ADVERTISEMENT

ಗಣರಾಜ್ಯೋತ್ಸವದ ಪರೇಡ್

ಮಿನುಗುಮಿಂಚು

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2014, 19:30 IST
Last Updated 22 ಫೆಬ್ರುವರಿ 2014, 19:30 IST
ಗಣರಾಜ್ಯೋತ್ಸವದ ಪರೇಡ್
ಗಣರಾಜ್ಯೋತ್ಸವದ ಪರೇಡ್   

ಪ್ರತಿ ವರ್ಷ ಗಣರಾಜ್ಯೋತ್ಸವದ ದಿನ ನವದೆಹಲಿಯಲ್ಲಿ ಮಹಾ ಕವಾಯತು ಅಥವಾ ಗ್ರ್ಯಾಂಡ್ ಪರೇಡ್ ನಡೆಯುತ್ತದೆ. ಈ ಪರೇಡ್, ರಾಷ್ಟ್ರಪತಿ ಭವನದಿಂದ ಪ್ರಾರಂಭಗೊಂಡು ರಾಜ್‌ಪಥ್, ಇಂಡಿಯಾ ಗೇಟ್ ಹಾದು ಕೆಂಪುಕೋಟೆಯವರೆಗೂ ಸಾಗುತ್ತದೆ.

ಭೂಸೇನೆ, ನೌಕಾಪಡೆ,, ವಾಯುಪಡೆಯ ವಿವಿಧ ಬಣಗಳು ತಂತಮ್ಮ ಅಧಿಕೃತ ಸಮವಸ್ತ್ರ ಧರಿಸಿ ಪರೇಡ್‌ನಲ್ಲಿ ಭಾಗವಹಿಸುತ್ತವೆ. ಸಶಸ್ತ್ರ ಪಡೆಗಳ ಕಮಾಂಡರ್ ಇನ್ ಚೀಫ್ ಕೂಡ ಆಗಿರುವ ಭಾರತದ ರಾಷ್ಟ್ರಪತಿಗೆ ಎಲ್ಲಾ ಪಡೆಗಳೂ ಸಲ್ಯೂಟ್ ಹೊಡೆಯುತ್ತವೆ.

ಸೇನೆಗಳಿಗೆ ಇತ್ತೀಚೆಗೆ ಸೇರ್ಪಡೆಯಾದ ಕ್ಷಿಪಣಿಗಳು, ಟ್ಯಾಂಕ್‌ಗಳು, ರೇಡಾರ್‌ಗಳು, ಯುದ್ಧ ವಿಮಾನಗಳು ಮೊದಲಾದವನ್ನು ಪರೇಡ್‌ನಲ್ಲಿ ಪ್ರದರ್ಶಿಸಲಾಗುತ್ತದೆ. ಸೇನಾಪಡೆಗಳಲ್ಲದೆ ಎನ್‌ಸಿಸಿ, ಹೋಂಗಾರ್ಡ್, ಪೊಲೀಸ್, ಮೊದಲಾದ ನಾಗರಿಕ ಸೇವಾ ಸಂಸ್ಥೆಗಳು ಕೂಡ ಪರೇಡ್‌ನಲ್ಲಿ ಪಾಲ್ಗೊಳ್ಳುತ್ತವೆ.

ಸೇನಾಪಡೆಗಳ ಪ್ರದರ್ಶನದ ನಂತರ ಬಗೆಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ವಿವಿಧ ರಾಜ್ಯಗಳ ಸಾಂಸ್ಕೃತಿಕ ಪರಂಪರೆಯನ್ನು ಸ್ತಬ್ಧಚಿತ್ರಗಳ ಮೂಲಕ ಪ್ರದರ್ಶಿಸಲಾಗುತ್ತದೆ. ದೇಶದ ವಿವಿಧೆಡೆಗಳ ಶಾಲಾ ಮಕ್ಕಳು ಕೂಡ ಪ್ರದರ್ಶನದಲ್ಲಿ ಭಾಗವಹಿಸುತ್ತಾರೆ.

ಅಲಂಕೃತವಾದ ಆನೆಯ ಅಂಬಾರಿ ಮೇಲೆ ಶೌರ್ಯ ಪ್ರಶಸ್ತಿಗೆ ಆಯ್ಕೆಯಾದ ಮಕ್ಕಳ ಮೆರವಣಿಗೆ ಮಾಡಲಾಗುತ್ತದೆ. ರಾಷ್ಟ್ರಪತಿಗೆ ಗೌರವ ಸಲ್ಲಿಸಲು ಯುದ್ಧವಿಮಾನಗಳು ತೋರುವ ಪ್ರದರ್ಶನ ಪರೇಡ್‌ನ ಅತಿ ಕುತೂಹಲದ ಪ್ರದರ್ಶನಗಳಲ್ಲಿ ಒಂದು.

ಪರೇಡ್ ಪ್ರಾರಂಭವಾಗುವ ಮೊದಲು ಅಮರ್ ಜವಾನ್ ಜ್ಯೋತಿ ಬಳಿ ಪ್ರಧಾನಿ ವರ್ತುಲಾಕಾರದ ಹೂಗುಚ್ಛ ಇರಿಸುತ್ತಾರೆ. ಆ ಮೂಲಕ ದೇಶಕ್ಕಾಗಿ ಜೀವವನ್ನೇ ತೆತ್ತ ಯೋಧರಿಗೆ ನಮನ ಸಲ್ಲಿಸುತ್ತಾರೆ. ಆಮೇಲೆ ರಾಷ್ಟ್ರಪತಿ ಮುಖ್ಯ ಅತಿಥಿಗಳ ಸಹಿತ ಪರೇಡ್‌ಗೆ ಬರುತ್ತಾರೆ. ೨೧ ಗನ್‌ಗಳ ಸಲ್ಯೂಟ್ ನಂತರ ರಾಷ್ಟ್ರಪತಿ ತ್ರಿವರ್ಣ ಧ್ವಜವನ್ನು ಹಾರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.