ADVERTISEMENT

`ಮುರ್ರಾ'ದಿಂದಜೀವನ ಮನೋಹರ

ಹರವು ದೇವೇಗೌಡ
Published 18 ಮಾರ್ಚ್ 2013, 19:59 IST
Last Updated 18 ಮಾರ್ಚ್ 2013, 19:59 IST

ಹೈನುಗಾರಿಕೆಯಲ್ಲಿಯೂ ಪ್ರಯೋಗಶೀಲರಾಗಬಹುದು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ ಮಂಡ್ಯ ಜಿಲ್ಲೆ ಮೇಲುಕೋಟೆ ಬಳಿಯ ಕಜ್ಜಿಕೊಪ್ಪಲು ಎಂಬ ಪುಟ್ಟಗ್ರಾಮದ ಸತೀಶ್. ಹರಿಯಾಣ ಮೂಲದ `ಮುರ್ರಾ' ತಳಿಯ ಎಮ್ಮೆ ಕರು ತಂದು ಅವು ಕೂಡ ಇಲ್ಲಿಯ ವಾತಾವರಣಕ್ಕೆ ಹೊಂದಿಕೊಳ್ಳುತ್ತದೆ ಎನ್ನುವುದನ್ನು ಇವರು ತೋರಿಸಿಕೊಟ್ಟಿದ್ದಾರೆ. ಒಂದೂವರೆ ವರ್ಷದ ಹಿಂದೆ ಸಾಗಾಣಿಕೆ ವೆಚ್ಚ ಸೇರಿ ತಲಾ 20 ಸಾವಿರ ರೂಪಾಯಿಗಳಂತೆ ಏಳು ಎಮ್ಮೆ- ಕರು ತಂದಿದ್ದಾರೆ ಇವರು. ಇವುಗಳಲ್ಲಿ ಎರಡು ಎಮ್ಮೆಗಳು ಹೀಗಾಗಲೆ ಗರ್ಭ ಧರಿಸಿವೆ.

ಸೀಮೆ ಹಸುಗಳಿಗೆ ಹೋಲಿಸಿದರೆ `ಮುರ್ರಾ' ಹೆಚ್ಚಿನ ಹಾಲು ನೀಡುತ್ತದೆ ಎನ್ನುತ್ತಾರೆ ಇವರು. `ಮೊದಲು ಕರು ಹಾಕಿದಾಗ ಇದು 7 ರಿಂದ 10 ಲೀಟರ್ ಹಾಲು ಕೊಟ್ಟರೆ ಎರಡನೇ ಕರು ಹಾಕಿದಾಗ ಕೊಡುವ ಹಾಲಿನ ಪ್ರಮಾಣ ಜಾಸ್ತಿಯಾಗುತ್ತದೆ. ಇವುಗಳಿಗೆ ಆಹಾರ ಕಡಿಮೆ ನೀಡಿದರೂ ಪರವಾಗಿಲ್ಲ. ಅಷ್ಟೇ ಅಲ್ಲದೇ ಇವುಗಳಿಗೆ ಕೆಚ್ಚಲಬಾವು, ಸೋಂಕು ತಡೆಗಟ್ಟುವ ದೈಹಿಕ ಸಾಮರ್ಥ್ಯ ಕೂಡ ಇದೆ. ಇದರಿಂದಾಗಿ ಸೀಮೆ ಹಸುಗಳಿಗಿಂತ ಇದು ಹೆಚ್ಚಿನ ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ' ಎನ್ನುವುದು ಸತೀಶ್ ಅವರ ಮಾತು.

`ಸತೀಶ್ ಹಾಗೂ ನನ್ನ ಇನ್ನೊಬ್ಬ ಮಗ ಹೊಸ ಸಾಹಸಕ್ಕೆ ಕೈಹಾಕಿ ಕೈಸುಟ್ಟುಕೊಂಡಾರು ಎನ್ನುವ ಭಯವಿತ್ತು. ಇದರಿಂದ ತುಂಬಾ ಹೆದರಿದ್ದೆ. ಆದರೆ ಈಗ ಇಬ್ಬರೂ ಮಕ್ಕಳು ಇದರಲ್ಲಿ ಸಾಧನೆ ಮಾಡಿದ್ದಾರೆ' ಎಂದು ಚೆನ್ನಮ್ಮ  ಹೆಮ್ಮೆಯಿಂದ ನುಡಿಯುತ್ತಾರೆ. ಎಮ್ಮೆಯೊಂದಿಗೆ ಸುಮಾರು 10 ಹಸುಗಳೂ ಇವರಲ್ಲಿವೆ.

ಕಸಾಯಿ ಖಾನೆಗೆ ಮಾರಾಟವಾಗುತ್ತಿದ್ದ ಕರುಗಳನ್ನು ಕಳೆದ ವರ್ಷದಿಂದ ಕೊಂಡು ತಂದು ಸಾಕುತ್ತಿದ್ದಾರೆ. ಅವುಗಳು ಕರು ಹಾಕಿ ದಿನಕ್ಕೆ 50 ಲೀಟರ್ ಹಾಲು ಕೊಡುತ್ತಿವೆ. ರೈತರು ಹಿಂದೆಮುಂದೆ ಯೋಚಿಸದೆಯೇ ಕಸಾಯಿ ಖಾನೆಗೆ ಒಳ್ಳೆಯ ಹಸುಗಳನ್ನೂ ಹೇಗೆ ಮಾರಾಟ ಮಾಡುತ್ತಿದ್ದಾರೆ ಎನ್ನುವುದಕ್ಕೆ ಇದೇ ಉದಾಹರಣೆಯಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.