ಯಾಕೆ ಹೀಗೆ?
ಕೇವಲ ವಾದ ಹೊರತು
ನನಗೂ ನಿನಗೂ
ಸಂವಾದವೇ ಸಾಧ್ಯವಾಗುತ್ತಿಲ್ಲ,
ಇಂದಿನ ಸಾಹಿತಿಗಳ ಹಾಗೆ!
ಹಿಂದೆ-
ಮಾತು ಮಾತಿಗೂ ಮುತ್ತು
ಹೆಜ್ಜೆ ಹೆಜ್ಜೆಗೂ ನಗು
ತುಳುಕಿಸುತ್ತಿದ್ದೆಯಲ್ಲ,
ಎಲ್ಲಿ ಹೋಯಿತೆ
ಆ ನಿನ್ನ ಸೊಗಸುಗಾರಿಕೆ?
ಬಲ್ಲೆ-
ನನ್ನ ಮನಸ್ಸು ಬದಲಾಯಿತು
ದೃಷ್ಟಿ ಬೇರೊಬ್ಬಳತ್ತ ಹರಿಯಿತು
ಎಂದು ಮತ್ತೆ ವಾದಕ್ಕೆ ಇಳಿಯಬೇಡ.
ನನ್ನದೂ-
ತಪ್ಪಿಲ್ಲವೆಂದಲ್ಲ
ವೈಯಾರದ ಒಂದು ನಡಿಗೆ
ತೇಲಿ ಬರುವ ಒಂದು ವಾರೆ ನೋಟ
ಇಂದೂ ನನ್ನ ಕಣ್ಣಿಗೆ
ಸಹಜ ಸೂಜಿಗಲ್ಲು; ದಿಟ
ಅಷ್ಟಕ್ಕೆ-
ಸಂಘ ಜೀವಿಗಳಂತೆ
ಸಂಪು ಹೂಡಿ
ನನ್ನೆದೆ ಬಿರಿಯಬೇಡ
ಬದುಕನ್ನು
ಚಿಲ್ಲರೆ ಮಾಡಬೇಡ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.