ADVERTISEMENT

ಹೊತ್ತು ತಂದ ನೀರಲ್ಲಿ ಬೆಳೆದರು ಮಲ್ಲಿಗೆಯಾ

ಸುಣಗಾರ ಮಂಜುನಾಥ
Published 24 ಸೆಪ್ಟೆಂಬರ್ 2012, 19:30 IST
Last Updated 24 ಸೆಪ್ಟೆಂಬರ್ 2012, 19:30 IST

ಮನೆಗೆ ನಲ್ಲಿಯಲ್ಲಿ ಬರುವ ಹತ್ತು ಕೊಡ ನೀರು ಹೊತ್ತು ತರುವುದೇ ಕಷ್ಟಕರವಾಗಿರುವ ಇಂದಿನ ದಿನಗಳಲ್ಲಿ ಸುಮಾರು 2 ಕಿ.ಮೀ. ದೂರದಿಂದ ನೀರು ಹೊತ್ತು ತಂದು ಮಲ್ಲಿಗೆ ಬೆಳೆಯುತ್ತಿರುವ ರೈತ ದಂಪತಿ ಇದ್ದಾರೆಂದರೆ ನಂಬ್ತಿರಾ?

ಹೌದು! ನಂಬಲೇ ಬೇಕು. ಬಳ್ಳಾರಿ ಜಿಲ್ಲೆ  ಹಗರಿಬೊಮ್ಮನಹಳ್ಳಿ ತಾಲ್ಲೂಕು ಕಡಲಬಾಳು ಗ್ರಾಮದ ಕಟ್ಟೆಪ್ಪನವರ ನಾಗಪ್ಪ, ಚಂದ್ರಮ್ಮ ಅವರೇ ಈ ಸಾಹಸಿ ದಂಪತಿಗಳು.
ಅವರದು ಫಲವತ್ತಾದ ಕೆಂಪು ಭೂಮಿ. ಬೆಳೆದು ಬದುಕೋಣವೆಂದರೆ ಕೊಳವೆ ಬಾವಿ ತೋಡಿಸಲು ಹಣವಿಲ್ಲ.

ಒಂದು ವೇಳೆ ಕಷ್ಟಪಟ್ಟು ಕೊಳವೆ ಬಾವಿ ಕೊರೆಸಿದರೂ ನೀರು ಸಿಕ್ಕೇ ಸಿಗುತ್ತದೆ ಎಂಬ ಖಾತರಿ ಏನಿಲ್ಲ. ಆಗೇನು ಮಾಡೋದು ಎಂಬ ಪ್ರಶ್ನೆ ಆ ಬಡ ರೈತ ದಂಪತಿಯನ್ನು ಕಾಡುತ್ತಿತ್ತು. ಅದಕ್ಕಾಗಿ ಅದೃಷ್ಟ ಪರೀಕ್ಷೆಯೇ ಬೇಡ ಎಂದುಕೊಂಡು ತಮ್ಮ ತಾಕತ್ತಿನ ಮೇಲೆ ನಂಬಿಕೆಯಿಟ್ಟು ಎಲ್ಲರೂ ಹಿಂಜರಿಯುವಂಥ ಸಾಹಸಕ್ಕೆ ಇಳಿದೇ ಬಿಟ್ಟರು.

ಇರುವ ಎರಡೂವರೆ ಎಕರೆ ಭೂಮಿಯ ಸ್ವಲ್ಪ ಭಾಗದಲ್ಲಿ 100 ಸೂಜಿಮಲ್ಲಿಗೆ ಸಸಿ ನೆಟ್ಟರು. ದಿನಾಲು ಬೆಳಗಿನ ಜಾವ ಪತ್ನಿ ಚಂದ್ರಮ್ಮ ಮತ್ತು ತನ್ನ ಐದು ಮಕ್ಕಳೊಂದಿಗೆ ಪ್ಲಾಸ್ಟಿಕ್ ಕೊಡ ತೆಗೆದುಕೊಂಡು ತಮ್ಮ ಹೊಲದಿಂದ ಸುಮಾರು 2 ಕಿ.ಮೀ. ದೂರವಿರುವ ಮುತ್ತಣ್ಣನ ತೋಟದಿಂದ ನೀರು ಹೊತ್ತು ತಂದು ಮಲ್ಲಿಗೆ ಗಿಡಗಳನ್ನು ಬೆಳೆಸುತ್ತ ಬಂದರು. ಇದು ಒಂದೆರಡು ದಿನದ ಕಾಯಕ ಅಲ್ಲ. ಬರೋಬ್ಬರಿ ನಾಲ್ಕು ವರ್ಷದಿಂದ ನಡೆದಿದೆ.

ಇವರ ಈ ಹುಚ್ಚು ಸಾಹಸವನ್ನು ನೋಡಿ ಆಡಿಕೊಂಡವರೆಲ್ಲ ಈಗ ಆಶ್ಚರ್ಯ ಪಡುವಂತಾಗಿದೆ. ಹೀಗೆ ಹೊತ್ತು ತಂದ ನೀರಿನಲ್ಲಿ ಮಲ್ಲಿಗೆ ಬೆಳೆಸಿ  ಹಂಗಾಮಿನಲ್ಲಿ 4 ರಿಂದ 6 ಕ್ವಿಂಟಲ್ ಹೂ ಬೆಳೆಯುತ್ತಿದ್ದಾರೆ.

`ನೋಡ್ರಿ ಸರ್. ನಾಕು ವರ್ಷದಿಂದ ನಾನು ಮಲ್ಗಿ ಬೆಳೆಯಾಕ್ಹತ್ತೀ ಮಗಳ ಮದ್ವಿ ಮಾಡೀನಿ, ಮಕ್ಳಿಗ ಆಟೋಈಟೋ ಓದ್ಸೀನಿ. ಸಣ್ದಾಗಿ ಒಂದು ಮನಿ ಕಟ್ಸಿನಿ. ಇದ್ರಾಗ ನಮ್ಮ ಹೊಟ್ಟಿ ಬಟ್ಟಿ ನಡಿಯಾಕ್ಹತೈತಿ~ ಎನ್ನುತ್ತಾರೆ ನಾಗಪ್ಪ. ಸಾಕಷ್ಟು ಭೂಮಿ, ನೀರೂ ಇದ್ದೂ ಹೊಲಗಳನ್ನು ಲಾವಣಿಗೆ ಹಾಕಿ ಕಟ್ಟೆ ಮೇಲೆ ಹುಲಿಮನಿ ಆಟ, ಕ್ಲಬ್‌ನಲ್ಲಿ ಇಸ್ಪೀಟ್ ಆಡಿ ರಾತ್ರಿ ಕಂಠಮಟ್ಟ ಕುಡಿದು ತೂರಾಡುತ್ತ ಮನೆಗೆ ಬರುವ ಕೆಲ ಸೋಮಾರಿ ರೈತರ ಮಧ್ಯೆ ನಾಗಪ್ಪನ ಜೀವನಪ್ರೀತಿ ವಿಶಿಷ್ಟವಾಗಿ ನಿಲ್ಲುತ್ತದೆ.

4 ವರ್ಷಗಳಿಂದ ನೀರು ಹೊತ್ತು ಬೆಂಡಾದ ನಾಗಪ್ಪ ಈಗ ಸ್ವತಃ ವಿಶಿಷ್ಟವಾದ ಹನಿ ನೀರಾವರಿ ಆರಂಭಿಸಿದ್ದಾರೆ. ಬಳಸಿ ಬಿಸಾಡಿದ 2 ಲೀಟರ್‌ನ ಮಿನರಲ್ ನೀರಿನ ಬಾಟಲಿಗಳನ್ನು ಪಟ್ಟಣದಿಂದ ಆಯ್ದು ತಂದು ಅವುಗಳಲ್ಲಿ ನೀರು ತುಂಬಿಸಿ ಸೇಫ್ಟಿ ಪಿನ್‌ನಿಂದ ಕೆಳಭಾಗದಲ್ಲಿ ಚಿಕ್ಕಚಿಕ್ಕ ರಂಧ್ರ ಮಾಡುತ್ತಾರೆ.

ಅದನ್ನು ಪ್ರತಿಯೊಂದು ಗಿಡದ ಬುಡದಲ್ಲಿಟ್ಟು, ನೇರವಾಗಿ ನೀರು ಬೇರುಗಳಿಗೆ ಹೋಗುವಂತೆ ಮಾಡಿ, ಗಿಡಗಳು ಹಚ್ಚಹಸಿರಾಗಿರುವಂತೆ ನೋಡಿಕೊಳ್ಳುತ್ತಾರೆ. ಹೀಗಾಗಿ ದಿನಂಪ್ರತಿ ನೂರು ಗಿಡಗಳಿಗೆ ನೀರು ಹೊತ್ತು ಹಾಕುವುದರ ಬದಲಾಗಿ ವಾರಕ್ಕೆರಡು ಬಾರಿ ಮಾತ್ರ ನೇರವಾಗಿ ಗಿಡಗಳಿಗೆ ನೀರು ಕೊಟ್ಟರೆ ಸಾಕು.
 
ಇನ್ನುಳಿದ ಐದು ದಿನದಲ್ಲಿ ಸ್ವಲ್ಪ ನೀರು ತಂದು ಬಾಟಲಿಗೆ ತುಂಬಿಸಿಡುತ್ತಾರೆ. ಇದರಿಂದ ನೀರು ಹೊತ್ತು ತರುವ ಶ್ರಮ ಕಡಿಮೆ ಮಾಡಿಕೊಂಡಿದ್ದಾರೆ. ಬೇರುಗಳೂ ತಂಪಾಗಿ ಇರುತ್ತವೆ, ಫಸಲೂ ಚೆನ್ನಾಗಿ ಬರುತ್ತದೆ.

ಮಳೆಗಾಲದಲ್ಲಿ ಹೊಲದ ಹತ್ತಿರವಿರುವ ಗೋಕಟ್ಟೆಯಲ್ಲಿ ನಿಂತ ನೀರನ್ನು ಗಿಡಕ್ಕೆ ಹಾಕುತ್ತಾರೆ. ಆ ನೀರು ಖಾಲಿಯಾದಲ್ಲಿ, ಅನತಿ ದೂರದ ಬಡಗಿ ದ್ಯಾಮಮ್ಮನ ವರ್ತಿಯಿಂದ ನೀರು ಮೊಗೆಮೊಗೆದು ತಂದು ಹಾಕಿ ಮಲ್ಲಿಗೆಯನ್ನು ಬದುಕಿಸಿಕೊಂಡಿದ್ದಾರೆ.

ಅದಕ್ಕೆ ಪ್ರತಿಫಲವಾಗಿ ಮಲ್ಲಿಗೆ ಬೆಳೆ ಸಹ ಇವರ ಬದುಕಿಸಿದೆ. ಈ ವರ್ಷ ಬರ ಬಿದ್ದು ಹೊತ್ತುಹಾಕುವ ನೀರು ಸಾಲದೇ ಈಗ ನೂರು ಸಸಿಗಳಲ್ಲಿ ಉಳಿದಿರುವುದು ಅರವತ್ತು ಸಸಿಗಳು ಮಾತ್ರ.

ಹೀಗೆ ಹೊಲದಲ್ಲಿ ಬೆಳೆದ ಮಲ್ಲಿಗೆಯನ್ನು ಕೂಲಿಕಾರ್ಮಿಕರ ನೆರವಿಲ್ಲದೆ, ನಾಗಪ್ಪ ತಮ್ಮ ಪತ್ನಿ ಮತ್ತು ಮಕ್ಕಳ ಸಹಾಯ ಪಡೆದು ಬೆಳಗಿನ ಜಾವದಲ್ಲಿ ಬಿಡಿಸುತ್ತಾರೆ. ಅದನ್ನು ತಾವೇ ಮಾಲೆ ಕಟ್ಟಿ ಹಗರಿಬೊಮ್ಮನಹಳ್ಳಿಯ ವಿವಿಧ ಬಡಾವಣೆಗಳಲ್ಲಿ ಹೊತ್ತು ಮಾರುತ್ತಾರೆ.

ಹೀಗೆ ಬೆಳೆಯ ಎಲ್ಲ ಹಂತದವರೆಗೂ ಇವರ ಕುಟುಂಬವೇ ಭಾಗಿಯಾಗುವುದರಿಂದ ಲಾಭಾಂಶವೂ ಇವರಿಗೇ ಸಿಗುತ್ತದೆ. ಇದ್ದುದರಲ್ಲಿಯೇ ಉತ್ತಮ ಜೀವನ ನಿರ್ವಹಣೆ ಸಾಧ್ಯವಾಗಿದೆ. ಕೆಲವೊಂದು ಸಲ ಮಲ್ಲಿಗೆ ಗಿಡದ ಸುತ್ತ ಜೋಳದ ಬೀಜ ಊರಿ ಬಂದ ಜೋಳವನ್ನು ಮನೆಯಲ್ಲಿ ಉಣ್ಣಲು ಬಳಸುತ್ತಾರೆ.

ದಲಿತ ಕುಟುಂಬಕ್ಕೆ ಸೇರಿದ ನಾಗಪ್ಪ ಗಂಗಾಕಲ್ಯಾಣ ಯೋಜನೆಯಡಿ ತನ್ನ ಹೊಲದಲ್ಲಿ ಕೊಳವೆ ಬಾವಿಗಾಗಿ ಅರ್ಜಿ ಗುಜರಾಯಿಸಿ ಸೋತು ಸುಣ್ಣವಾಗಿದ್ದಾರೆ. ಅರ್ಜಿ ಗತಿ ಏನಾಯ್ತು ಎಂದು ಕಚೇರಿ ಅಲೆದಾಡುವುದರ ಬದಲಾಗಿ ಅದೇ ಸಮಯದಲ್ಲಿ ಹೊಲಕ್ಕೆ ನಾಲ್ಕು ಕೊಡ ನೀರು ಹೆಚ್ಚಿಗೆ ಹಾಕಬಹುದು ಎಂಬ ಸತ್ಯ ಅರಿತಿದ್ದಾರೆ. ಅದನ್ನೇ ಪಾಲಿಸುತ್ತಿದ್ದಾರೆ. ಉಳಿದ ರೈತರಿಗೂ ಮಾದರಿಯಾಗಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.