ADVERTISEMENT

ಕುವೆಂಪು ಪದ ಸೃಷ್ಟಿ: ದಿಟ್ಟಿಸಿಡಿಲು

ಜಿ.ಕೃಷ್ಣಪ್ಪ
Published 20 ಜುಲೈ 2025, 2:09 IST
Last Updated 20 ಜುಲೈ 2025, 2:09 IST
   

ದಿಟ್ಟಿಸಿಡಿಲು

ದಿಟ್ಟಿಸಿಡಿಲು (ನಾ). ಸಿಡಿಲಿನಂತಹ ನೋಟ

ರಾವಣನು ಸೀತೆಯನ್ನು ಹೊತ್ತುತಂದು ಅಶೋಕವನದಲ್ಲಿರಿಸುವನು. ಅನಂತರ ಮಂಡೋದರಿಯನ್ನು ಕಾಣಲು ಶಿವಾಲಯಕ್ಕೆ ಹೋಗುವನು. ಅವಳು ‘ಹದಿಬದೆಯ ಉರಿ ಲಂಕೆಯನ್ನು ದಹಿಸುವುದಿಲ್ಲವೆ?’ ಎಂದು ಪ್ರಶ್ನಿಸುತ್ತ ಅವನತ್ತ ದಿಟ್ಟ ನೋಟವನ್ನು ಹರಿಸುವಳು. ಆ ಸಂದರ್ಭದಲ್ಲಿ ಕುವೆಂಪು ಅವರು ಆ ದೃಷ್ಟಿಯನ್ನು ಚಿತ್ರಿಸಲು ‘ದಿಟ್ಟಿಸಿಡಿಲು’ ಪದ ಪ್ರಯೋಗಿಸಿ, ರಾವಣನಿಂದ ಹೀಗೆ ನುಡಿಸಿದ್ದಾರೆ:

ADVERTISEMENT

‘ದೇವಿ,

ಕರುಣಿಸುಪಸಂಹರಿಸು ದಿಟ್ಟಿಸಿಡಿಲಂ.’ 

ಪೆಣ್‍ಗಾಪು

ಪೆಣ್‍ಗಾಪು (ನಾ). ಹೆಂಗಸರ ಕಾವಲುಪಡೆ

ಅಶೋಕವನದಲ್ಲಿ ಸೀತೆಯನ್ನು ಕಾಣಲು ಬಂದ ರಾವಣನ ಕಣ್ಣ ಸೂಚನೆಯನ್ನು ತಿಳಿದು, ಅವಳ ಬಳಿಯಿದ್ದ ಹೆಂಗಸರ ಕಾವಲು ಪಡೆಯವರು ಅಲ್ಲಿಂದ ಮರಳುವರು. ಆ ಸಂದರ್ಭದಲ್ಲಿ ಕುವೆಂಪು ರೂಪಿಸಿರುವ ನುಡಿ ‘ಪೆಣ್‍ಗಾಪು’ವಿನ ಪ್ರಯೋಗ ಹೀಗಿದೆ:

‘ದೊರೆಯ ಕಣ್‍ತಿಳಿದು ತೊಲಗಿದುದೊಡನೆ ಪೆಣ್‍ಗಾಪು

ಸೀತೆಯೆಡೆಯಿಂ.’ 

ತಿರೆಮಗಳು

ತಿರೆಮಗಳು (ನಾ). ಭೂಮಿಯ ಮಗಳು; ಸೀತೆ

ಕುವೆಂಪು ಅವರು ಭೂಮಿಯ ಮಗಳಾದ ಸೀತೆಯನ್ನು ‘ತಿರೆಮಗಳು’ ಎಂದು ಕರೆದಿದ್ದಾರೆ. ಅವಳ ಚೆಲುವನ್ನು ರಾಮಚಂದ್ರ ಸವಿದ ಬಗೆಯನ್ನು ಹೀಗೆ ವರ್ಣಿಸಿದ್ದಾರೆ:

‘ತಿರೆಮಗಳ ಚೆಲುವಲರ

ಬಂಡಿಡಿದ ಬಟ್ಟಲಂ ಪೀರ್ದನೆರ್ದೆತುಟಿಯಿಂದೆ

ತಣಿವಿನಂ ತನ್ಮಾತ್ಮತೃಷೆ’ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.