ADVERTISEMENT

ಕೃಷಿಯಲ್ಲಿ ಗೆದ್ದ ಗಟ್ಟಿಗಿತ್ತಿ

ಸಂತೋಷ್ ರಾವ್ ಪೆರ್ಮುಡ
Published 14 ಮೇ 2018, 19:30 IST
Last Updated 14 ಮೇ 2018, 19:30 IST
ಕೃಷಿ ಮಹಿಳೆ
ಕೃಷಿ ಮಹಿಳೆ   

ಹಳ್ಳಿಗಳೆಂದರೆ ವೃದ್ಧಾಶ್ರಮಗಳಾಗುತ್ತಿರುವ ಇಂದಿನ ದಿನಗಳಲ್ಲಿ ವಯಸ್ಸಾದವರಷ್ಟೇ ಕೃಷಿಯನ್ನು ನಿರ್ವಹಿಸುತ್ತಿದ್ದು, ಕೃಷಿಕರ ಮಕ್ಕಳೆಲ್ಲಾ ಸಣ್ಣ ಸಣ್ಣ ಉದ್ಯೋಗ ಅರಿಸಿ ಮಹಾನಗರಗಳ ಒಡಲು ಸೇರುತ್ತಿರುವುದು ಪರಿಪಾಠವಾಗಿದೆ. ಆದರೆ, ಅದಕ್ಕೆ ವ್ಯತಿರಿಕ್ತವಾಗಿ ಚಾಮರಾಜನಗರ ಜಿಲ್ಲೆಯ ಈ ಮಹಿಳೆ ಕೃಷಿಯಿಂದಲೇ ಬದುಕು ಕಟ್ಟಿಕೊಂಡಿದ್ದಾರೆ. ಅವರೇ ಗುಂಡ್ಲುಪೇಟೆ ತಾಲ್ಲೂಕಿನ ಹಕ್ಕಲಾಪುರ ಗ್ರಾಮದ ಮಹಾದೇವಮ್ಮ.

ಮಹಾದೇವಮ್ಮ ಅವರದು ಪತಿ, ಇಬ್ಬರು ಮಕ್ಕಳನ್ನು ಹೊಂದಿದ ಚಿಕ್ಕ ಕೃಷಿಕ ಕುಟುಂಬವಾಗಿದ್ದರೂ ದೈನಂದಿನ ಜೀವನ ನಿರ್ವಹಣೆಯೇ ಕಷ್ಟ ಸಾಧ್ಯವಾಗಿತ್ತು. ಹಾಗಾಗಿ ಜೀವನ ನಿರ್ವಹಣೆ ಹಾಗೂ ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ಮೀಟರ್ ಬಡ್ಡಿದಾರರಿಂದ ಸಾಲವನ್ನು ಪಡೆಯುವ ಪ್ರಮೇಯ ಬಂತು. ಸಾಲದ ಕಪಿಮುಷ್ಟಿಯಲ್ಲಿ ಸಿಲುಕಿ ಬಡ್ಡಿಯನ್ನೂ ಸಮರ್ಪಕವಾಗಿ ಪಾವತಿಸಲಾರದೆ ಸಂಪೂರ್ಣವಾಗಿ ಸೋತು ಹೋಗಿದ್ದರು. ಆಗ ಅವರಿಗೆ ಇದ್ದ ಏಕೈಕ ಆಶಾಕಿರಣವೆಂದರೆ ತನ್ನಲ್ಲಿದ್ದ ಕೃಷಿ ಜಮೀನಷ್ಟೆ.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನೆರವಿನಿಂದ ಆಸುಪಾಸಿನ ಹದಿನೈದು ಮಂದಿ ಸಮಾನ ಮನಸ್ಕ ಮಹಿಳೆಯರನ್ನು ಒಟ್ಟು ಸೇರಿಸಿ ಶ್ರೀ ಅನ್ನಪೂರ್ಣೇಶ್ವರಿ ಸ್ವಸಹಾಯ ಸಂಘವನ್ನು ರಚಿಸಿದ ಮಹಾದೇವಮ್ಮ ನಂತರ ಪ್ರಗತಿಪರ ಕೃಷಿಕರಾಗಿ ಬೆಳೆದರು.

ADVERTISEMENT

ಸ್ವಸಹಾಯ ಸಂಘವನ್ನು ರಚಿಸಿದ ನಂತರ ಸಂಘದ ಅಚ್ಚುಕಟ್ಟಾದ ವಾರದ ವ್ಯವಹಾರ ಪದ್ಧತಿ, ನಿರಂತರ ದುಡಿಮೆಯ ಮಹತ್ವ, ಬದ್ಧತೆ, ಹಿಡುವಳಿ ಯೋಜನೆ, ಸಾಲದ ಸಮರ್ಪಕ ಬಳಕೆ ಮತ್ತು ಕೃಷಿ ವಿಧಾನಗಳ ತರಬೇತಿಯಿಂದ ಪ್ರೇರಿತಗೊಂಡ ಅವರು ತಂಡದಿಂದ ಪ್ರಥಮ ಹಂತದಲ್ಲಿ ₹ 10 ಸಾವಿರ ಪ್ರಗತಿನಿಧಿಯನ್ನು ಪಡೆದುಕೊಂಡು, ಇದ್ದ ಅಲ್ಪ ಸ್ವಲ್ಪ ಕೃಷಿಯ ಪುನಶ್ಚೇತನಕ್ಕಾಗಿ ಗೊಬ್ಬರಕ್ಕಾಗಿ ವಿನಿಯೋಗಿಸಿದ್ದರು. ಅದರ ಪರಿಣಾಮ, ಅಳಿದುಳಿದ ಬೆಳೆ ದಕ್ಕಿತ್ತು.

ನಂತರದಲ್ಲಿ ಮಳೆಯೇ ಇಲ್ಲದ ಪ್ರದೇಶದಲ್ಲಿ ಕಡಿಮೆ ನೀರಿನ ಬಳಕೆಯೊಂದಿಗೆ ಸಮರ್ಪಕವಾಗಿ ಕೃಷಿಯನ್ನು ಮಾಡಬೇಕೆಂಬ ಹಂಬಲದಿಂದ ₹ 25 ಸಾವಿರ ಮೊತ್ತದ ದ್ವಿತೀಯ ಹಂತದ ಪ್ರಗತಿನಿಧಿಯನ್ನು ಪಡೆದುಕೊಳ್ಳುವ ಮೂಲಕ ಸಮಗ್ರ ಕೃಷಿ ಪದ್ಧತಿ ಹಾಗೂ ನೀರಾವರಿ ವಿಧಾನಗಳ ಕುರಿತು ತರಬೇತಿ ಪಡೆದುಕೊಂಡು ತಮ್ಮ ಜಮೀನಿನಲ್ಲಿ ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಂಡರು. ಅನಿಶ್ಚಿತ ಬೆಲೆಯಿಂದಾಗಿ ಕಂಟಕವಾಗಿದ್ದ ಏಕಬೆಳೆ ಪದ್ಧತಿ ಕೈಬಿಟ್ಟು ಸಮಗ್ರ ಕೃಷಿಯತ್ತ ಒಲವು ತೋರಿದರು.

ಸುಮಾರು ಒಂದು ಎಕರೆ ಜಮೀನಿನಲ್ಲಿ ಕಬ್ಬನ್ನು ಬೆಳೆದಿದ್ದು, ಎರಡು ವಿಶಾಲವಾದ ತೊಟ್ಟಿಗಳಲ್ಲಿ ಸಾವಯವ ಪದ್ಧತಿಯ ಅಜೋಲಾ (ಪಶುಆಹಾರ) ಘಟಕವನ್ನು ನಿರ್ಮಿಸಿದರು. ಇದರ ಜೊತೆಯಲ್ಲಿ ಹಲವಾರು ಉಪ ಬೆಳೆಗಳನ್ನೂ ಬೆಳೆದರು.

ಮೂರನೇ ಹಂತದಲ್ಲಿ ಸ್ವಸಹಾಯ ಸಂಘದಿಂದ ₹ 40 ಸಾವಿರ ಪ್ರಗತಿನಿಧಿಯನ್ನು ಪಡೆದುಕೊಂಡು ಕೃಷಿ ಜಮೀನಿನಲ್ಲಿ ನೀರಾವರಿಗಾಗಿ ಕೊಳವೆ ಬಾವಿಯನ್ನು ಹಾಕಿಸಿದರು. ಅದರ ಜೊತೆಗೆ ಮನೆಗೆ ಅವಶ್ಯವಿರುವ ಹಸಿರು ಇಂಧನ ವ್ಯವಸ್ಥೆಯಾದ ಗೋಬರ್ ಗ್ಯಾಸ್ ಘಟಕವನ್ನು ಅಳವಡಿಸಿದರು. ಬಡ್ಡಿ ವ್ಯವಹಾರಸ್ಥರಿಂದ ಮೀಟರ್ ಬಡ್ಡಿಗೆ ಪಡೆದುಕೊಂಡ ಸಾಲವನ್ನು ಹಂತ ಹಂತವಾಗಿ ಮರುಪಾವತಿಸುವ ಮೂಲಕ ಬಡ್ಡಿ ಸಾಲದಿಂದ ಮುಕ್ತಿಯನ್ನು ಪಡೆದರು. ಸಮಗ್ರ ಕೃಷಿಯ ಕಾರಣದಿಂದ ವೈವಿಧ್ಯಮಯ ಬೆಳೆಗಳನ್ನು ಬೆಳೆದು ಹೆಚ್ಚಿನ ಆದಾಯ ಪಡೆಯುತ್ತಿರುವ ಕಾರಣ ಅವರ ಆರ್ಥಿಕ ಸ್ಥಿತಿ ಉತ್ತಮಗೊಂಡಿದೆ.

ಪುರುಷರೇ ಕೃಷಿಕರಿರುವ ಇಂದಿನ ದಿನದಲ್ಲಿ ಕೃಷಿ ಮಾಡುವ ಮೂಲಕ ಎಲ್ಲರಿಗೂ ಮಾದರಿಯಾಗಿರುವ ಹಾಗೂ ಯಶಸ್ಸನ್ನು ಸಾಧಿಸಿರುವ ಮಹಾದೇವಮ್ಮ, ‘ತಾಲ್ಲೂಕಿನ ಪ್ರಗತಿಪರ ರೈತಮಹಿಳೆ ಪ್ರಶಸ್ತಿ ಪಡೆದಿದ್ದಾರೆ.

ಕೃಷಿಕ ಮಹಿಳೆಯಾಗಿಯಷ್ಟೇ ಗುರುತಿಸಿಕೊಳ್ಳದೆ ಯೋಜನೆಯಲ್ಲಿ ಗ್ರಾಮಮಟ್ಟದ ಸೇವಾಪ್ರತಿನಿಧಿಯಾಗಿಯೂ ಕರ್ತವ್ಯ ನಿರ್ವಹಿಸುವ ಮೂಲಕ ಕೃಷಿ, ಕೌಟುಂಬಿಕ ಹಾಗೂ ವೃತ್ತಿಜೀವನ ಈ ಮೂರನ್ನೂ ಸಮರ್ಪಕವಾಗಿ ಸರಿದೂಗಿಸಿಕೊಂಡು ಅಚ್ಚುಕಟ್ಟಾಗಿ ನಿರ್ವಹಿಸುತ್ತಿರುವುದು ಅವರ ಯಶಸ್ಸಿನ ಕೀಲಿಕೈ.

ಅಭಿವೃದ್ಧಿ ಎನ್ನುವುದು ಕೇವಲ ಇಷ್ಟಕ್ಕೇ ಸೀಮಿತವಾಗಿರದೆ ಇದೇ ವರ್ಷ ಮತ್ತೆ ಪ್ರಗತಿನಿಧಿಯನ್ನು ಪಡೆದುಕೊಂಡು ಸೋಲಾರ್ ದೀಪದ ವ್ಯವಸ್ಥೆ ಮಾಡಿರುವುದರಿಂದ ಮನೆ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಿದೆಯಲ್ಲದೆ, ಅಕ್ಕಪಕ್ಕದ ಮನೆಗಳ ಮಕ್ಕಳಿಗೂ ರಾತ್ರಿ ವೇಳೆ ಓದಲು, ಬರೆಯಲು ಈ ಕುಟುಂಬ ನೆರವು ನೀಡಿದೆ. ಯಶಸ್ವಿ ಕೃಷಿಕ ಮಹಿಳೆ ಹಾಗೂ ಗ್ರಾಮದ ಕುರಿತು ಕಾಳಜಿಯಿರುವ ಸಮಾಜಸೇವಕಿ ಎಂದು ಮಹಾದೇವಮ್ಮ ತಾಲ್ಲೂಕಿನಲ್ಲಿ ಹೆಸರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.