ADVERTISEMENT

ಕೊಳೆ ಹೊದಿಕೆಯೊಳಗೆ

ಕವಿತೆ

ಡಿ.ಎಸ್.ರಾಮಸ್ವಾಮಿ
Published 21 ಜೂನ್ 2014, 19:30 IST
Last Updated 21 ಜೂನ್ 2014, 19:30 IST

ಹೊಲಸಾಗಿದೆ ಹೊದ್ದ ಹೊದಿಕೆ
ಬಳಸೀ ಬಳಸೀ ಪಿಸಿಯುತ್ತಿದೆ,
ಮೂಲ ಬಣ್ಣದ ಗುರುತೂ ಮರೆತು,
ದಟ್ಟಿ ವಾಸನೆಯ ಮುಸುಕಿನಲ್ಲಿ
ಮತ್ತವೇ ಹರಿದ ಕನಸುಗಳು,
ಪೂರ್ತಿಯಾಗದ ಚಿತ್ರಗಳು.

ಹೊದಿಕೆಯೆಸೆದು ನಿರುಮ್ಮಳವಾಗುವುದು
ಕಡು ಕಷ್ಟ. ಚಳಿಗೆ, ಗಾಳಿಗೆ
ಜೊತೆಗೆ ಬತ್ತಲು ಗೊತ್ತಾಗುವ ಭಯಕ್ಕೆ

ಬದಲಿಸುವುದು ಇನ್ನೂ ಕಷ್ಟ
ಹೊಸತು ತರುವುದಕ್ಕೆ ಸಾಲದ ತಿಳಿವಳಿಕೆ
ಜೊತೆಗೇ ಇರುವ ಅನುಭವದ ಕೊರತೆ

ADVERTISEMENT

ಮಲಿನವಾಗಿದೆಯೆಂದು ಒಗೆಯುವುದಕ್ಕೆ
ಶತಮಾನಗಳ ಕೊಳೆ, ತಲೆಮಾರುಗಳ ಕಮಟು
ತೆಗೆಯುವುದಕ್ಕೆ ಬೇಕಾದ ಬುರುಜು ನೊರೆ ಸ್ವಚ್ಛ ನೀರು
ಇರುವ ಜಾಗವ ಅರಿವ ಜಾಗರದ ಪರಿವೆ

ಕಂಬಳಿ, ರಗ್ಗು, ಬುರ್ನಾಸು
ಅಥವ ಅಂಥದೇ ಯಾವುದೋ ಹಚ್ಚಡ
ಹೊದೆದವರಿಗೆಲ್ಲ ಈ ಇದೇ ಪ್ರಶ್ನೆ

ಸಿಗುತ್ತದೆಯೇ ಕೊಳೆ ತೆಗೆವ ಸಾಬೂನು
ಸ್ವಚ್ಛವಾಗುವ ಸಾಲಲ್ಲಿ ನಾನೂ ನೀನೂ!

(ಕಬೀರನ ಒಂದು ವಚನದಿಂದ ಪ್ರೇರಿತ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.