಯಾಜ್ಯ ಸುಡುವುದು, ವಾಹನಗಳ ಮಾಲಿನ್ಯ ಮತ್ತು ಕೃಷಿ ತ್ಯಾಜ್ಯಗಳಿಗೆ ಬೆಂಕಿ ಹಚ್ಚುವುದರಿಂದ ದೆಹಲಿಯಲ್ಲಿ ಮಾಲಿನ್ಯ ಹೆಚ್ಚಾಗಿದೆ ಎಂದು ಡಬ್ಲ್ಯೂಎಚ್‌ಒ ವರದಿ ತಿಳಿಸಿದೆ.

ಜಗತ್ತಿನಲ್ಲೇ ಅತಿ ಹೆಚ್ಚು ಮಾಲಿನ್ಯಗೊಂಡಿರುವ ನಗರಗಳು

1.ಕಾನ್ಪುರ ,

2 ಫರಿದಾಬಾದ್‌ .

3. ವಾರಾಣಸಿ ,

4.ಗಯಾ ,

5.ಪಟ್ನಾ

6.ದೆಹಲಿ

7.ಲಖನೌ

8.ಆಗ್ರಾ

9. ಮುಜಾಫರ್‌ಪುರ

10.ಶ್ರೀನಗರ

11.ಗುರುಗ್ರಾಮ

12.ಜೈಪುರ

13.ಪಟಿಯಾಲ

14.ಜೋಧಪುರ

ಜನಪ್ರತಿನಿಧಿಗಳ ಸೋಮಾರಿತನವೇ ಕಾರಣ

ಡಬ್ಲ್ಯೂಎಚ್‌ಒ ಪಟ್ಟಿಯಲ್ಲಿ ದೆಹಲಿ ಆರನೇ ಸ್ಥಾನ ಪಡೆದಿದೆ. ವಾಯು ಮಾಲಿನ್ಯ ನಿಯಂತ್ರಿಸುವಲ್ಲಿ ದೆಹಲಿ ಜನಪ್ರತಿನಿಧಿಗಳ ಸೋಮಾರಿತನ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯವೇ ಮುಖ್ಯ ಕಾರಣ ಎಂದು ಹೇಳಿದೆ.ದೆಹಲಿಯಲ್ಲಿ ಏಳು ಸಂಸದರಿದ್ದಾರೆ ಮತ್ತು ಜನರಿಂದ ಆಯ್ಕೆಯಾದ ಸರ್ಕಾರವಿದೆ. ಆದರೂ, ಸರ್ಕಾರಿ ಸಂಸ್ಥೆಗಳು ಕ್ರಿಯಾಶೀಲವಾಗಿಲ್ಲ ಎಂದು ತಿಳಿಸಿದೆ. ಮಾಲಿನ್ಯ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳು ಮತ್ತು ಅಧಿಕಾರಿಗಳು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.