ADVERTISEMENT

ಓದುಗರ ಪತ್ರ: ಧಾರ್ಮಿಕ ಮತ್ತು ವೈಚಾರಿಕತೆಯ ಸಂಗಮ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2011, 19:30 IST
Last Updated 3 ಸೆಪ್ಟೆಂಬರ್ 2011, 19:30 IST

ಆ.21ರ ಸಾಪ್ತಾಹಿಕ ಪುರವಣಿ ಮುಸ್ಲಿಮರ ಹಬ್ಬದ ಚಿತ್ತಾರದಂತೆ ಮೂಡಿಬಂದಿದೆ. ಬಿ.ಎಂ.ಹನೀಫ್ ಅವರ `ಅಲ್ಲಾಹು ಅಕ್ಬರ್~ ಉತ್ತಮ ಲೇಖನ. ಮುಸ್ಲಿಂ ಬಾಂಧವರ ಹಬ್ಬದ ಉದ್ದೇಶ ಮತ್ತು ಆಚರಣೆಯ ವಿಧಾನವನ್ನು ಸಾಕಷ್ಟು ತಿಳಿಸಿತು. ಆದರೆ ಉಪವಾಸ ಏಕೆ ಮಾಡಬೇಕು ಎಂಬುದನ್ನು ಇನ್ನೂ ವಿವರವಾಗಿ ತಿಳಿಸಬೇಕಿತ್ತು.

`ಬೇಕಿರುವುದು ಬಳ್ಳಿಗಳು, ಬಾವುಟಗಳಲ್ಲ~ ಲೇಖನದಲ್ಲಿ ರಹಮತ್ ತರೀಕೆರೆಯವರು ಹಂಪಿಯ ಕಟ್ಟಿಗೆಖಾನ ಮಸೀದಿಯಲ್ಲಿರುವ ಕನ್ನಡ ಶಾಸನ ಮತ್ತು ಪಾವಜೀ ಅವರ ಕೈಬರಹವನ್ನು ಚಿತ್ರ ಸಹಿತ ಮಾಹಿತಿ ನೀಡಿದ್ದಾರೆ.
 ಬಿ.ಎಸ್.ಮುಳ್ಳೂರ, ಹಲಗತ್ತಿ

ಲೇಖನ ರಂಜಾನ್ ಹಬ್ಬದ ಆಚರಣೆಯ ವಿಶಿಷ್ಟತೆಯನ್ನು ಎಳೆಎಳೆಯಾಗಿ ತೆರೆದಿಟ್ಟಿತು. ಇದು ವಿವಿಧತೆಯಲ್ಲಿ ಏಕತೆಯನ್ನು ಸಾರುವ ರಾಷ್ಟ್ರೀಯ ಭಾವೈಕ್ಯತೆ ಮೂಡಿಸುವ ಹಬ್ಬವಾಗಿದೆ.
 ಕೆ.ವಿ.ಶಿವಕುಮಾರ್, ಕಾಳೀಹುಂಡಿ

ರಂಜಾನ್ ಮಾಸದ ಉಪವಾಸದ ವ್ರತಗಳು ಧಾರ್ಮಿಕ ಮತ್ತು ವೈಚಾರಿಕತೆಯ ಸಂಗಮದಂತಿದೆ. ದೇಹವನ್ನು ಶುದ್ಧಗೊಳಿಸುವ ಸಾಧನ ಉಪವಾಸ. ಅದು ತಾಳ್ಮೆಯ ಅರ್ಧಾಂಶವಾಗಿದೆ ಎನ್ನುವ ಸಾಲುಗಳು ವೈಚಾರಿಕತೆಯಲ್ಲಿ ಆರೋಗ್ಯದ ಪಾಠದಂತಿದೆ.

ಶಮ್ಮಿಕಪೂರ್ ಎಂಬ ಕನಸುಗಾರನ ಬದುಕನ್ನು `ಜಂಗ್ಲಿಯಾನ~ ಲೇಖನದಲ್ಲಿ ಆರ್.ಪೂರ್ಣಿಮಾ ಸುಂದರವಾಗಿ ಚಿತ್ರಿಸಿದ್ದಾರೆ.
 ಎಚ್.ಆನಂದ್ ಕುಮಾರ್, ಚಿತ್ರದುರ್ಗ

ಜಂಗ್ಲಿಯಾನ ಲೇಖನ ಶಮ್ಮಿಕಪೂರನ ವಿಶಿಷ್ಟಪೂರ್ಣ ಅಭಿನಯ ಮತ್ತು ನೈಜ ಬದುಕಿನ ಪರಿಚಯ ಮಾಡಿಕೊಟ್ಟಿತು. ಅದೇ ಕಾಲಘಟ್ಟದವನಾದ ನಾನು ಅವರ ಚಿತ್ರದ ಎಲ್ಲಾ ಹಾಡುಗಳನ್ನೂ ಕೇಳಿ ಆನಂದಿಸಿದವನು. ದೇಶೀ ಪ್ರೇಮವನ್ನು ವಿದೇಶಿ ಪ್ರಣಯವಾಗಿ ಪರಿವರ್ತಿಸಿದ ಶಮ್ಮಿ ಮೂಕಿಯಾಗಿದ್ದ ಪ್ರೇಮವನ್ನು ಟಾಕಿಯಾಗಿ ಮಾಡಿದರು. ಅವರ ಸಿನಿಮಾ ಯಾನವನ್ನು ಆಕರ್ಷಕ ಪದಪುಂಜಗಳಿಂದ ಬಣ್ಣಿಸಿದ ಲೇಖಕಿಗೆ ಧನ್ಯವಾದಗಳು.
 ಜಯವಂತ ಕಾಡದೇವರ, ಬನಹಟ್ಟಿ

`ನಿಸರ್ಗದ ಕುಸುರಿ ಯೊಸೆಮಿಟಿ~ (ಸಾ.ಪು.ಆ.21) ಲೇಖನದಲ್ಲಿ ಎ.ಎಸ್‌ನಾರಾಯಣರಾವ್ ಅವರು ಸ್ಥೂಲವಾಗಿದ್ದರೂ ವರ್ಣರಂಜಿತವಾಗಿ ವಿವರಿಸಿದ್ದಾರೆ. ಪ್ರಕೃತಿ ಕೆತ್ತನೆಯ ಕಣಿವೆಗಳ ನಡುವೆ ಅವಿತಿರುವ ಈ ನಯನ ಮನೋಹರ ಸ್ಥಳವನ್ನು ಕಣ್ಣಿಗೆ ಕಟ್ಟುವಂತೆ ಲೇಖಕರು ಚಿತ್ರಿಸಿದ್ದಾರೆ. 
 ಬಿ.ಎನ್.ಸೊಲ್ಲಾಪುರೆ, ಬೀದರ್

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.