ಕೊಲ್ಲಬೇಡಿ ಕೆರೆಗಳನ್ನ ಕೊಲ್ಲಬೇಡಿರಿ!
ಇಲ್ಲದಂತೆ ಮಾಡುವುದನು ಸುಳ್ಳು ಮಾಡಿರಿ!!
ಸಾವಿರಾರು ವರುಷದಿಂದ
ಜೀವಜಲವ ತುಂಬಿಕೊಂಡು
ಜೀವಜಂತುಗಳಿಗೆ ನೆಲೆಯ ನೀಡುತಿರುವುವು;
ಮುಗಿಲಮಾರಿ ಮುನಿಸಿನಿಂದ
ಹಗಲು ಇರುಳು ಬಿರುಕುಗೊಂಡು
ದುಗುಡದಿಂದ ಮಳೆಗೆ ಎದುರುನೋಡುತಿರುವುವು!
ನಾಡು ಕಟ್ಟಲೆಂದು ನಾವು
ಕಾಡನೆಲ್ಲ ಬಿಡದೆ ಕಡಿದು
ನೋಡುನೋಡುತಿರಲು ಮಳೆಯು ಇಲ್ಲವಾಯಿತು;
ಮಳೆಯು ಇರದೆ ಕೆರೆಯು ಬರಿದು
ಬೆಳೆಯು ಬರದೆ ಇಳೆಯು ಇರದು
ಮಳೆಯು ಬೇಕು ಎಂಬ ಕೂಗು ನಿಲ್ಲದಾಯಿತು!
ಹೊಲದೊಳಿರುವ ಅನ್ನದಾತ
ಛಲವ ಬಿಡದೆ ದುಡಿಯುವಾತ
ಮಳೆಯು ಇಲ್ಲವಾಗುತಿರಲು ಮರುಗುತಿರುವನು ;
ನೆಲದ ದಾಹ ತೀರದಿರಲು
ಹೊಲದ ಮೋಹ ಸೆಳೆಯುತಿರಲು
ನೆಲೆಯು ಕಾಣದಾಯಿತೆಂದು ಕೊರಗುತಿರುವನು!
ಜಲದೊಳಿರುವ ಜೀವಿಗಳಗೆ
ನೆಲೆಯು ಇಲ್ಲದಾಗಿ ಕೊನೆಗೆ
ನಲಿವು ಇರದೆ ನರಳಿ ನರಳಿ ಅಳಿದುಹೋದವು;
ಇಳೆಗೆ ಮಳೆಯು ಇಳಿದು ಬರಲು
ಹಳೆಯ ಸೊಬಗು ಮರಳಿ ಬಂದು
ಜಲವು ತುಂಬಿ ಕೆರೆಗಳೆಲ್ಲ ಜೀವ ಪಡೆವುವು!
ಕನ್ನಡಾಂಬೆ ಮಡಿಲಿನಲ್ಲಿ
ಚಿನ್ನ ಬೆಳೆವ ನಾಡಿನಲ್ಲಿ
ಹೊನ್ನಗುಣದ ಕನ್ನಡಿಗರ ಕರೆಯ ಕೇಳಿರಿ-
ಕೊಲ್ಲಬೇಡಿ ಕೆರೆಗಳನ್ನ ಕೊಲ್ಲಬೇಡಿರಿ
ಇಲ್ಲದಂತೆ ಮಾಡುವುದನು ಸುಳ್ಳು ಮಾಡಿರಿ!
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.