ಡಾ. ಎಂ.ಸಿ. ಮೋದಿ ಕನ್ನಡದ ಜನಮಾನಸದಲ್ಲಿ ‘ಬೆಳಕು ಕೊಟ್ಟ ಅಣ್ಣ’ ಎಂದು ಪ್ರಸಿದ್ಧರಾದವರು. ಗಾಂಧೀಜಿ ಭಾಷಣದಿಂದ ಪ್ರಭಾವಿತರಾದ ಅವರು ಹಳ್ಳಿಗಳಲ್ಲಿ ನೇತ್ರಚಿಕಿತ್ಸಾ ಶಿಬಿರಗಳನ್ನು ಏರ್ಪಡಿಸಲು ಮುಂದಾದರು. ಗಾಂಧಿಯ ತವರು ಗುಜರಾತ್ನಿಂದ ಅವರ ನೇತ್ರ ಚಿಕಿತ್ಸಾ ಶಿಬಿರದ ಪ್ರಯೋಗಶಾಲೆ ಆರಂಭಗೊಂಡಿತು.
ನಂತರದ ದಿನಗಳಲ್ಲಿ ಕರ್ನಾಟಕ, ಆಂಧ್ರಪ್ರದೇಶ, ಕೇರಳದ ಗ್ರಾಮಗಳಲ್ಲೂ ಮೋದಿ ಅವರ ‘ಸಂಚಾರಿ ಆಸ್ಪತ್ರೆ’ಗಳು ಉಚಿತ ಶಿಬಿರ ನಡೆಸತೊಡಗಿದವು. ತಿರುಪತಿಯಲ್ಲಿ ಒಂದೇ ದಿನ 833 ಮಂದಿಗೆ ಮಾಡಿದ ಕ್ಯಾಟರಾಕ್ಟ್ ಚಿಕಿತ್ಸೆ ನಡೆಸಿದ ದಾಖಲೆ ಅವರದು! ಒಂದು ಕೋಟಿಗೂ ಹೆಚ್ಚು (1,00,94,632) ಜನರ ಕಣ್ಣುಗಳನ್ನು ಪರೀಕ್ಷಿಸಿದ ಹಾಗೂ ಸುಮಾರು 6 ಲಕ್ಷ ಮಂದಿಗೆ (5,95,019) ಶಸ್ತ್ರಚಿಕಿತ್ಸೆ ನಡೆಸಿದ ಪವಾಡಸದೃಶ ದಾಖಲೆ ಅವರದು. ಇಲ್ಲಿರುವ ಕಪ್ಪು–ಬಿಳುಪು ಚಿತ್ರ ಬೆಂಗಳೂರಿನಲ್ಲಿ ನಡೆದ ನೇತ್ರಚಿಕಿತ್ಸಾ ಶಿಬಿರದ್ದು (ಸೆ. 10, 1968). ಶಿಬಿರದಲ್ಲಿ ಮೋದಿಯವರು ನಡೆಸುತ್ತಿರುವ ಶಸ್ತ್ರಚಿಕಿತ್ಸೆಯನ್ನು ಅಂದಿನ ಉಪ ಪ್ರಧಾನಿ ಮೊರಾರ್ಜಿ ದೇಸಾಯಿ ವೀಕ್ಷಿಸುತ್ತಿದ್ದಾರೆ. ಮೋದಿ ಅವರಿಗೆ ನೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ (ಜನನ: ಅ. 4, 1916) ಈ ಚಿತ್ರಪಟ ಹಲವು ನೆನಪುಗಳನ್ನು ಮೀಟುವಂತಿದೆ.
ಪ್ರಜಾವಾಣಿ ಆರ್ಕೈವ್ಸ್