ADVERTISEMENT

ಪರೀಕ್ಷೆ

ನಾಗರಾಜ ವಸ್ತಾರೆ
Published 21 ಡಿಸೆಂಬರ್ 2013, 19:30 IST
Last Updated 21 ಡಿಸೆಂಬರ್ 2013, 19:30 IST

ಬೇಸಿಗೆ ರಜೆ ಶುರುವಾಗೋಕೆ
ಪರೀಕ್ಷೆ ಬರೆಯಲೇಬೇಕೆ?
ದಸರಾ ಸೂಟಿಗು ತುಸುವೇ ಮೊದಲು
ಅದರ ಮರಿಯಿನ್ನೊಂದೇಕೆ?

ಕಷ್ಟಪಟ್ಟರೆ ಸುಖವುಂಟೆಂದು
ಹೇಳುತ್ತಾಳೆ ಅಮ್ಮ
ಸುಖವನೆ ಕಳೆಯುವ ಮಾರಿಯ ಹಾಗದು
ಬರುವುದು ಮತ್ತೆ ತಮ್ಮ!
ದೇವರೆ ಇದನು ಮಾಡಿದ್ಯಾರು
ಸ್ವಲ್ಪವೂ ಬೇಡವೆ ಬ್ರೇನು?
ಆ ಗುಮ್ಮನ ಮಕ್ಕಳು ಯಾರೇ ಇರಲಿ
ಏಳಲಿ ತಲೆಯಲಿ ಹೇನು!

ಬೇಡದಿದ್ದರೂ ಗಟ್ಟು ಹೊಡೆಯುವುದು
ವೇಸ್ಟಿನ ಕೆಲಸವು ಅಣ್ಣ
ಟೆಸ್ಟುಗಿಸ್ಟುಗಳು ಇಲ್ಲದೆ ಇರುವ
ಲೋಕವು ಎಷ್ಟು ಚೆನ್ನ!

ADVERTISEMENT

ವರ್ಷ ವರ್ಷವೂ ತಪ್ಪದೆ ಬಂದು
ಕೊಡುವುದೇತಕೆ ದಿಗಿಲು
ಆಡುತಾಡುತ ಇರಬಿಡಗೊಡದೆ
ತರುವುದು ಸುಮ್ಮನೆ ಭುಗಿಲು

ಅಬ್ಬಬ್ಬಾಂತ ಒಂದು ಮುಗಿಸಿದರೆ
ದೊಡ್ಡದು ಬರುವುದು ಮುಂದೆ
ಓದು ಬರಹಗಳಿಲ್ಲದೆ ಯಾರೂ
ಇರಲೇ ಇಲ್ಲವೆಂದೆ?

ಕೇಳಿ ದೊಡ್ಡವರೆ ನಾವು ಮಕ್ಕಳು
ಬಂಡೇಳೋಕೆ ಮುನ್ನ
ಬದುಕಿಗಾಗದೆಕ್ಸಾಮನು ಮಾಡಿ
ಸಾಲದ ಹಾಗೆ ಮನ್ನಾ!!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.