ಮಾನವತೆಯ ಬೆಳಕು
ಜಗಳೂರು ಮಹಮದ್ ಇಮಾಂ ಅವರ ಕುರಿತು ಬೇರೆ ಬೇರೆ ಲೇಖಕರು ಬರೆದ ದೀರ್ಘಕಾಲದ ಬರಹಗಳ ಸಂಗ್ರಹ ‘ಮಾನವತೆಯ ಬೆಳಕು’. ಸ್ವಾತಂತ್ರ್ಯ ಪೂರ್ವದಲ್ಲಿಯೇ ಸ್ಥಳೀಯ ಸಂಸ್ಥೆ ಪ್ರತಿನಿಧಿಸುವ ಮೂಲಕ ರಾಜಕೀಯ ಜೀವನಕ್ಕೆ ಇಮಾಂ ತೆರೆದುಕೊಳ್ಳುತ್ತಾರೆ. ನಂತರ ಚಿತ್ರದುರ್ಗ ಜಿಲ್ಲಾ ಬೋರ್ಡ್ ಅಧ್ಯಕ್ಷರಾಗಿ, ಪ್ರಜಾಪ್ರತಿನಿಧಿ ಸಭೆಯ ಸದಸ್ಯರಾಗಿ ಸಚಿವರಾಗಿ ಹಲವು ಖಾತೆಗಳನ್ನು ನಿರ್ವಹಿಸಿದವರು. ವೃತ್ತಿಯಿಂದ ವಕೀಲ ಪ್ರವೃತ್ತಿಯಿಂದ ಲೇಖಕರಾದ ಅವರು ಸ್ವಾತಂತ್ರ್ಯೋತ್ತರ ರಾಜಕೀಯದಲ್ಲಿಯೂ ಸಕ್ರಿಯರಾಗಿದ್ದರು. ವಿಧಾನ ಸಭೆಯ ವಿರೋಧ ಪಕ್ಷದ ನಾಯಕರಾಗಿಯೂ ಕೆಲಸ ಮಾಡಿದ್ದಾರೆ.
ಇಮಾಂ 15.2.1892ರಲ್ಲಿ ಜಗಳೂರು ತಾಲ್ಲೂಕಿನ ಮರೇನಹಳ್ಳಿಯಲ್ಲಿ ಸಾಹುಕಾರ್ ಬಡೇ ಸಾಬ್ ಅವರ ಎರಡನೇ ಮಗನಾಗಿ ಜನಿಸಿದರು. ಭೂಗರ್ಭಶಾಸ್ತ್ರದಲ್ಲಿ ಪದವಿ ಪಡೆದ ಅವರು ಅಂದಿನ ಮದ್ರಾಸಿನಲ್ಲಿ ಕಾನೂನು ಪದವಿಯನ್ನು ಪೂರ್ಣಗೊಳಿಸಿದರು. 1924ರಲ್ಲಿ ಬೆಳಗಾವಿಯಲ್ಲಿ ಜರುಗಿದ ಭಾರತ ರಾಷ್ಟ್ರೀಯ ಕಾಂಗ್ರೆಸ್ನ ಮಹಾಧಿವೇಶನದಲ್ಲಿ ಭಾಗವಹಿಸಿದ್ದಾರೆ. ‘ಗಾಂಧೀಜಿಯವರು ಮಾಡಿದ ಭಾಷಣದಿಂದ ಅವರು ಪ್ರೇರಿತರಾದರು. ಆದರೆ ಅವರು ಕಾಂಗ್ರೆಸ್ ಪಕ್ಷವನ್ನು ಸೇರಲಿಲ್ಲ’ ಎಂದು ಪ್ರೊ. ಜೆ.ಎಸ್. ಸದಾನಂದ ತಮ್ಮ ‘ಶ್ರೀ ಜಗಳೂರು ಮಹಮ್ಮದ್ ಇಮಾಮ್: ಪರಿಚಯ’ ಲೇಖನದಲ್ಲಿ ಉಲ್ಲೇಖಿಸಿದ್ದಾರೆ.
ಸಾಮಾನ್ಯರ ಪಾಲಿಗೆ ಇಮ್ಮಣ್ಣ ಆಗಿದ್ದ ಇಮಾಂ ಅವರ 82ನೇ ಜನ್ಮ ದಿನಕ್ಕೆ ಶುಭ ಕೋರಿ ಅಂದಿನ ಉಪರಾಷ್ಟ್ರಪತಿ ಬಸಪ್ಪ ದಾನಪ್ಪ ಜತ್ತಿ ಬರೆದ ಪತ್ರವೂ ಸೇರಿ, ಮಾಜಿ ಮುಖ್ಯಮಂತ್ರಿಗಳಾದ ಎಸ್. ನಿಜಲಿಂಗಪ್ಪ ಅವರ ‘ನಾ ಕಂಡ ಜಗಳೂರು ಇಮಾಂ ಸಾಹೇಬರು’, ಕೆಂಗಲ್ ಹನುಮಂತಯ್ಯ ಅವರ ‘ಕರ್ನಾಟಕ ಏಕೀಕರಣ ಪುರುಷ’, ಕಡಿದಾಳ್ ಮಂಜಪ್ಪ ಅವರ ‘ಮುಷಿರ್–ಉಲ್–ಮುಲ್ಕ್ ಜೆ. ಮಹಮದ್ ಇಮಾಮರು’ ಲೇಖನಗಳನ್ನು ಈ ಕೃತಿ ಒಳಗೊಂಡಿದೆ. ಮಲ್ಲಾಡಿಹಳ್ಳಿ ರಾಘವೇಂದ್ರ ಗುರೂಜಿ, ಪಾಟೀಲ ಪುಟ್ಟಪ್ಪ, ಜಿ.ಪಿ. ರಾಜರತ್ನಂ ಸೇರಿದಂತೆ ಅನೇಕ ಲೇಖಕರ 65ಕ್ಕೂ ಅಧಿಕ ಲೇಖನಗಳಿಂದ ಈ ಗ್ರಂಥ ರೂಪಿತಗೊಂಡಿದೆ.
ಸಂ: ಎನ್.ಟಿ. ಎರ್ರಿಸ್ವಾಮಿ, ದಾದಾಪೀರ್ ನವಿಲೇಹಾಳ್
ಪ್ರ: ಜೆ.ಎಂ. ಇಮಾಂ ಟ್ರಸ್ಟ್
ಸಂ: 9980240916
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.