ಸರೋದ್ ಸ್ವರಯಾನ
ಸಂ: ಗಣೇಶ ಅಮೀನಗಡ,ರಘುಪತಿ ತಾಮ್ಹನ್ಕರ್
ಪ್ರ: ಕವಿತಾ ಪ್ರಕಾಶನ, ಮೈಸೂರು
ಸಂ: 9880105526
**
ವಿಶ್ವಪ್ರಸಿದ್ಧ ಸರೋದ್ ವಾದಕರಲ್ಲಿ ಪಂಡಿತ್ ರಾಜೀವ ತಾರಾನಾಥರು ಅಗ್ರಗಣ್ಯರು. 90ರ ಹೊಸ್ತಿಲಿನಲ್ಲಿರುವ ಸರೋದ್ ಮಾಂತ್ರಿಕನ ಆಸ್ವರಯಾನವನ್ನು ದಾಖಲಿಸುವ ಲೇಖನಗಳ ಸಂಕಲನವೇ ‘ಸರೋದ್ ಸ್ವರಯಾನ’.
ರಾಜೀವ ತಾರಾನಾಥ ಅವರ ಕುರಿತು ಈಗಾಗಲೇ ಹಲವು ಕೃತಿಗಳು ಪ್ರಕಟವಾಗಿವೆ. ಈ ನುಡಿತೋರಣ ‘ಸರೋದ್ ಸ್ವರಯಾನ’ದಲ್ಲಿ ಚಂದ್ರಶೇಖರ ಕಂಬಾರ, ನ.ರತ್ನ, ಸುಮಂಗಲಾ, ರಹಮತ್ ತರೀಕೆರೆ ಮುಂತಾದವರು ಬರೆದ ಲೇಖನಗಳನ್ನು ಆಯ್ದು ಪ್ರಕಟಿಸಲಾಗಿದೆ. ಜೊತೆಗೆ ರಾಜೀವ ತಾರಾನಾಥ ಅವರು ನುಡಿಸಿದ ತಮ್ಮ ಜೀವನದ ಚಿತ್ರಣ, ಸಂಗೀತ ಪಯಣವನ್ನು ಕೀರ್ತಿನಾಥ ಕುರ್ತಕೋಟಿ, ಯು.ಆರ್.ಅನಂತಮೂರ್ತಿ, ಜಯಂತ ಕಾಯ್ಕಿಣಿ, ಗಿರೀಶ ಕಾಸರವಳ್ಳಿ, ಶ್ರೀದೇವಿ ಕಳಸದ ಅವರು ಮಾತುಕತೆಯ ಸಂದರ್ಶನಗಳ ಮೂಲಕ ಇಲ್ಲಿ ಕಟ್ಟಿಕೊಟ್ಟಿದ್ದಾರೆ.
ಇಲ್ಲಿನ ಸಂದರ್ಶನಗಳಲ್ಲಿ ಪ್ರಶ್ನೆಗಳ ಪುನರುಕ್ತಿ ಇದ್ದರೂ, ರಾಜೀವ ತಾರಾನಾಥ ಅವರ ಉತ್ತರಗಳಲ್ಲಿ ಮಾಹಿತಿ ವಿಸ್ತರಿಸುತ್ತಾ ಹೋಗುತ್ತದೆ. ಉದಾಹರಣೆಯಾಗಿ, ಒಂದೆಡೆ ಅನಂತಮೂರ್ತಿಯವರು ‘ಸಾಹಿತ್ಯ ಮತ್ತು ಸಂಗೀತದಲ್ಲಿ ನಿಮಗೆ ಹೆಚ್ಚು ಹತ್ತಿರ ಯಾವುದು?’ ಎಂದಾಗ ‘ಸಂಗೀತ’ ಎಂದಷ್ಟೇ ಉತ್ತರಿಸಿ ಮಾತು ಮುಗಿಸಿದ್ದ ತಾರಾನಾಥರು, ಜಯಂತ ಕಾಯ್ಕಿಣಿ ಜೊತೆಗೆ ಮಾತಿಗಿಳಿಯುತ್ತಾ, ‘ಹಾಡುವುದು ಹಾಗೂ ಸರೋದ್ ವಾದನ ಅದೊಂದು ತುರಿಸು ರೀ, ಜೀವಕ್ಕಿಂತ ಹೆಚ್ಚಲ್ಲ. ಆ ತುರಿಸಿನಿಂದ ಅದೆಷ್ಟು ಹಿತಪಡ್ತೀರಲ್ಲ. ಅದಿಲ್ಲದೇ ನಿಮಗೆ ಇರೋಕ್ಕೆ ಆಗುತ್ಯೇ? ಸಾಯೋ ತನಕ ಇರುತ್ತೆ. ಹಾಗೇ ಅದು ಆಗಬೇಕು’ ಎಂದು ಸುದೀರ್ಘವಾಗುತ್ತಾರೆ. ಇದೇ ರೀತಿ ಪ್ರತಿ ಮರುನುಡಿಯ ಗಾಢತೆಯೂ ಪುಟ ಉರುಳಿದಂತೆ ಹೆಚ್ಚುತ್ತದೆ. ಲೇಖನಗಳನ್ನು ಆಯ್ಕೆ ಮಾಡುವಲ್ಲಿ ಸಂಪಾದಕರಾದಗಣೇಶ ಅಮೀನಗಡ , ರಘುಪತಿ ತಾಮ್ಹನ್ಕರ್ ವೈವಿಧ್ಯಕ್ಕೆ ಒತ್ತು ನೀಡಿದ್ದಾರೆ. ಇದರಿಂದ ತಾರಾನಾಥರ ವ್ಯಕ್ತಿತ್ವವನ್ನು ಭಿನ್ನನೋಟಗಳಿಂದ ನೋಡಲು ಸಾಧ್ಯವಾಗುತ್ತದೆ. ತಾರಾನಾಥರ ಸಂಗೀತ ಪಯಣದ ದಾಖಲೆಯಾಗಿರುವ ಈ ಕೃತಿ ಸಂಗೀತಗಾರರಿಗೆ, ಸಂಗೀತಾಸಕ್ತರಿಗೆ, ಸಾಹಿತ್ಯಾಸಕ್ತರಿಗೆ ಆಕರದಂತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.