ಆಶಾ ಅವರದು ರಾಮನಗರ ಜಿಲ್ಲೆಯ ಚನ್ನಪಟ್ಟಣ. ಅನಾಥ ಶವಗಳಿಗೆ ಅಂತ್ಯಸಂಸ್ಕಾರ ಮಾಡುವುದು ನಿತ್ಯದ ಕಾಯಕ. ಈ ಸೇವೆಯಲ್ಲಿಯೇ ಭಗವಂತನನ್ನು ಕಾಣುತ್ತಿರುವ ತೃಪ್ತಿ ಅವರಲ್ಲಿದೆ.
ಜಿಲ್ಲೆಯಲ್ಲಿ ಎಲ್ಲಿಯೇ ಅನಾಥ, ವಾರಸುದಾರರು ಇಲ್ಲದ ಶವ ಸಿಕ್ಕರೂ ಪೊಲೀಸರಿಂದ ಅವರಿಗೆ ದೂರವಾಣಿ ಕರೆ ಹೋಗುತ್ತದೆ. ಮಂಡ್ಯದಿಂದ ಕೆಂಗೇರಿಯವರೆಗೆ ರೈಲ್ವೆ ಹಳಿಗಳ ಮೇಲೆ ಛಿದ್ರವಾಗಿದ್ದ ಅದೆಷ್ಟೋ ಶವಗಳ ಸಂಸ್ಕಾರ ನೆರವೇರಿಸಿದ್ದಾರೆ. ಜೀವ ರಕ್ಷಾ ಚಾರಿಟಬಲ್ ಟ್ರಸ್ಟ್ ಮೂಲಕ ಸಮಾನ ಮನಸ್ಕರ ಜೊತೆಗೂಡಿ ಸಮಾಜ ಸೇವೆಯಲ್ಲಿ ಕಾರ್ಯತತ್ಪರರಾಗಿದ್ದಾರೆ.
ಕೋವಿಡ್ ಎರಡನೇ ಅಲೆಯಲ್ಲಿ ಅನಾಥ ಶವಗಳ ಸಂಸ್ಕಾರ ಮಾಡಿದ್ದು ಅವರ ಹೆಗ್ಗಳಿಕೆ. ಸೋಂಕಿನಿಂದ ಮೃತಪಟ್ಟವರ ಅಂತ್ಯಕ್ರಿಯೆಗೆ ಸ್ವತಃ ರಕ್ತ ಸಂಬಂಧಿಕರೂ ಮುಂದೆ ಬರುತ್ತಿರಲಿಲ್ಲ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ತಾವೇ ಪಿಪಿಇ ಕಿಟ್ ಧರಿಸಿ ಸಾಕಷ್ಟು ಸೋಂಕಿತರ ಅಂತ್ಯಸಂಸ್ಕಾರ ಮಾಡಿದ್ದೂ ಉಂಟು.
ಆಸ್ಪತ್ರೆಗಳಿಂದ ಕರೆ ಬಂದ ತಕ್ಷಣವೇ ತಾವೇ ಹೋಗಿ ಸೋಂಕಿತರ ಅಂತ್ಯಸಂಸ್ಕಾರ ನೆರವೇರಿಸಿ ಜನರ ಮೆಚ್ಚುಗೆಗೆ ಪಾತ್ರರಾದರು.
ಸಂಸ್ಥೆಯೊಂದು ಇವರ ಸೇವೆ ಮೆಚ್ಚಿ ಆಂಬುಲೆನ್ಸ್ ಅನ್ನು ಕೊಡುಗೆ ನೀಡಿದೆ. ಸಂಘ–ಸಂಸ್ಥೆಗಳುಅವರ ಸಮಾಜಮುಖಿ ಸೇವೆಯನ್ನು ಗೌರವಿಸಿವೆ. ಅನೇಕ ಅಶಕ್ತ ಕುಟುಂಬಗಳಿಗೆ ನೆರವಾಗಿರುವ ಸಂತೃಪ್ತಿಯೂ ಅವರಿಗಿದೆ. ಅನಾಥರಿಗೆ ರಾಮನಗರದ ಬಿಳಗುಂಬ ಬಳಿ ತೆರೆದಿರುವ 'ಪ್ರಕೃತಿ ಮಡಿಲು' ಹೆಸರಿನ ಆಶ್ರಮದ ಸಂಸ್ಥಾಪಕಿಯೂ ಹೌದು.
ಹೆಸರು: ಆಶಾ
ವೃತ್ತಿ: ಸಮಾಜಸೇವೆ(‘ಜೀವ ರಕ್ಷಾ ಚಾರಿಟಬಲ್ ಟ್ರಸ್ಟ್ ಸ್ಥಾಪಕರಲ್ಲಿ ಒಬ್ಬರು)
ಸಾಧನೆ: ಅನಾಥ ಶವಗಳ ಸಂಸ್ಕಾರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.