ಬೇಸಿಗೆ ರಜೆ ಶುರುವಾಗೋಕೆ
ಪರೀಕ್ಷೆ ಬರೆಯಲೇಬೇಕೆ?
ದಸರಾ ಸೂಟಿಗು ತುಸುವೇ ಮೊದಲು
ಅದರ ಮರಿಯಿನ್ನೊಂದೇಕೆ?
ಕಷ್ಟಪಟ್ಟರೆ ಸುಖವುಂಟೆಂದು
ಹೇಳುತ್ತಾಳೆ ಅಮ್ಮ
ಸುಖವನೆ ಕಳೆಯುವ ಮಾರಿಯ ಹಾಗದು
ಬರುವುದು ಮತ್ತೆ ತಮ್ಮ!
ದೇವರೆ ಇದನು ಮಾಡಿದ್ಯಾರು
ಸ್ವಲ್ಪವೂ ಬೇಡವೆ ಬ್ರೇನು?
ಆ ಗುಮ್ಮನ ಮಕ್ಕಳು ಯಾರೇ ಇರಲಿ
ಏಳಲಿ ತಲೆಯಲಿ ಹೇನು!
ಬೇಡದಿದ್ದರೂ ಗಟ್ಟು ಹೊಡೆಯುವುದು
ವೇಸ್ಟಿನ ಕೆಲಸವು ಅಣ್ಣ
ಟೆಸ್ಟುಗಿಸ್ಟುಗಳು ಇಲ್ಲದೆ ಇರುವ
ಲೋಕವು ಎಷ್ಟು ಚೆನ್ನ!
ವರ್ಷ ವರ್ಷವೂ ತಪ್ಪದೆ ಬಂದು
ಕೊಡುವುದೇತಕೆ ದಿಗಿಲು
ಆಡುತಾಡುತ ಇರಬಿಡಗೊಡದೆ
ತರುವುದು ಸುಮ್ಮನೆ ಭುಗಿಲು
ಅಬ್ಬಬ್ಬಾಂತ ಒಂದು ಮುಗಿಸಿದರೆ
ದೊಡ್ಡದು ಬರುವುದು ಮುಂದೆ
ಓದು ಬರಹಗಳಿಲ್ಲದೆ ಯಾರೂ
ಇರಲೇ ಇಲ್ಲವೆಂದೆ?
ಕೇಳಿ ದೊಡ್ಡವರೆ ನಾವು ಮಕ್ಕಳು
ಬಂಡೇಳೋಕೆ ಮುನ್ನ
ಬದುಕಿಗಾಗದೆಕ್ಸಾಮನು ಮಾಡಿ
ಸಾಲದ ಹಾಗೆ ಮನ್ನಾ!!
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.