ADVERTISEMENT

ಅಟ್ಟ ಹತ್ತಿದವನಿಗಾದ ಜ್ಞಾನೋದಯ

ಕವಿತೆ

ಎನ್.ಸಿ.ಮಹೇಶ್
Published 9 ಫೆಬ್ರುವರಿ 2013, 19:59 IST
Last Updated 9 ಫೆಬ್ರುವರಿ 2013, 19:59 IST
ಅಟ್ಟ  ಹತ್ತಿದವನಿಗಾದ ಜ್ಞಾನೋದಯ
ಅಟ್ಟ ಹತ್ತಿದವನಿಗಾದ ಜ್ಞಾನೋದಯ   

ಅಟ್ಟ ಹತ್ತುವವನ ಬೆನ್ನ ಹಿಂದೆ
ನೂರು ಮತ್ಸರಗಳ ಚಿಗುರೊಡೆವ ಬೊಂಬೆಗಳು

ಗಾಡುಫಾದರುಗಳು ಹೆಗಲ ಮೇಲೆ ಹೊತ್ತು
ಒಮ್ಮೆಗೇ ಅಟ್ಟ ಹತ್ತಿಸಿದರೊ
ಅಥವಾ
ಒಂದೊಂದೇ ಮೆಟ್ಟಿಲುಗಳ
ಏಣಿ ಹಾಕಿ ಹತ್ತಿಸಿದರೊ
ಎಂಬ ಗುಟ್ಟು ಒಡೆಯುವುದೇ ಇಲ್ಲಿ ಕೆಲಸ

ಕಾಲದಿಂದ ತಮ್ಮ ಏಣಿಗೆ
ಇದೊಂದೇ ಮೆಟ್ಟಿಲು ಎಂದು
ಮೇಲೆ ಅಟ್ಟಕ್ಕೆ ದೃಷ್ಟಿ ನೆಟ್ಟು
ಕತ್ತು ನೋಯಿಸಿಕೊಳ್ಳುತ್ತಾರೆ.

ADVERTISEMENT

ಅಟ್ಟದ ಸಮೀಪಕ್ಕೆ ಹತ್ತಿದವರಿಗೂ
ಕೋರ್ಟಿನ ಕಡೆ ಮುಖ ಮಾಡೇ ಮಲಗಿಸುವ
ಸಂಚು ಮಾಡುತ್ತಾರೆ.

ಒಬ್ಬರ ಮುಖ ಕಂಡರೆ ಒಬ್ಬರಿಗಾಗದೆ
ಅಟ್ಟ ಹತ್ತಿ ಬಂದು
ಹಲವರ ಜಾತಕಗಳ ಬಿಚ್ಚಿಟ್ಟು
ಕಾಲೆಳೆವ ಆಟದ ಪಟ ಮಾಡಿಕೊಂಡು
ದಾಳ ಕೈಲಿ ಹಿಡಿದು
ಸ್ಫೋಟಕ್ಕೆ ಕಾದ ಸಿಡಿಗುಂಡುಗಳ
ಎದೆಯ ಗೂಡಲ್ಲಿ ಕೂಡಿಟ್ಟು
ಎತ್ತಿ ಒಗೆಯುವುದಕ್ಕೆ ಸಮಯ ಕಾಯುತ್ತಾರೆ.

ಮೋಡಗಳಾಚೆಗಿನ ದೇವತಾರೂಪಿಗಳಿಗೆ
ಕಣ್ಣಿದ್ದರೂ ಅಹವಾಲುಗಳಿಗೆ ಕಿವುಡು.

ಸಲಾಮುಗಳಿಗೆ ಕೊಂಚ ಸುಪ್ರೀತವಾದರೂ
ಹೋಮಕುಂಡಗಳೆದುರು ಕೂತು
ಚಾಡಿ ಮಂತ್ರಗಳ ಉರಿಸಿ
ಹವಿಸ್ಸು ಕೊಡುವವರೇ ಇವರಿಗೆ ಇಷ್ಟ.
ತಥಾಸ್ತು ಎನ್ನುವ ಮಾತು ಬೇರೆ...

ಫೈಲುಗಳ ಹಾಳೆ ತಿರುವಿದಂತೆ
ಇಲ್ಲಿ ಒಬ್ಬೊಬ್ಬರ ಮನಸುಗಳನೂ
ತಿರುವಿ ಓದಬೇಕು.

ಗಾಳಿಯಲಿ ತೇಲಿಸಿ
ಗುರಿಮುಟ್ಟಿಸುವ ಸಂದೇಶಗಳ ತಿಳಿದು
ಪ್ರತಿತಂತ್ರ ಹೆಣೆಯಬೇಕು.

ಅಲುಗಾಡುವ ಅಟ್ಟ, ಕುರ್ಚಿಯ ಮೇಲೇ
ಸ್ಥಿರವಾಗಿ ಕೂರುವುದ ಕಲಿಯಬೇಕು.

ಬಲೆ ಹೆಣೆವ ಜೇಡವನು
ಅದೇ ಬಲೆಯಲಿ ಸಿಕ್ಕಿಸಬೇಕು.

ಹೋಮ ಮಾಡುವವರ ಜೊತೆಗೇ ಇದ್ದು
ಬಿಸಿ ತಟ್ಟದಂತೆ ತಣ್ಣಗಿದ್ದು
ಕುರ್ಚಿ ಅಲುಗಿಸುವ ಕೈಗಳು ದಣಿವವರೆಗೂ
ಕೈಲಿ ಸುತ್ತಿಗೆ ಮೊಳೆ ಹಿಡಿದೇ ಇರಬೇಕು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.