ADVERTISEMENT

ಧಾನ್ಯ ಶುದ್ಧೀಕರಿಸುವ ಸರಳಯಂತ್ರ

ವಿನೋದ ಪಾಟೀಲ
Published 12 ನವೆಂಬರ್ 2018, 19:30 IST
Last Updated 12 ನವೆಂಬರ್ 2018, 19:30 IST
 ಧಾನ್ಯ ಸಂಸ್ಕರಣೆ ಯಂತ್ರ
ಧಾನ್ಯ ಸಂಸ್ಕರಣೆ ಯಂತ್ರ   

ಕೂಲಿ ಕಾರ್ಮಿಕರ ಸಮಸ್ಯೆ, ಜಾನುವಾರುಗಳ ಕೊರತೆಯಿಂದಾಗಿ ಕೃಷಿ ಕ್ಷೇತ್ರದಲ್ಲಿ ಕಣ ಸಂಸ್ಕೃತಿ ಕಾಣೆಯಾಗುತ್ತಿದೆ. ರೈತರು ಧಾನ್ಯ ಸಂಸ್ಕರಣೆಗಾಗಿ ಯಂತ್ರಗಳತ್ತ ಮೊರೆ ಹೋಗುತ್ತಿದ್ದಾರೆ. ಇದರಿಂದಾಗಿ ಸಮಯ ಹಾಗೂ ಶ್ರಮ ಉಳಿಯುತ್ತಿದೆ. ವೆಚ್ಚ ಕಡಿಮೆಯಾಗುತ್ತಿದೆ.

ಇತ್ತೀಚೆಗೆ ಧಾರವಾಡದಲ್ಲಿ ನಡೆದ ಕೃಷಿ ಮೇಳದಲ್ಲಿಟ್ಟಿದ್ದ ಧಾನ್ಯಗಳನ್ನು ಶುದ್ಧೀಕರಿಸುವ ಯಂತ್ರವೊಂದು ರೈತರ ಗಮನ ಸೆಳೆಯಿತು. ಅದು ಹಿರೇಬಾಗೇವಾಡಿಯ ಶಿವಶಕ್ತಿ ಅಗ್ರಿ ಎಕ್ವಿಪ್ ಮೆಂಟ್ ಕೇಂದ್ರದಲ್ಲಿ ತಯಾರಾಗಿದ್ದು. ಗುಂಡ್ಯಾನಟ್ಟಿ ಗ್ರಾಮದ ಕೃಷಿಕ ಶಂಕರ ಲಂಗಟಿ, ಈ ಸಾಧನದ ಬಗ್ಗೆ ಆಸಕ್ತಿ ತೋರಿದ್ದಲ್ಲದೇ, ಹಣ ಕೊಟ್ಟು ಖರೀದಿಸಿದರು.

ಹೀಗಿದೆ ಆ ಸಾಧನ

ADVERTISEMENT

ಲಾಳಿಕೆಯ ಆಕಾರದಲ್ಲಿರುವ ಈ ಸಾಧನ 7 ಅಡಿ ಎತ್ತರ ಹಾಗೂ 3 ಅಡಿ ಅಗಲವಿದೆ. ಐದು ಲಾಳಿಕೆಗಳನ್ನು ಹಂತ ಹಂತವಾಗಿ ಜೋಡಿಸಿದ್ದಾರೆ. ಮೇಲಿನ ಲಾಳಿಕೆಯಲ್ಲೂ ಲಾಕ್ ಇದ್ದು ಅದನ್ನು ನಮಗೆ ಬೇಕಾದಾಗ ಸರಿಸಿಕೊಳ್ಳಬಹುದು. ತೆನೆಯಿಂದ ಬೇರ್ಪಡಿಸಿದ ಕಾಳುಗಳನ್ನು (ದುಂಡನೆಯ ಆಕಾರದ್ದವು) ಮೊದಲನೆಯ ಲಾಳಿಕೆಯಲ್ಲಿ ಸುರಿದು, ಲಾಕ್ ತೆರೆದಾಗ ಧಾನ್ಯ ಐದು ಹಂತದಲ್ಲಿ ಸುತ್ತುತ್ತಾ ಬಂದು ಒಂದು ಕಡೆ ಜೊಳ್ಳು ಹಾಗೂ ಇನ್ನೊಂದು ಕಡೆ ಗಟ್ಟಿಯಾದ ಶುದ್ಧಕಾಳುಗಳು ಸಂಗ್ರಹವಾಗುತ್ತದೆ.
ಗುಂಡನೆ ಆಕಾರದ ಧಾನ್ಯಗಳಾದ ಸೋಯಾ, ಜೋಳ, ಕಡಲೆಯಂತಹ ಕಾಳುಗಳನ್ನು ಈ ಉಪಕರಣದಿಂದ ಸ್ವಚ್ಛ ಮಾಡಬಹುದಾಗಿದೆ.

ದುಂಡನೆಯ ಹಾಗೂ ತೂಕವಿರುವ ಧಾನ್ಯಗಳು ವೇಗವಾಗಿ ಒಂದು ನಳಿಕೆಯಲ್ಲಿ ಸುರಿದರೆ ಕಸ–ಕಡ್ಡಿ, ಜೊಳ್ಳುನಂತಹವು ಇನ್ನೊಂದು ನಳಿಕೆಯಲ್ಲಿ ಹೊರ ಹೋಗುತ್ತವೆ. ವಿದ್ಯುತ್ ಸಹಾಯವಿಲ್ಲದೆ ಈ ಯಂತ್ರ ಕೆಲಸ ಮಾಡುತ್ತದೆ.

ಒಂದು ಗಂಟೆಗೆ ಸುಮಾರು 20 ಕ್ವಿಂಟಾಲ್ ಧಾನ್ಯವನ್ನು ಶುದ್ಧೀಕರಿಸುವ ಸಾಮರ್ಥ್ಯ ಹೊಂದಿದೆ. ಗ್ಯಾಲೆನಿಯಸ್ ಪತ್ರದಿಂದ ಮಾಡಿದದ್ದರಿಂದ ತುಕ್ಕು ಹಿಡಿಯುದಿಲ್ಲ. ಸರಿಯಾಗಿ ನಿರ್ವಹಣೆ ಮಾಡಿದರೆ ದೀರ್ಘಕಾಲದವರೆಗೂ ಇದನ್ನು ಬಳಸಬಹುದಾಗಿದೆ ಎನ್ನುತ್ತಾರೆ ಯಂತ್ರ ತಯಾರಕರು. ಇಬ್ಬರು ವ್ಯಕ್ತಿಗಳಿದ್ದರೆ ಈ ಸಾಧನ ಬಳಸಿ ಕಡಿಮೆ ಶ್ರಮದಲ್ಲಿ ಶುದ್ಧೀಕರಿಸಿದ ಧಾನ್ಯಗಳನ್ನು ನೇರವಾಗಿ ಮಾರುಕಟ್ಟೆಗೆ ಕಳಿಸಬಹುದು.

‘ಈ ಯಂತ್ರದಿಂದ ನಮ್ಮ ಶ್ರಮ ಕಡಿಮೆಯಾಗಿದೆ. ಅರ್ಧದಷ್ಟು ಕೆಲಸ ಕಡಿಮೆಯಾಗಿದೆ.ಸಮಯವೂ ಉಳಿತಾಯವಾಗಿದೆ. ಶುದ್ಧವಾದ ಉತ್ಪನ್ನಗಳನ್ನು ಪ್ಯಾಕಿಂಗ್ ಮಾಡಿ ಮಾರುಕಟ್ಟೆಗೆ ಕಳುಹಿಸುವಲ್ಲಿ ಸಹಕಾರಿಯಾಗಿದೆ’ ಎನ್ನುತ್ತಾರೆ ಕೃಷಿಕ ಶಂಕರ ಲಂಗಟಿ. ಯಂತ್ರದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸಂಜಯ ಗಣಾಚಾರಿ ಮೊಬೈಲ್ ಸಂಖ್ಯೆ 7975856492 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.