ADVERTISEMENT

ಲಾಭದಾಯಕ ಬೆಳೆ ಸೇವಂತಿಗೆ

ಸುಷ್ಮಾರಾಣಿ ಎಂ.
Published 12 ಅಕ್ಟೋಬರ್ 2011, 19:30 IST
Last Updated 12 ಅಕ್ಟೋಬರ್ 2011, 19:30 IST

ದೀಪಾವಳಿ ಹಬ್ಬ ಸಮೀಪಿಸುತ್ತಿದೆ.ಈಗ ಮಾರುಕಟ್ಟೆಯಲ್ಲಿ ಸೇವಂತಿಗೆ ಹೂವಿನ ಕಾರುಬಾರು. ಹೂಗಳಿಗೆ ಭಾರೀ ಬೇಡಿಕೆ. ಬೆಲೆಯೂ ಅಧಿಕ. ದೀಪಾವಳಿ ಹೊತ್ತಿಗೆ ಸೇವಂತಿಗೆ ಇನ್ನೂ ಬೇಡಿಕೆ ಹೆಚ್ಚುತ್ತದೆ.

 ಚಿತ್ರದುರ್ಗ ಜಿಲ್ಲೆಯ ಕೋವೇರಹಟ್ಟಿಯ ರೈತ ಗುರುಸ್ವಾಮಿ ಕಳೆದ ಹದಿನೈದು ವರ್ಷಗಳಿಂದ ಸೇವಂತಿಗೆ ಬೆಳೆಯುತ್ತಿದ್ದಾರೆ. ಪಚ್ಚೆ, ಚಾಂದಿನಿ, ಲಕ್ಕುಂಡಿ, ಬೆಳ್ಳಟ್ಟಿ ಹಾಗೂ ಬಿಳಿ ಇತ್ಯಾದಿ ತಳಿಗಳ ಸೇವಂತಿಗೆ ಬೆಳೆದ ಅನುಭವ ಅವರಿಗೆ ಇದೆ. ಅರ್ಧ ಎಕರೆಯಿಂದ ಹಿಡಿದು ಮೂರು ಎಕರೆ ಭೂಮಿಯಲ್ಲಿ ಅವರು ಸೇವಂತಿಗೆ ಬೆಳೆಯುತ್ತಾರೆ.
ಸೇವಂತಿಗೆ ಬೆಳೆಯಲ್ಲಿ ಭಾರೀ ಲಾಭವಿದೆ ಎಂಬುದು ಅವರ ಅನುಭವ.
ಅವರು ಮೊದಲು ಬಾಳೆ ಬೆಳೆಯುತ್ತಿದ್ದರು. ನಂತರ ಸೇವಂತಿಗೆ ಬೆಳೆಯಲು ಮುಂದಾದರು. ಈಗ ಎರಡು ಎಕರೆಯಲ್ಲಿ ಸೇವಂತಿಗೆ ಬೆಳೆದಿದ್ದಾರೆ.ಚಿತ್ರದುರ್ಗ, ದಾವಣಗೆರೆ, ಹಾಸನ ಹಾಗೂ ಬೆಂಗಳೂರಿನ ಯಶವಂತಪುರ ಮಾರುಕಟ್ಟೆಗಳಲ್ಲಿ ಸೇವಂತಿಗೆ ಹೂವಿಗೆ ಸದಾ ಬೇಡಿಕೆ ಇದೆ. ತೋಟಗಾರಿಕಾ ಇಲಾಖೆ ಹೂವಿನ ಬೆಳೆಗಾರರಿಗೆ ಸಬ್ಸಿಡಿ ನೀಡುತ್ತದೆ ಎನ್ನುವುದು ಅನೇಕ ರೈತರಿಗೆ ಗೊತ್ತಿಲ್ಲ.
ಗುರುಸ್ವಾಮಿ ಎರಡು ಸಲ ಸಬ್ಸಿಡಿ ಸಾಲ ಪಡೆದಿದ್ದಾರೆ.

 ನೀರಿನ ಸೌಕರ್ಯವಿದ್ದರೆ ಇಡೀ ವರ್ಷ ಸೇವಂತಿಗೆ ಬೆಳೆದು ಉತ್ತಮ ಆದಾಯ ಪಡೆಯಬಹುದು ಎನ್ನುವ ಗುರುಸ್ವಾಮಿ ಸಾವಯವ ಗೊಬ್ಬರ ಹಾಕಿ ಹೂ ಬೆಳೆಯುತ್ತಾರೆ. ಅಗತ್ಯ ಬಿದ್ದರೆ ರಾಸಾಯನಿಕ ಗೊಬ್ಬರ ಬಳಸುತ್ತಾರೆ. ಆದರೆ ಸೇವಂತಿಗೆ   ಕೊಟ್ಟಿಗೆ ಗೊಬ್ಬರ ಹೆಚ್ಚು ಸೂಕ್ತ ಎನ್ನುವುದು ಅವರ ಅನುಭವ.

ಹೂ ಬಿಡುವ ಸಮಯದಲ್ಲಿ ಬೆಳೆಗೆ ಶಿಲೀಂದ್ರಗಳು ಕಾಡುತ್ತವೆ. ಸುಗ್ಗಿಯಲ್ಲಿ ವಾರಕ್ಕೊಮ್ಮೆ ಕೀಟನಾಶಕ ಮತ್ತು ಶಿಲೀಂದ್ರನಾಶಕ ಸಿಂಪಡಿಸಿ ಹುಳು ಹಾಗೂ ಶಿಲೀಂದ್ರಗಳನ್ನು ನಿಯಂತ್ರಿಸುತ್ತಾರೆ. ಸೇವಂತಿಗೆ ನಡುವೆ ಮೆಣಸಿನಕಾಯಿ, ಬದನೆ, ಟೊಮೆಟೊ ಇತ್ಯಾದಿ ತರಕಾರಿಗಳನ್ನೂ ಗುರುಸ್ವಾಮಿ ಬೆಳೆಯುತ್ತಾರೆ.
ಗುರುಸ್ವಾಮಿ ಅವರ ಮೊಬೈಲ್ ನಂಬರ್ -9880057206.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.