ದಿಟ್ಟಿಸಿಡಿಲು
ದಿಟ್ಟಿಸಿಡಿಲು (ನಾ). ಸಿಡಿಲಿನಂತಹ ನೋಟ
ರಾವಣನು ಸೀತೆಯನ್ನು ಹೊತ್ತುತಂದು ಅಶೋಕವನದಲ್ಲಿರಿಸುವನು. ಅನಂತರ ಮಂಡೋದರಿಯನ್ನು ಕಾಣಲು ಶಿವಾಲಯಕ್ಕೆ ಹೋಗುವನು. ಅವಳು ‘ಹದಿಬದೆಯ ಉರಿ ಲಂಕೆಯನ್ನು ದಹಿಸುವುದಿಲ್ಲವೆ?’ ಎಂದು ಪ್ರಶ್ನಿಸುತ್ತ ಅವನತ್ತ ದಿಟ್ಟ ನೋಟವನ್ನು ಹರಿಸುವಳು. ಆ ಸಂದರ್ಭದಲ್ಲಿ ಕುವೆಂಪು ಅವರು ಆ ದೃಷ್ಟಿಯನ್ನು ಚಿತ್ರಿಸಲು ‘ದಿಟ್ಟಿಸಿಡಿಲು’ ಪದ ಪ್ರಯೋಗಿಸಿ, ರಾವಣನಿಂದ ಹೀಗೆ ನುಡಿಸಿದ್ದಾರೆ:
‘ದೇವಿ,
ಕರುಣಿಸುಪಸಂಹರಿಸು ದಿಟ್ಟಿಸಿಡಿಲಂ.’
ಪೆಣ್ಗಾಪು
ಪೆಣ್ಗಾಪು (ನಾ). ಹೆಂಗಸರ ಕಾವಲುಪಡೆ
ಅಶೋಕವನದಲ್ಲಿ ಸೀತೆಯನ್ನು ಕಾಣಲು ಬಂದ ರಾವಣನ ಕಣ್ಣ ಸೂಚನೆಯನ್ನು ತಿಳಿದು, ಅವಳ ಬಳಿಯಿದ್ದ ಹೆಂಗಸರ ಕಾವಲು ಪಡೆಯವರು ಅಲ್ಲಿಂದ ಮರಳುವರು. ಆ ಸಂದರ್ಭದಲ್ಲಿ ಕುವೆಂಪು ರೂಪಿಸಿರುವ ನುಡಿ ‘ಪೆಣ್ಗಾಪು’ವಿನ ಪ್ರಯೋಗ ಹೀಗಿದೆ:
‘ದೊರೆಯ ಕಣ್ತಿಳಿದು ತೊಲಗಿದುದೊಡನೆ ಪೆಣ್ಗಾಪು
ಸೀತೆಯೆಡೆಯಿಂ.’
ತಿರೆಮಗಳು
ತಿರೆಮಗಳು (ನಾ). ಭೂಮಿಯ ಮಗಳು; ಸೀತೆ
ಕುವೆಂಪು ಅವರು ಭೂಮಿಯ ಮಗಳಾದ ಸೀತೆಯನ್ನು ‘ತಿರೆಮಗಳು’ ಎಂದು ಕರೆದಿದ್ದಾರೆ. ಅವಳ ಚೆಲುವನ್ನು ರಾಮಚಂದ್ರ ಸವಿದ ಬಗೆಯನ್ನು ಹೀಗೆ ವರ್ಣಿಸಿದ್ದಾರೆ:
‘ತಿರೆಮಗಳ ಚೆಲುವಲರ
ಬಂಡಿಡಿದ ಬಟ್ಟಲಂ ಪೀರ್ದನೆರ್ದೆತುಟಿಯಿಂದೆ
ತಣಿವಿನಂ ತನ್ಮಾತ್ಮತೃಷೆ’
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.