–ವಿಜಯಕುಮಾರ್ ನೇರ್ವೆಕರ್
ಗಂಡು ಅಳುವುದಿಲ್ಲ ಎಲ್ಲರೆದುರಿಗೆ ಬಂದು
ಅವನ ಕಣ್ಣುಗಳು ತುಂಬಿ ಬಾರದಿರವು!
ಕಣ್ಣೀರಿಗೆ ಅಣೆಕಟ್ಟನು ಕಟ್ಟಲಾಗುವುದೇ?
ಎಲ್ಲೊ ಮರೆಯಲ್ಲಿ ಒಂದೆರಡು ಹನಿ ಸುರಿಸಿ
ಒಂದಷ್ಟು ಹಗುರಾಗಿ ಮತ್ತೆ ಎಲ್ಲರೆದುರು
ಜಡಭರತನಂತಾಗೋ ಭಾವ ತುಂಬಿದ ಜೀವ!
ಮುಳ್ಳಿರದ ಪಕ್ಷದಲಿ ಬೇಲಿಯಾಗುವುದೇ?
ಖಾಲಿಯಾಗದೇ ಒಳಗಿರುವುದೆಲ್ಲ?
ಅಲ್ಲಿ ಬರಿ ಮುಳ್ಳಿಲ್ಲ, ಹೂವುಗಳೂ ಅರಳುವವು
ಪರಿಮಳ ಇರಲಿಕ್ಕಿಲ್ಲ, ಜೇನಂತು ಉಂಟು!
ಕಲ್ಲು ಹೃದಯವೇ ಸರಿ ಅವನದ್ದು!
ಅಳಿಯದು ಅಲ್ಲಿ ಕೊರೆದದ್ದು!
ಚಪ್ಪಲಿ ಹಾಕಿ, ಕಣ್ಮುಚ್ಚಿ ನಡೆದರೆ
ತಿಳಿಯದು ಹುಲ್ಲು ಹಾಸಿದ್ದು!
ಅವನಿಗೂ ಒಂದು ಮನಸಿದೆ
ಅದರೊಳಗೆ ಭಾವನೆಗಳೂ ಇವೆ
ಕಲ್ಲು ಹೃದಯವೂ ಕರಗುತ್ತದೆ!
ಆದರೆ, ಎಲ್ಲರೆದುರಿಗಲ್ಲ...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.