ಕಳೆದ ವಾರ ಕೃಷಿ ದರ್ಶನದಲ್ಲಿ ಪ್ರಕಟಗೊಂಡ ಬಹುಪಯೋಗಿ `ಕಾರ್ಚಿಕಾಯಿ' ಬೆಳೆಯನ್ನು ಬೆಳೆಯುವ ಕುರಿತಾಗಿ ಅನೇಕ ರೈತರು ಆಸಕ್ತಿ ವಹಿಸಿರುವ ಕಾರಣ, ಅವರಿಗಾಗಿ ಇನ್ನಷ್ಟು ಮಾಹಿತಿ ಇಲ್ಲಿದೆ...
ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳ, ಮಳೆಯಾಶ್ರಿತ ಕಪ್ಪು ಭೂಮಿಯಲ್ಲಿ ನೈಸರ್ಗಿಕವಾಗಿ ಬೆಳೆಯುವ ಕಾರ್ಚಿಕಾಯಿ ಬಳ್ಳಿಯ ಅಡಿಯಲ್ಲಿರುವ, ಆಲೂಗಡ್ಡೆ ಗಾತ್ರದ ಗಡ್ಡೆಯನ್ನೇ ಬಿತ್ತನೆಗೆ ಬಳಸಲಾಗುತ್ತದೆ.
ರೈತರು ಬಿತ್ತನೆ ವೇಳೆ ಕಾರ್ಚಿಕಾಯಿ ಬಳ್ಳಿಯನ್ನು ಬುಡಸಮೇತ ಕಿತ್ತು ಬದುವಿನಲ್ಲಿ ಎಸೆದರೂ ಮತ್ತೆ ಅಲ್ಲೇ ಚಿಗಿತು ಅಲ್ಲಲ್ಲಿ ಬೇರು ಬಿಡುತ್ತದೆ. ಆ ಬೇರುಗಳಿಗೆ ಅಂಟಿಕೊಂಡಂತೆಯೇ ಇರುವ ಗಡ್ಡೆಯೇ ಮಳೆ ಸುರಿದ ನಂತರ ಹೊಸದಾಗಿ ಮೊಳಕೆ ಒಡೆಯುತ್ತದೆ.
ತಮ್ಮ ಜಮೀನಿನಲ್ಲಿ ಕಾರ್ಚಿಕಾಯಿ ಬೆಳೆಯಲು ಬಯಸುವ ರೈತರು, ಬೇರೆ ಜಮೀನುಗಳಲ್ಲಿ ದೊರೆಯುವ ಈ ಗಡ್ಡೆಯನ್ನು ತಂದು ಎಸೆದರೂ ಸಾಕು ಅಲ್ಲೇ ಹುಟ್ಟಿಕೊಂಡು, ಎರಡರಿಂದ ಎರಡೂವರೆ ತಿಂಗಳಲ್ಲೇ ಕಾಯಿ ನೀಡುತ್ತದೆ.
ಗಡ್ಡೆಯನ್ನು ಹಸಿಯಾಗಿ ಇರಿಸುವ ಅಗತ್ಯವೂ ಇಲ್ಲ. ಒಣಗಿದ ಗಡ್ಡೆಯನ್ನೇ ಹೊಲದಲ್ಲಿ ಎಸೆದರೂ ಸಾಕು, ಮಳೆಗಾಲದಲ್ಲಿ ಮಣ್ಣಿನಲ್ಲಿನ ತೇವಾಂಶದ ಸಹಾಯದೊಂದಿಗೆ ಮೊಳಕೆ ಒಡೆದು, ನಾಲ್ಕು ದಿನಗಳಲ್ಲೇ ಹಚ್ಚಹಸಿರಿನಿಂದ ಕಂಗೊಳಿಸುವ ಚಿಕ್ಕ ಎಲೆಗಳ ಬಳ್ಳಿ ಹಬ್ಬುತ್ತ ಸಾಗುತ್ತದೆ.
ಒಂದು ಗಡ್ಡೆಯಲ್ಲೇ ಏಳೆಂಟು ಟಿಸಿಲೊಡೆದು ಹೊರಬರುವ ಬಳ್ಳಿಯನ್ನು ಬಹುತೇಕ ರೈತರು, `ಬೆಳೆಗೆ ಅಡ್ಡಿಪಡಿಸುವ ಕಳೆ' ಎಂದೇ ಭಾವಿಸಿ ಬೇರು ಸಮೇತ ಕಿತ್ತು ಎಸೆದರೂ ಮತ್ತೆಮತ್ತೆ ಬೆಳೆಯುತ್ತದೆ.
- ಸಿದ್ದು .
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.