ADVERTISEMENT

ಹಿನ್ನೀರ ಹೊಲಗಳಲ್ಲಿ ಬೆಳೆಯುವ ಸಾಹಸ

​ಪ್ರಜಾವಾಣಿ ವಾರ್ತೆ
Published 1 ಜೂನ್ 2011, 19:30 IST
Last Updated 1 ಜೂನ್ 2011, 19:30 IST
ಹಿನ್ನೀರ ಹೊಲಗಳಲ್ಲಿ ಬೆಳೆಯುವ ಸಾಹಸ
ಹಿನ್ನೀರ ಹೊಲಗಳಲ್ಲಿ ಬೆಳೆಯುವ ಸಾಹಸ   

ನಾರಾಯಣಪುರ ಜಲಾಶಯ ನೂರಾರು ಹಳ್ಳಿಗಳ ಸಾವಿರಾರು ಎಕರೆ ಫಲವತ್ತಾದ ಭೂಮಿಯನ್ನು ನುಂಗಿ ಹಾಕಿದ್ದು ಈಗ ಇತಿಹಾಸ. ಬೇಸಿಗೆಯಲ್ಲಿ ಜಲಾಶಯದಲ್ಲಿ ನೀರಿನ ಸಂಗ್ರಹ ಕಡಿಮೆಯಾದಂತೆಲ್ಲ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಧನ್ನೂರ, ಅಡಿಹಾಳ, ಎಮ್ಮೆಟ್ಟಿ, ಹುಲ್ಲಳ್ಳಿ, ಕೂಡಲಸಂಗಮದ ನೂರಾರು ರೈತರು ಜಲಾಶಯದ ಹಿನ್ನೀರಿನ ತೇವಾಂಶ ಬಳಸಿಕೊಂಡು ಅಲ್ಪಾವಧಿ ಬೆಳೆಗಳನ್ನು ಬೆಳೆಯುತ್ತಾರೆ.

ಫೆಬ್ರುವರಿ ತಿಂಗಳಿನಿಂದ ಜಲಾಶಯದಲ್ಲಿ ನೀರು ಕಡಿಮೆಯಾಗುತ್ತ ಹೋದಂತೆ ಹಿನ್ನೀರು ಪ್ರದೇಶ ತೆರವಾಗುತ್ತ ಹೋಗುತ್ತದೆ. ಈ ತೆರವಾದ ಭೂಮಿಯಲ್ಲಿ  ರೈತರು ಸೌತೆ, ಮೆಕ್ಕೆ ಜೋಳ, ಕರಬೂಜ, ಹೀರೆ, ಬೆಂಡೆ, ಚವಳಿ, ಪಾಲಕ, ಪುಂಡಿ ಬೀಜ ಬಿತ್ತನೆಗೆ ಸಜ್ಜಾಗುತ್ತಾರೆ. ವರ್ಷವಿಡೀ ನೀರುಂಡ ಹಸಿ ಮಣ್ಣಲ್ಲಿ ಬಿತ್ತನೆ ಮಾಡುತ್ತಾರೆ.

ನೀರು ಸರಿದಂತೆ ಹಂತ ಹಂತವಾಗಿ ಬಿತ್ತನೆ ಮಾಡುತ್ತ ಹೋಗುತ್ತಾರೆ. ಏಪ್ರಿಲ್ -ಮೇ ತಿಂಗಳಲ್ಲಿ ಸುಡುವ ಬಿಸಿಲಿದ್ದರೂ ಹಿನ್ನೀರು ದಂಡೆಯ ನೂರಾರು ಎಕರೆ ಭೂಮಿ ಹಸಿರು ಹೊದ್ದು ಕಂಗೊಳಿಸುತ್ತದೆ. ಎರಡೂವರೆ ತಿಂಗಳು ಈ ಅಲ್ಪಾವಧಿ ಬೆಳೆ ಬೆಳೆಯಲು ರೈತರು ಶ್ರಮವಹಿಸಿ ದುಡಿಯುತ್ತಾರೆ.
 
ಸೌತೆ ಮತ್ತಿತರ ತರಕಾರಿಗಳನ್ನು ವಿಂಗಡಿಸಿ ಹುನಗುಂದ, ಇಲಕಲ್ಲ, ಗುಡೂರ, ಕುಷ್ಟಗಿ, ಲಿಂಗಸುಗೂರ, ಸಿಂಧನೂರ, ಮುದ್ದೇಬಿಹಾಳ, ತಾಳಿಕೋಟಿ ಮುಂತಾದ ಊರುಗಳಿಗೆ ಒಯ್ದು ಮಾರಾಟ ಮಾಡುತ್ತಾರೆ. ಕಡಿಮೆ ಅವಧಿಯಲ್ಲಿ ಕಡಿಮೆ ಬಂಡವಾಳ ಹಾಕಿ ಹಗಲು-ರಾತ್ರಿ ದುಡಿದು ಹತ್ತಿಪ್ಪತ್ತು ಗುಂಟೆಯಲ್ಲಿ ಸಾವಿರಾರು ರೂ. ನಿವ್ವಳ ಆದಾಯ ಪಡೆಯುತ್ತಾರೆ.

ರೈತರ ಜಾಣ್ಮೆ ಹಾಗೂ ಶ್ರಮದ ದುಡಿಮೆ ಅನೇಕ ಜಲಾಶಯಗಳ ಹಿನ್ನೀರು ಪ್ರದೇಶಗಳ ರೈತರಿಗೆ ಮಾದರಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT