ADVERTISEMENT

ಜನರೇ ಪ್ರಥಮ ಆದ್ಯತೆಯಾಗಿರುವ ಗಣತಂತ್ರ: ನಾಗರಿಕರ ಸೇವೆಯಲ್ಲಿ ಆಡಳಿತ

​ಪ್ರಜಾವಾಣಿ ವಾರ್ತೆ
Published 25 ಜನವರಿ 2026, 16:19 IST
Last Updated 25 ಜನವರಿ 2026, 16:19 IST
<div class="paragraphs"><p>&nbsp; ಪಥ ಸಂಚಲನದಲ್ಲಿ ಪ್ರಧಾನಿ ಮೋದಿ </p></div>

  ಪಥ ಸಂಚಲನದಲ್ಲಿ ಪ್ರಧಾನಿ ಮೋದಿ

   REUTERS/Altaf Hussain

1952ರ ಮೇ 16ರಂದು ಭಾರತದ ಮೊದಲ ರಾಷ್ಟ್ರಪತಿ ಡಾ.ರಾಜೇಂದ್ರ ಪ್ರಸಾದ್ ಅವರು ಮೊದಲ ಚುನಾಯಿತ ಸಂಸತ್ತನ್ನು ಉದ್ದೇಶಿಸಿ ಮಾತನಾಡುವಾಗ, ಆ ಕ್ಷಣದ ಐತಿಹಾಸಿಕ ಮಹತ್ವವನ್ನು ಉಲ್ಲೇಖಿಸಿದರು. ಇದರೊಂದಿಗೆ ಭಾರತದ ಪ್ರಯಾಣದ ಒಂದು ಹಂತ ಮಾತ್ರ ಮುಕ್ತಾಯವಾದಂತಾಗಿದೆ. ಎರಡನೇ ಹಂತದಲ್ಲಿ, "ಯಾವುದೇ ದೇಶ ಅಥವಾ ಅಲ್ಲಿನ ಜನರಿಗೆ ಅವರ ಮುಂದಿನ ಪ್ರಯಾಣದಲ್ಲಿ ಯಾವುದೇ ವಿಶ್ರಾಂತಿ ಸ್ಥಳವಿರುವುದಿಲ್ಲ" ಎಂದು ಅವರು ಸದಸ್ಯರಿಗೆ ನೆನಪಿಸಿದರು.

ರಾಜಕೀಯ ಸ್ವಾತಂತ್ರ್ಯ ಮತ್ತು ಸಾಂವಿಧಾನಿಕ ಸಾರ್ವಭೌಮತ್ವವನ್ನು ಸಾಧಿಸಲು ಸಾಧ್ಯವಾಗಿದೆಯಾದರೂ, ಗಣರಾಜ್ಯದ ಕಾರ್ಯವು ಇನ್ನೂ ಪೂರ್ಣಗೊಂಡಿಲ್ಲ ಎಂಬುದು ಅವರ ಮಾತಿನ ಸೂಕ್ಷ್ಮವಾದ, ಜೊತೆಗೆ ಅಷ್ಟೇ ಆಳವಾದ ಸಂದೇಶವಾಗಿತ್ತು. ಡಾ.ಪ್ರಸಾದ್ ಅವರು ಹೇಳಿದಂತೆ, ಭಾರತದ ಮುಂದಿರುವ ನಿಜವಾದ ಕಾರ್ಯವೆಂದರೆ "ನಮ್ಮ ಜನರಿಗೆ ಸ್ವಲ್ಪ ಮಟ್ಟಿಗೆ ಸಂತೋಷವನ್ನು ತರುವುದು ಮತ್ತು ಅವರು ಅನುಭವಿಸುತ್ತಿರುವ ಹೊರೆಗಳನ್ನು ಕಡಿಮೆ ಮಾಡುವುದು". ಈ ಮಾತು ಹೊಸ ಗಣರಾಜ್ಯದ ನೈತಿಕ ಉದ್ದೇಶವನ್ನು ವ್ಯಾಖ್ಯಾನಿಸಿತು.

ADVERTISEMENT

ಪ್ರಜಾಸತ್ತಾತ್ಮಕ ಆಡಳಿತದ ಹೃದಯಭಾಗದಲ್ಲಿ ಈ ನೈತಿಕ ಬಾಧ್ಯತೆಯನ್ನು ಇರಿಸುವ ಮೂಲಕ, ಡಾ. ಪ್ರಸಾದ್ ಅವರು ದೇಶ ಮತ್ತು ಅಲ್ಲಿನ ಜನರ ನಡುವಿನ ಸಂಬಂಧವನ್ನು ಮರು ರೂಪಿಸಿದರು. ಭಾರತವು ಇನ್ನು ಮುಂದೆ ಪ್ರಜೆಗಳ ದೇಶವಾಗಿರುವುದಿಲ್ಲ, ಬದಲಿಗೆ ನಾಗರಿಕರ ಗಣರಾಜ್ಯವಾಗಿರಲಿದೆ, ರಾಜಕೀಯ ಧ್ವನಿಯಲ್ಲಿ ಸಮಾನತೆ ಹೊಂದಿರಲಿದೆ, ಸಂವಿಧಾನಕ್ಕೆ ಬದ್ಧವಾಗಿರುತ್ತದೆ ಮತ್ತು ಸಾಮೂಹಿಕ ರಾಷ್ಟ್ರೀಯ ಪ್ರಯಾಣದಲ್ಲಿ ಸಹ ಪ್ರಯಾಣಿಕನಾಗಿರುತ್ತದೆ ಎಂದು ಹೇಳಿದ್ದರು.

ಈ ಹಿನ್ನೆಲೆಯಲ್ಲಿ, ಭಾರತೀಯ ಗಣರಾಜ್ಯವು ಕೇವಲ ಸ್ವಾತಂತ್ರ್ಯದಿಂದ ಹುಟ್ಟಿದ್ದಲ್ಲ, ಬದಲಿಗೆ ನಿಜ ಅರ್ಥದಲ್ಲಿ ಪ್ರಜಾಪ್ರಭುತ್ವವವನ್ನು ಸ್ಥಾಪಿಸಿದ ಪ್ರಜ್ಞಾಪೂರ್ವಕ ಸಾಂವಿಧಾನಿಕ ಆಯ್ಕೆಯಿಂದ ಅದು ಜನ್ಮ ತಳೆದಿದೆ.

ಪ್ರಜಾಪ್ರಭುತ್ವವನ್ನು ಸಾಮಾನ್ಯವಾಗಿ "ಜನರಿಗಾಗಿ, ಜನರಿಂದ ಮತ್ತು ಜನರಿಗೋಸ್ಕರ" ಸರ್ಕಾರ ಎಂದು ಸಂಕ್ಷಿಪ್ತವಾಗಿ ಅರ್ಥೈಸಲಾಗುತ್ತದೆ - ಈ ನುಡಿಗಟ್ಟು ಪ್ರಜಾಪ್ರಭುತ್ವದ ಮೂಲ ತತ್ತ್ವಶಾಸ್ತ್ರವನ್ನು ಸೆರೆಹಿಡಿಯುತ್ತದೆ.

ಸಂವಿಧಾನದ ಅಂಗೀಕಾರದೊಂದಿಗೆ "ಜನರಿಗಾಗಿ" ತತ್ವವು ಸಾಕಾರಗೊಂಡಿತು, ಇದು ನಾಗರಿಕರಿಗೆ ಸಾರ್ವಭೌಮತ್ವ ನೀಡಿತು ಮತ್ತು ರಾಜ್ಯದ ಅಧಿಕಾರವನ್ನು ಸಾಂವಿಧಾನಿಕ ಮಿತಿಗಳಿಗೆ ಒಳಪಡಿಸಿತು. 1952ರ ಮೊದಲ ಸಾರ್ವತ್ರಿಕ ಚುನಾವಣೆಗಳಲ್ಲಿ ಸಾರ್ವತ್ರಿಕ ವಯಸ್ಕ ಮತದಾನದ ಹಕ್ಕು ಪ್ರತಿಯೊಬ್ಬ ವಯಸ್ಕ ಭಾರತೀಯನಿಗೆ, ಅವರ ಹಿನ್ನೆಲೆಯನ್ನು ಲೆಕ್ಕಿಸದೆ, ಸಮಾನ ರಾಜಕೀಯ ಧ್ವನಿ ನೀಡಿದಾಗ "ಜನರಿಂದ" ಎಂಬ ತತ್ವವು ಅಭಿವ್ಯಕ್ತವಾಯಿತು.

ಆದರೆ, "ಜನರಿಗೋಸ್ಕರ" ಮೂರನೆಯ ತತ್ವವು ನಾಗರಿಕರಿಗೆ ಕಲ್ಯಾಣ ಮತ್ತು ಯೋಗಕ್ಷೇಮವನ್ನು ಒದಗಿಸುವ ಸರ್ಕಾರದ ನಿರಂತರ ಬಾಧ್ಯತೆಯನ್ನು ಒಳಗೊಂಡಿದೆ. ಸರ್ಕಾರದ ಪ್ರತಿಯೊಂದು ಕ್ರಮವೂ ಸಾಮಾಜಿಕ-ಆರ್ಥಿಕ ನ್ಯಾಯ ಮತ್ತು ಸಮಾಜದ ಅಂಚಿನಲ್ಲಿರುವ ಹಾಗೂ ಹಿಂದುಳಿದ ವರ್ಗಗಳ ಉನ್ನತಿಯ ಗುರಿಯತ್ತ ನಿರ್ದೇಶಿತವಾಗಿರಬೇಕು. ಜನರ ಕಲ್ಯಾಣದ ಉತ್ತೇಜನಕ್ಕಾಗಿ ಸಾಮಾಜಿಕ ವ್ಯವಸ್ಥೆಯನ್ನು ಭದ್ರಪಡಿಸುವುದನ್ನು ಭಾರತೀಯ ಸಂವಿಧಾನವು ಸರ್ಕಾರಕ್ಕೆ ಕಡ್ಡಾಯಗೊಳಿಸುತ್ತದೆ.

ಪ್ರಜಾಸತ್ತಾತ್ಮಕ ಗಣರಾಜ್ಯದ ಯಶಸ್ಸು ಆಡಳಿತವು ಜನರಿಗೆ ಎಷ್ಟರ ಮಟ್ಟಿಗೆ ಸೇವೆ ಸಲ್ಲಿಸುತ್ತದೆ ಎಂಬುದರ ಮೇಲೆ ನಿಂತಿದೆ. ಪ್ರಜಾಸತ್ತಾತ್ಮಕ ನ್ಯಾಯಸಮ್ಮತೆ ಕಾರ್ಯವಿಧಾನಗಳಿಂದ ಮಾತ್ರವಲ್ಲದೆ, ಕಾರ್ಯಕ್ಷಮತೆಯಿಂದ ಕಾಪಾಡಬೇಕು - ಸಾಮಾಜಿಕ ಅಗತ್ಯಗಳಿಗೆ ಸ್ಪಂದಿಸುವ, ಅಸಮಾನತೆಗಳನ್ನು ಕಡಿಮೆ ಮಾಡುವ ಮತ್ತು ಮಾನವ ಘನತೆಯನ್ನು ಎತ್ತಿಹಿಡಿಯುವ ಸರ್ಕಾರದ ಸಾಮರ್ಥ್ಯದಿಂದ ಪ್ರಜಾಸತಾತ್ಮಕತೆಯನ್ನು ಕಾಯ್ದುಕೊಳ್ಳಬೇಕು. ಗಣರಾಜ್ಯದ ಬಲವು ಅದು ತನ್ನ ದುರ್ಬಲ ನಾಗರಿಕರನ್ನು ಹೇಗೆ ನಡೆಸಿಕೊಳ್ಳುತ್ತದೆ ಎಂಬುದರ ಮೇಲೆ ಅಳೆಯಲಾಗುತ್ತದೆ.

ಭಾರತೀಯ ರಾಜಕೀಯ ಚಿಂತನೆಯು ಪ್ರಜಾಪ್ರಭುತ್ವದ ಬಗ್ಗೆ ಮಾನವ ಕೇಂದ್ರಿತ ತಿಳಿವಳಿಕೆಯನ್ನು ಸತತವಾಗಿ ತಿಳಿಸಿದೆ. ಪ್ರಾಚೀನ ಭಾರತದಲ್ಲಿ, "ಯೋಗ-ಕ್ಷೇಮ" ಪರಿಕಲ್ಪನೆಯು ವ್ಯಕ್ತಿಯ ಯೋಗಕ್ಷೇಮ ಮತ್ತು ರಕ್ಷಣೆಯನ್ನು ಪ್ರತಿಪಾದಿಸುತ್ತಿತ್ತು. ಮಹಾತ್ಮ ಗಾಂಧಿಯವರ ‘ಸರ್ವೋದಯ’ದ ಕಲ್ಪನೆಯು ಎಲ್ಲರನ್ನು, ವಿಶೇಷವಾಗಿ ಸಮಾಜದ ಕಟ್ಟಕಡೆಯ ವ್ಯಕ್ತಿಯ ಏಳಿಗೆಯನ್ನು ಕಲ್ಪಿಸಿಕೊಂಡಿತ್ತು. ದೀನದಯಾಳ್ ಉಪಾಧ್ಯಾಯ ಅವರ 'ಏಕಾತ್ಮ ಮಾನವವಾದ’ವು ಅಭಿವೃದ್ಧಿ ವಿಚಾರದಲ್ಲಿ ಸಮಗ್ರ, ಮಾನವ ಕೇಂದ್ರಿತ ಕಾರ್ಯವಿಧಾನವನ್ನು ನಿರೂಪಿಸಿತು.

ಸಮಕಾಲೀನ ಆಡಳಿತದಲ್ಲಿ, "ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌" ದೃಷ್ಟಿಕೋನವು ಎಲ್ಲರನ್ನೂ ಒಳಗೊಂಡ, ಜನಕೇಂದ್ರಿತ ಆಡಳಿತಕ್ಕೆ ಶಾಶ್ವತವಾದ ಸೈದ್ಧಾಂತಿಕ ಬದ್ಧತೆಯನ್ನು ಪ್ರತಿಧ್ವನಿಸುತ್ತದೆ. ದುರ್ಬಲ ಮತ್ತು ಅತ್ಯಂತ ದುರ್ಬಲರ ಏಳಿಗೆಗೆ ಆದ್ಯತೆ ನೀಡುವ ಮೂಲಕ ಸರ್ಕಾರವು ಸಕ್ರಿಯವಾಗಿ "ಜನರಿಗಾಗಿ" ಕೆಲಸ ಮಾಡುವ ಈ ಬದ್ಧತೆಯು ಕಳೆದ 12 ವರ್ಷಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಗಮನಾರ್ಹ ಫಲಿತಾಂಶ ನೀಡಿದೆ. ಸರ್ಕಾರವು ಸೈದ್ಧಾಂತಿಕ ದೃಷ್ಟಿಕೋನವನ್ನು ಸ್ಪಷ್ಟ ಕ್ರಿಯೆಯಾಗಿ ಪರಿವರ್ತಿಸಿದೆ, ಸಮಾಜದ ಮೂಲೆ ಮೂಲೆ ಮತ್ತು ಎಲ್ಲಾ ವರ್ಗಗಳನ್ನು ತಲುಪುವ ಸಮಗ್ರ ಅಭಿವೃದ್ಧಿಯನ್ನು ಕಾಯ್ದುಕೊಂಡಿದೆ.

ಸಂವಿಧಾನದ 4ನೇ ಭಾಗದಲ್ಲಿ, ನ್ಯಾಯಯುತ ಮತ್ತು ಮಾನವೀಯ ಕೆಲಸದ ಪರಿಸ್ಥಿತಿಗಳನ್ನು ಒದಗಿಸುವುದು ಸರ್ಕಾರದ ಕರ್ತವ್ಯವಾಗಿದೆ. 29 ಕಾರ್ಮಿಕ ಕಾನೂನುಗಳನ್ನು 4 ಸಮಗ್ರ ಕಾರ್ಮಿಕ ಸಂಹಿತೆಗಳಾಗಿ ಕ್ರೋಢೀಕರಿಸುವ ಮೂಲಕ, ಸಾಂವಿಧಾನಿಕ ನಿರ್ದೇಶನಕ್ಕೆ ಅನುಗುಣವಾಗಿ ಕಾರ್ಮಿಕರ ಹಕ್ಕುಗಳು ಮತ್ತು ಕಲ್ಯಾಣವನ್ನು ಉತ್ತೇಜಿಸಲು ಸಮರ್ಥ ಹೊಸ ಕಾರ್ಮಿಕ ನೀತಿಗಳನ್ನು ಜಾರಿಗೊಳಿಸಿದೆ.

ಕಳೆದ ದಶಕದಲ್ಲಿ, "ಜನರಿಗಾಗಿ" ಎಲ್ಲರನ್ನೂ ಒಳಗೊಂಡ ಅಭಿವೃದ್ಧಿ ಉತ್ತೇಜಿಸಲು ಸಾಮಾಜಿಕ-ಆರ್ಥಿಕ ನ್ಯಾಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ವಿಶ್ವ ಬ್ಯಾಂಕಿನ ‘ಸ್ಪ್ರಿಂಗ್ 2025 ಬಡತನ ಮತ್ತು ಸಮಾನತೆ ಸಂಕ್ಷಿಪ್ತ ವರದಿ’ಯ ಪ್ರಕಾರ, ಕಳೆದ ದಶಕದಲ್ಲಿ, ಭಾರತ 17.1 ಕೋಟಿ ಜನರನ್ನು ತೀವ್ರ ಬಡತನದಿಂದ ಮೇಲೆತ್ತಿದೆ. ಸಕಾರಾತ್ಮಕ ಕ್ರಮಗಳನ್ನು ಕೈಗೊಳ್ಳುವ ಗುರಿಯ ಭಾಗವಾಗಿ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಶಿಕ್ಷಣ ಸಂಸ್ಥೆಗಳು ಮತ್ತು ಉದ್ಯೋಗಗಳಲ್ಲಿ ಮೀಸಲಾತಿಯನ್ನು ಒದಗಿಸಲಾಗಿದೆ.

ಘನತೆ ಮತ್ತು ಸಮಾನತೆಯನ್ನು ಎತ್ತಿಹಿಡಿಯಲು ಮತ್ತು ಐತಿಹಾಸಿಕವಾಗಿ ಹಿಂದುಳಿದ ಗುಂಪುಗಳಿಗೆ ಅಗತ್ಯ ನ್ಯಾಯ ಒದಗಿಸಲು ‘ವಿಶೇಷಚೇತನರ ಹಕ್ಕುಗಳ ಕಾಯ್ದೆ - 2016’ಮತ್ತು ‘ಮುಸ್ಲಿಂ ಮಹಿಳೆಯರ (ವಿವಾಹದ ಹಕ್ಕುಗಳ ರಕ್ಷಣೆ) ಕಾಯ್ದೆ-2019’ನಂತಹ ಪ್ರಗತಿಪರ ಶಾಸನಗಳನ್ನು ಜಾರಿಗೆ ತರಲಾಗಿದೆ.

ಈ ಜನ ಕೇಂದ್ರಿತ ಆಡಳಿತದ ಅತ್ಯಂತ ಶಕ್ತಿಶಾಲಿ ಉದಾಹರಣೆಗಳಲ್ಲಿ ‘ಸ್ವಚ್ಛ ಭಾರತ ಯೋಜನೆ’ ಸಹ ಒಂದಾಗಿದೆ. ಈ ಅಭಿಯಾನವು ತಳಮಟ್ಟದಲ್ಲಿ "ಜನರಿಗೋಸ್ಕರ" ಎಂಬ ಪ್ರಜಾಸತ್ತಾತ್ಮಕ ಆದರ್ಶವನ್ನು ಕಾರ್ಯಗತಗೊಳಿಸಿತು. ಇದು ನೈರ್ಮಲ್ಯ ಉಪಕ್ರಮಕ್ಕಿಂತ ಹೆಚ್ಚಾಗಿ, ಮಾನವ ಘನತೆ, ಸಾರ್ವಜನಿಕ ಆರೋಗ್ಯ, ಮಹಿಳೆಯರ ಸುರಕ್ಷತೆ ಹಾಗೂ ಸಾಮಾಜಿಕ ಒಳಗೊಳ್ಳುವಿಕೆಯನ್ನು ಕೇಂದ್ರೀಕರಿಸಿದ ರಾಷ್ಟ್ರವ್ಯಾಪಿ ಜನಾಂದೋಲನವಾಯಿತು. ದೈನಂದಿನ ಜೀವನದ ಮೇಲೆ ಆಳವಾದ ಪರಿಣಾಮದ ಹೊರತಾಗಿಯೂ ದೀರ್ಘಕಾಲದಿಂದ ನಿರ್ಲಕ್ಷಕ್ಕೆ ಒಳಾಗಿದ್ದ ಸಮಸ್ಯೆಯನ್ನು ಪರಿಹರಿಸುವ ಮೂಲಕ, ‘ಸ್ವಚ್ಛ ಭಾರತ ಯೋಜನೆ’ಯು ಈ ಶತಮಾನದ ವಿಶ್ವದ ಅತಿದೊಡ್ಡ ಮತ್ತು ಅತ್ಯಂತ ಯಶಸ್ವಿ ಜನ-ನೇತೃತ್ವದ ಮತ್ತು ಜನ-ಚಾಲಿತ ಸಾರ್ವಜನಿಕ ಆಂದೋಲನವಾಗಿ ಹೊರಹೊಮ್ಮಿದೆ.

ಅವಕಾಶಗಳು ಮತ್ತು ಸ್ಥಾನಮಾನದಲ್ಲಿ ಸಮಾನತೆಯನ್ನು ಖಚಿತಪಡಿಸಿಕೊಳ್ಳಲು ಅವಕಾಶ ವಂಚಿತರು, ದುರ್ಬಲರು, ವೃದ್ಧರು ಹಾಗೂ ವೈಯಕ್ತಿಕ ದುರಂತ /ದುರದೃಷ್ಟ ಎದುರಿಸುತ್ತಿರುವವರ ಕಲ್ಯಾಣವು ಅಗತ್ಯವಾಗಿದೆ. ‘ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ’ ಅಡಿಯಲ್ಲಿ 80 ಕೋಟಿಗೂ ಹೆಚ್ಚು ಜನರಿಗೆ ಉಚಿತ ಆಹಾರ ಒದಗಿಸಿರುವುದು ಇದಕ್ಕೆ ಉದಾಹರಣೆಯಾಗಿದೆ.

ಲಕ್ಷಾಂತರ ಭಾರತೀಯ ಕುಟುಂಬಗಳಿಗೆ ಒದಗಿಸಲಾದ ‘ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭಿಮಾ ಯೋಜನೆ’ಯು ಕೇವಲ ಒಂದು ಸರ್ಕಾರಿ ನೀತಿಗಿಂತಲೂ ಮಿಗಿಲಾದ ವಿಶಾಲ ಗುರಿ ಹೊಂದಿದೆ. ಇದು ಸಂದಿಗ್ಧ ಸಮಯದಲ್ಲಿ ಘನತೆ ಮತ್ತು ಭರವಸೆಯನ್ನು ಸೂಚಿಸುತ್ತದೆ. ಶೇ.53ರಷ್ಟು ಫಲಾನುಭವಿಗಳು ಮಹಿಳೆಯರು ಹಾಗೂ ಶೇ.72ಕ್ಕೂ ಹೆಚ್ಚು ಫಲಾನುಭವಿಗಳು ಗ್ರಾಮೀಣ ಭಾರತದವರಾಗಿದ್ದಾರೆ. ಈ ಯೋಜನೆಯು ದೇಶಾದ್ಯಂತ ಜನರಿಗೆ ಜೀವ ವಿಮೆಯ ಲಭ್ಯತೆಯನ್ನು ವಿಸ್ತರಿಸಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ‘ಆತ್ಮನಿರ್ಭರ ಭಾರತ’ಕ್ಕೆ ಕರೆ ನೀಡಿದಾಗ, ಅದು ಕೇವಲ ಆರ್ಥಿಕ ಘೋಷಣೆಯಾಗಿರಲಿಲ್ಲ, ಬದಲಿಗೆ ವೈಯಕ್ತಿಕ ಮಟ್ಟದಲ್ಲಿ ಸ್ವಾವಲಂಬನೆಯ ವಿಸ್ತರಣೆಯಾಗಿತ್ತು. ‘ಮುದ್ರಾ ಯೋಜನೆ’ ಮತ್ತು ‘ಸ್ಕಿಲ್ ಇಂಡಿಯಾ ಯೋಜನೆ’ಯಂತಹ ಉಪಕ್ರಮಗಳ ಮೂಲಕ, ನಾಗರಿಕರು ಸ್ವಾವಲಂಬಿಗಳಾಗಲು, ಉದ್ಯಮಶೀಲರಾಗಲು ಮತ್ತು ತಮ್ಮ ಸ್ವಂತ ಸಾಮರ್ಥ್ಯಗಳಲ್ಲಿ ವಿಶ್ವಾಸ ಹೊಂದಲು ಸಬಲೀಕರಣಕ್ಕೆ ಒತ್ತು ನೀಡಲಾಯಿತು. ಸ್ವಾವಲಂಬನೆಯು ವೈಯಕ್ತಿಕ ಸ್ವಾಯತ್ತತೆಯ ತಿರುಳಾಗಿದೆ ಮತ್ತು ಈ ಮಧ್ಯಸ್ಥಿಕೆಗಳು ಅದಕ್ಕೆ ನಿರ್ಣಾಯಕ ಉತ್ತೇಜನವನ್ನು ನೀಡಿವೆ.

ಅಂತೆಯೇ, ‘ಆಯುಷ್ಮಾನ್ ಭಾರತ್’ ಯೋಜನೆಯು ಗೌರವಯುತ ಮತ್ತು ಕೈಗೆಟುಕುವ ದರದಲ್ಲಿ ಆರೋಗ್ಯ ರಕ್ಷಣೆಯ ಲಭ್ಯತೆಯನ್ನು ಖಾತ್ರಿಪಡಿಸುವ ಮೂಲಕ ಸ್ವಾತಂತ್ರ್ಯವನ್ನು ವಿಸ್ತರಿಸಲು ಪ್ರಯತ್ನಿಸಿತು. ಜೊತೆಗೆ ‘ಜನ್ ಧನ್’ ಯೋಜನೆಯು ಲಕ್ಷಾಂತರ ಬಡವರನ್ನು ಔಪಚಾರಿಕ ಬ್ಯಾಂಕಿಂಗ್ ವ್ಯವಸ್ಥೆಗೆ ತಂದಿತು. ಲೇವಾದೇವಿಗಾರರ ಮೇಲಿನ ಅವಲಂಬನೆಯಿಂದ ಅವರನ್ನು ಮುಕ್ತಗೊಳಿಸುವ ಮೂಲಕ, ಅದು ದೀರ್ಘಕಾಲದಿಂದ ಸಾಂಸ್ಥಿಕ ಬೆಂಬಲದಿಂದ ಹೊರಗುಳಿದವರಿಗೆ ಆರ್ಥಿಕ ಭದ್ರತೆ ಮತ್ತು ವೈಯಕ್ತಿಕ ಘನತೆಯನ್ನು ಪುನಃಸ್ಥಾಪಿಸಿತು.

ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ಒದಗಿಸುವ ‘ನಾರಿ ಶಕ್ತಿ ವಂದನ್ ಅಧಿನಿಯಮ’ದಲ್ಲಿ "ಜನರಿಗಾಗಿ" ಆಡಳಿತದ ಇದೇ ಪ್ರಜಾಸತ್ತಾತ್ಮಕತೆಯು ಬಲವಾಗಿ ಅಭಿವ್ಯಕ್ತಿಗೊಂಡಿದೆ.

ಈ ಸುಧಾರಣೆಯು ಸಾರ್ವಭೌಮತ್ವವನ್ನು ಚಲಾಯಿಸುವ ಸಾಮಾಜಿಕ ತಳಹದಿಯನ್ನು ವಿಸ್ತರಿಸುವ ಮೂಲಕ "ಜನರಿಗಾಗಿ" ತತ್ವವನ್ನು ಬಲಪಡಿಸುತ್ತದೆ. ಇದು ಪ್ರಾತಿನಿಧಿಕ ಸಂಸ್ಥೆಗಳನ್ನು ಸಮಾಜದ ವೈವಿಧ್ಯತೆಯನ್ನು ಹೆಚ್ಚು ಪ್ರತಿಬಿಂಬಿಸುವ ಮೂಲಕ "ಜನರಿಂದ" ತತ್ವವನ್ನು ಶ್ರೀಮಂತಗೊಳಿಸುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ, ಆಡಳಿತದ ಫಲಿತಾಂಶಗಳು ಜೀವಂತ ಅನುಭವಗಳಲ್ಲಿ ನೆಲೆಗೊಂಡ ದೃಷ್ಟಿಕೋನಗಳಿಂದ ರೂಪುಗೊಳ್ಳುತ್ತವೆ ಎಂದು ಖಚಿತಪಡಿಸಿಕೊಳ್ಳುವ ಮೂಲಕ ಇದು "ಜನರಿಗಾಗಿ" ತತ್ವವನ್ನು ಮುನ್ನಡೆಸುತ್ತದೆ.

ಆದ್ದರಿಂದ ಭಾರತದ ಪ್ರಜಾಸತ್ತಾತ್ಮಕ ಪಯಣವು ಒಂದು ಸ್ಥಿರ ಸಾಂವಿಧಾನಿಕ ಸಾಧನೆಯಲ್ಲ, ಬದಲಿಗೆ ನಿರಂತರ ರಾಷ್ಟ್ರೀಯ ಯೋಜನೆಯಾಗಿದೆ. ಸಂವಿಧಾನ ಮತ್ತು ಚುನಾವಣೆಗಳು ಪ್ರಜಾಪ್ರಭುತ್ವದ ಚೌಕಟ್ಟನ್ನು ಸ್ಥಾಪಿಸಿದರೆ, ಗಣರಾಜ್ಯವು ಸ್ಪಂದನಶೀಲ ಆಡಳಿತ, ನೈತಿಕ ನಾಯಕತ್ವ ಮತ್ತು ಜನರ ಆಕಾಂಕ್ಷೆಗಳೊಂದಿಗೆ ನಿರಂತರ ತೊಡಗಿಸಿಕೊಳ್ಳುವ ಮೂಲಕ ಬದುಕುತ್ತದೆ. ಸರ್ಕಾರವು "ಜನರಿಗೋಸ್ಕರ" ಆಡಳಿತ ನಡೆಸಲು ಅಚಲವಾಗಿ ಬದ್ಧವಾದಾಗ ಮಾತ್ರ ಪ್ರಜಾಪ್ರಭುತ್ವವು ತನ್ನ ನೈಜ ಅರ್ಥದಲ್ಲಿ ಉಳಿಯುತ್ತದೆ.

ಗಣರಾಜ್ಯದ ಶಕ್ತಿಯು ಅದರ ಸಂಸ್ಥೆಗಳ ಸಹಿಷ್ಣುತೆಯಲ್ಲಿ ಮಾತ್ರವಲ್ಲದೆ ಆಡಳಿತವನ್ನು ಅದರ ಜನರ ಜೀವಂತ ವಾಸ್ತವತೆಗಳೊಂದಿಗೆ ಜೋಡಿಸುವ ನಿರಂತರ ಪ್ರಯತ್ನದಲ್ಲಿ ಅಡಗಿದೆ. ಸ್ವಾತಂತ್ರ್ಯವು ಸವರ್ರಿಗೂ ಘನತೆ, ಅವಕಾಶ ಮತ್ತು ನ್ಯಾಯ ಒದಗಿಸಿಕೊಡಬೇಕೆಂಬ ಸಾಂವಿಧಾನಿಕ ಭರವಸೆಯನ್ನು ನವೀಕರಿಸಲು ಪ್ರತಿ ಪೀಳಿಗೆಗೆ ಕರೆ ನೀಡಲಾಗುತ್ತದೆ. ಭಾರತೀಯ ಗಣರಾಜ್ಯವು ಒಂದು ಪೂರ್ಣಗೊಂಡ ಯೋಜನೆಯಲ್ಲ; ಇದು ಹಂಚಿಕೆಯ ಜವಾಬ್ದಾರಿಯಾಗಿದೆ, ಪ್ರಜಾಪ್ರಭುತ್ವದ ಭಾಗವಹಿಸುವಿಕೆಯಿಂದ ಅದು ಉಳಿಯುತ್ತದೆ ಮತ್ತು ಸರ್ಕಾರವು ತನ್ನ ನಾಗರಿಕರಿಗೆ ಎಷ್ಟು ನಿಷ್ಠೆಯಿಂದ ಸೇವೆ ಸಲ್ಲಿಸುತ್ತದೆ ಎಂಬುದರ ಮೇಲೆ ಅದು ನಿರ್ಧಾರಿತವಾಗುತ್ತದೆ.

ದೇಶವು 77ನೇ ಗಣರಾಜ್ಯೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿ, ನಾಗರಿಕರು ಇಂದು ಸರ್ಕಾರದ ಆಡಳಿತದ ಕೇಂದ್ರಬಿಂದುವಾಗಿದ್ದಾರೆ ಎಂದು ಹೇಳಬಹುದು. ಇದೇ ವೇಳೆ, ಭಾರತೀಯ ಗಣರಾಜ್ಯವು ಮುನ್ನಡೆಯುತ್ತಿದೆ, ಸಾಮಾಜಿಕ ನ್ಯಾಯವನ್ನು ಬಲಪಡಿಸುತ್ತಿದೆ, ಆರ್ಥಿಕ ಸೇರ್ಪಡೆಯನ್ನು ಸಕ್ರಿಯಗೊಳಿಸುತ್ತಿದೆ ಮತ್ತು ಸಂವಿಧಾನದ ಕಲ್ಯಾಣ ಆಧಾರಿತ ಪ್ರಜಾಪ್ರಭುತ್ವದ ಆಶಯವನ್ನು ಬಲಪಡಿಸುತ್ತಿದೆ.

(ಲೇಖಕರು ಕೇಂದ್ರ ರಕ್ಷಣಾ ಸಚಿವರು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.