ಬೆಂಕಿ ಕೇಳಲು ಹೋಗುತ್ತಿದ್ದೆ
ಪಕ್ಕದ ಮನೆಗೆ ಎಳೆಯದರಲ್ಲಿ
ಕೆಂಡವನ್ನೇ ಒಂದು ಕೈಯಿಂದ
ಇನ್ನೊಂದು ಕೈಗೆ ಎಸೆಯುತ್ತಾ ಚೆಂಡಿನ ಹಾಗೆ
ನಮ್ಮನೆ ಒಲೆಯಲ್ಲಿ ಕೆಂಬಣ್ಣದ ಜ್ವಾಲೆ
ಪಾದಕ್ಕೆ ತಾಗುತ್ತಿರಲಿಲ್ಲ ಎಳ್ಳಷ್ಟೂ
ಸುಗ್ಗಿಯಲ್ಲಿ ಕೆಂಡ ಹಾಯುತ್ತಿದ್ದಾಗ
ಮುಟ್ಟಿಸಿಕೊಳ್ಳಬೇಡಿ
ಕೆಂಡದಂತ ಮಾತು ಕೇಳಿ
ಸುಟ್ಟುಕೊಂಡ ನನ್ನನ್ನೆ
ಬೂದಿಯಾಗಿ ಉಳಿದ ಮಸಿ, ಒಳಗುಳಿದ ಹಸಿ
ಮತ್ತೆ ಚಿಗುರಲು
ಆಡಿದವರ ಮಾತಿನಿಂದ
ಕುದಿಸಿ, ಬೇಯಿಸಿ, ಆವಿಯಾಗಿಸಿ
ಕೆಂಡ ಸಂಪಿಗೆಯಾಗಿದ್ದೇನೆ
ಕುಲವಿಲ್ಲದ ಕವಿ ನಾನು
ಕಣ್ಣಗಾಯದ ನೋವಿನ ಬಣ್ಣಹಚ್ಚಲು
ಬರುತ್ತಿದ್ದೇನೆ ಮನೆ ಮನೆಗೆ
ಮೈಬಿಸಿ ಕೆಂಡವಾಗಿದೆ ಈಗ
ಹವಿಸ್ಸೇ ಇಲ್ಲದೆ ಉರಿಯುತ್ತಿದ್ದೇನೆ
ಮುಟ್ಟಿದೆ ಮನಸ್ಸು ಸಂಪಿಗೆಯಂತೆ
ಯಜ್ಞ-ಯಾಗಾದಿ ಮಾಡಿ ಸುರಿಸಿದರೂ- ಕೆಂಡದ ಮಳೆಯನ್ನೆ
ಒಡ್ಡಿಕೊಳ್ಳಲೇ ಮೈ ಮತ್ತೆ... ಮತ್ತೆ...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.