ವೃತ್ತಿಯಲ್ಲಿ ನೈಋತ್ಯ ರೈಲ್ವೆ ಹಿರಿಯ ಎಂಜಿನಿಯರ್ ಆಗಿರುವ ಸಚ್ಚಿದಾನಂದ ಚಟ್ನಳ್ಳಿ ಅವರ ಹನ್ನೆರಡನೇ ಕೃತಿ ‘ಅನುಭಾವ ತರಂಗ’. ವೃತ್ತಿ ಜೀವನದ ಜೊತೆಗೆ ಪ್ರವೃತ್ತಿಯಾಗಿ ಶರಣ ಸಾಹಿತ್ಯ ಲೋಕದಲ್ಲೂ ಈಜುತ್ತಾ ಬರೆದ ಸಂಶೋಧನಾತ್ಮಕ ಲೇಖನಗಳು ಇಲ್ಲಿವೆ.
ಬಸವಣ್ಣನವರ ಸಮಗ್ರ ಕ್ರಾಂತಿಯನ್ನು ಚಿತ್ರೀಕರಿಸುತ್ತಾ ಆರಂಭವಾಗುವ ಕೃತಿ, ಲಿಂಗಾಯತ ಧರ್ಮ ಸಂವಿಧಾನ ಮತ್ತು ಭಾರತ ದೇಶದ ಸಂವಿಧಾನದ ತುಲನಾತ್ಮಕ ಅಧ್ಯಯನವನ್ನೂ ನಡೆಸಿದೆ. ಲಿಂಗಾಯತ ಧರ್ಮದ ಸಂಸ್ಕೃತಿಯಲ್ಲಾಗುತ್ತಿರುವ ಬದಲಾವಣೆಗಳನ್ನೂ ಅವರು ಸೂಕ್ಷ್ಮವಾಗಿ ಪ್ರಸ್ತಾಪಿಸಿದ್ದಾರೆ. ‘ವಚನಗಳು ನಮ್ಮ ವರ್ತನೋಪದೇಶವಾಗಲಿ’ ಎನ್ನುವ ಅಧ್ಯಾಯದಲ್ಲಿ ವಚನಗಳು ಕೇವಲ ಬೇರೆಯವರಿಗೆ ಹೇಳುವ ಉಪದೇಶವಾಗದಿರಲಿ ಎನ್ನುವುದನ್ನು ಅವರು ವಿವರಿಸಿದ್ದಾರೆ. ಪ್ರತಿ ಅಧ್ಯಾಯದಲ್ಲೂ ಸಂದರ್ಭೋಚಿತವಾಗಿ ವಚನಗಳನ್ನು ಉಲ್ಲೇಖಿಸುತ್ತಾ, ವಿಷಯದ ವಿವರಣೆ ಇರುವುದು ವಿಶೇಷ.
‘ಅನೇಕ ಶರಣ ಜನರ ಜ್ಞಾನದ ಕೊಡವನ್ನು ಹೆಚ್ಚಿನ ವೈವಿಧ್ಯತೆಯಿಂದ ತುಂಬಿಸುವ ಪ್ರಯತ್ನ ಚಟ್ನಳ್ಳಿ ಅವರದು. ಅವರು ಆರಿಸಿಕೊಂಡಿರುವ ವಿವಿಧ ವಿಚಾರಗಳ ಕುರಿತ ಅವರ ತೀಕ್ಷ್ಣ ಅನುಭಾವ ಹರಿತವಾದದ್ದು. ಅಷ್ಟೇ ಅಲ್ಲ, ಸಾಹಿತ್ಯ ತತ್ವಜ್ಞಾನ ಮತ್ತು ಅನುಭಾವ ಸೌಂದರ್ಯ ಸಹಿತವಾದುದೂ ಹೌದು’ ಎಂದು ಮುನ್ನುಡಿಯಲ್ಲಿ ಕೆ.ಬಸವರಾಜ ಅವರು ಉಲ್ಲೇಖಿಸುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.