ಮಳೆ ಬಯಲು
ಲೇ: ಕಾ ತ ಚಿಕ್ಕಣ್ಣ
ಪ್ರ: ಪಲ್ಲವ ಪ್ರಕಾಶನ, ಚನ್ನಪಟ್ಟಣ
ಪುಟ: 274
ಬೆಲೆ: ₹280
ಜಾನಪದ ಕಥಾ ಶೈಲಿಯ ಬರಹದಿಂದ ‘ಮಳೆಬಯಲು’ ಕಾದಂಬರಿಯಲ್ಲಿ ಅಕ್ಷರಗಳು ದೃಶ್ಯರೂಪವಾಗಿ ಓದುಗನ ಕಣ್ಮುಂದೆ ಬಿಡಿಸಿಕೊಳ್ಳುತ್ತವೆ. ಗ್ರಾಮ್ಯ ಭಾರತದ ಅನಾವರಣ ಇಲ್ಲಿದೆ. ಹುಟ್ಟೂರು ಬಿಟ್ಟು ನಗರಕ್ಕೆ ವಲಸೆ ಬರುವುದು, ಹೊಸ ವಾತಾವರಣಕ್ಕೆ ಹೊಂದಿಕೊಳ್ಳಲು ತಲ್ಲಣಿಸುವ ಮನಸ್ಸು. ಹೊಸದಾಗಿ ಬದುಕು ಕಟ್ಟಿಕೊಳ್ಳುವ ಧಾವಂತ, ಹಳ್ಳಿಯಿಂದ ನಗರಕ್ಕೆ ಹೊರಟವರ ಬದುಕಿನ ಸ್ಥಿತ್ಯಂತರವನ್ನು ಕಾದಂಬರಿ ದಾಖಲಿಸಿರುವ ಬಗೆ ಗಮನಾರ್ಹ. ಸಂಪಾದನೆಯ ಅರ್ಥವನ್ನು ಭೂಮಿ ಖರೀದಿಯಲ್ಲಿ; ಒಡೆತನದಲ್ಲಿ ಸಾರ್ಥಕ ಮಾಡಿಕೊಳ್ಳುತ್ತಿರುವ ಇಂದಿನ ತಲೆಮಾರಿನ ಚಿತ್ರಣವನ್ನು ಕಾದಂಬರಿ ಸೂಕ್ಷ್ಮವಾಗಿ ಹರವಿಕೊಂಡಿದೆ.
ಹಳ್ಳಿ ಬದುಕಿನ ಸಾಮಾಜಿಕ, ಸಾಂಸ್ಕೃತಿಕ ಪಲ್ಲಟಗಳನ್ನು ಕಾದಂಬರಿ ತೀವ್ರವಾಗಿ ತೋರಿದೆ. ಜನಪದ ಸಂಸ್ಕೃತಿ ಮತ್ತು ಆಧುನಿಕ ಸಾಮಾಜಿಕ ಸಮೀಕರಣದ ನಡುವಿನ ಮಿಳಿತಗಳು ಪಾತ್ರದಿಂದ ಪಾತ್ರಕ್ಕೆ ಹೆಚ್ಚು ಅಭಿವ್ಯಕ್ತಿಗೊಂಡಿವೆ. ಅಭಿವೃದ್ಧಿಯ ಹೊದ್ದಿಕೆಯೊಳಗೆ ಗ್ರಾಮ್ಯ ಸೊಗಡಿನ ಕೆಂಬಾರೆಪುರವೇ ಒಂದು ಪಾತ್ರವಾಗಿ ಆಧುನಿಕೋತ್ತರ ತಲ್ಲಣಗಳನ್ನು ಓದುಗನ ಗ್ರಹಿಕೆಗೆ ಮುಟ್ಟಿಸುತ್ತದೆ. ಕಾದಂಬರಿ ಒಳಗೊಂಡಿರುವ ಸ್ತ್ರೀಚೈತನ್ಯ ಸಾರವೂ ಸ್ತ್ರೀ ಸಂವೇದನೆ ನೋಡುವ ಬಗೆಯ ಹೊಸ ಕಣ್ಣುಗಳಾಗಿವೆ. ಮನುಷ್ಯ ಮೂಢನಾಗಿ ಮಾಡಿಕೊಂಡ ಹಲವು ಜೀವವಿರೋಧಿ ಕಟ್ಟಳೆಗಳನ್ನು ಇಲ್ಲಿನ ಸ್ತ್ರೀ ಪಾತ್ರಗಳು ಪ್ರಶ್ನಿಸುತ್ತವೆ. ಧರ್ಮದ ಸರಹದ್ದುವಿನೊಳಗೆ ಸಿಡಿದು, ಜಾತಿ ಗೆರೆಗಳನ್ನು ಮೀರುವ ಮತ್ತು ಬಾಳುವ ಹೆಣ್ಣುಮಕ್ಕಳು ಇಲ್ಲಿ ಗಟ್ಟಿಯಾಗಿ ನಿಲ್ಲುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.