ಸಂತೇಬೆನ್ನೂರು (ಚನ್ನಗಿರಿ ತಾ.): ಚನ್ನಗಿರಿ ತಾಲ್ಲೂಕಿನ ಹಲವೆಡೆ ಅಡಿಕೆಗೆ ವಿಚಿತ್ರ ರೋಗ ಕಂಡುಬಂದಿದ್ದು, ಇದೊಂದು ಕಾಂಡ ರಸ ಸೋರುವ ರೋಗ ಎಂದು ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಸಂಶಯ ವ್ಯಕ್ತಪಡಿಸಿದ್ದಾರೆ.
ಸಮೀಪದ ಭೀಮನೆರೆ ಗ್ರಾಮದ ರಂಗನಾಥ್ ಅವರ ಅಡಿಕೆ ತೋಟದಲ್ಲಿ ಮರದ ತುದಿಯ ಎಲೆಗಳು ಒಣಗು
ತ್ತಿವೆ. ಅಡಿಕೆ ಕುಂಚದಲ್ಲಿ ಕಾಯಿಗಳು ಉದುರುತ್ತಿವೆ. ಬುಡದ ಕಾಂಡದಲ್ಲಿ ಅಂಟಿ
ನಂತಹ ಬಿಳಿ ದ್ರವ ಒಸರುತ್ತಿದೆ. ಚಿಕ್ಕ ಚಿಕ್ಕ ರಂಧ್ರಗಳ ಮೂಲಕ ರಸ ಜಿನುಗುತ್ತಿರುವ ಭಾಗದಲ್ಲಿ ಮುಟ್ಟಿದರೆ ಮೆತ್ತಗಾದ ಅನುಭವವಾಗುತ್ತಿದೆ. ಗಡಸುತನ ಕಳೆದುಕೊಳ್ಳುವ ಭೀತಿ ಉಂಟಾಗಿದೆ.
‘ಫಸಲಿಗೆ ಬಂದ ನಾಲ್ಕೈದು ಮರಗಳಲ್ಲಿ ಈ ಲಕ್ಷಣ ಕಂಡುಬಂದಿದೆ. ಪಕ್ಕದ ಮರಗಳಿಗೂ ಹಬ್ಬುವ ಲಕ್ಷಣಗಳು ಕಾಣುತ್ತಿವೆ. 1,400 ಅಡಿಕೆ ಗಿಡಗಳು ಇದ್ದು, ಸಮಸ್ಯೆಯಾಗಿದೆ. ಈಗಾಗಲೇ ಗೇಣಿಗೆ ನೀಡಲಾಗಿದ್ದು. ಅಡಿಕೆ ಕೊಯ್ಲು ನಡೆಯುತ್ತಿದೆ. ತೋಟದಲ್ಲಿ ಏಕಾಏಕಿ ವಿಚಿತ್ರ ರೋಗದ ಲಕ್ಷಣ ಕಾಣಿಸಿಕೊಂಡಿರುವುದು ಭಯ ಉಂಟುಮಾಡಿದೆ’ ಎಂದು ರೈತ ರಂಗನಾಥ್ ತಿಳಿಸಿದ್ದಾರೆ.
‘ಕಾಂಡ ರಸ ಸೋರುವ ರೋಗ ಮಿತಿಮೀರಿದ ಕಳೆನಾಶಕ ಹಾಗೂ ರಾಸಾಯನಿಕ ಬಳಕೆಯಿಂದ ಬರುತ್ತದೆ. ಮಣ್ಣಿನಲ್ಲಿನ ಉಪಯುಕ್ತ ಬ್ಯಾಕ್ಟೀರಿಯಾ ನಾಶಗೊಳ್ಳುವುದರಿಂದ ರೋಗ ಉಲ್ಬಣಿಸುತ್ತದೆ. ಕಪ್ಪು ಮಣ್ಣಿನಲ್ಲಿ ಹೆಚ್ಚಾಗಿ ಕಂಡುಬರುವುದರಿಂದ ಮಣ್ಣಿನ ನಿರ್ವಹಣೆ ಮೂಲಕ ರೋಗ ನಿವಾರಿಸಬಹುದು’ ಎಂದು ಚನ್ನಗಿರಿಯ ಹಿರಿಯ ತೋಟ
ಗಾರಿಕಾ ಅಧಿಕಾರಿ ರೋಹಿತ್ ಸಲಹೆ ನೀಡಿದರು. ಈ ರೋಗಕ್ಕೆ 2 ಎಂ.ಎಲ್ ಎಕ್ಸಾಕೊನೊಜೋಲ್ ಅನ್ನು ಪ್ರತಿ ಲೀಟರ್ ನೀರಿಗೆ ಮಿಶ್ರಣ ಮಾಡಿ ಒಂದು ಗಿಡದ ಬುಡಕ್ಕೆ 5 ಲೀಟರ್ ಹಾಕಬೇಕು. ಟ್ರೈಕೊಡರ್ಮಾ, ಸುಡೊಮಾನಸ್, ವ್ಯಾಮ್ ಇತ್ಯಾದಿ ಜೈವಿಕ ರೋಗ ನಿಯಂತ್ರಕಗಳನ್ನು ಬಳಸಬೇಕು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.