ADVERTISEMENT

ಭಾರತದ ಸಮಾಜ ಮತ್ತು ಮತ ಸುಧಾರಕರು: ಸಮಾಜ ಸುಧಾರಕರ ಕೈಪಿಡಿ

ಪ್ರಜಾವಾಣಿ ವಿಶೇಷ
Published 24 ಜೂನ್ 2023, 23:28 IST
Last Updated 24 ಜೂನ್ 2023, 23:28 IST
ಬುಕ್‌
ಬುಕ್‌   

ಭಾರತ ಇತಿಹಾಸದ ಪುಟಗಳಲ್ಲಿ ಸಮಾಜ ಸುಧಾರಣೆ ಮಾಡಿರುವ ಅನೇಕ ಮಹನೀಯರು ಸಿಗುತ್ತಾರೆ. ಅಂತಹ ವ್ಯಕ್ತಿಗಳ ಕುರಿತು ಕಿರುಚಿತ್ರಣ ನೀಡುವ ಕೃತಿಯೇ ‘ಭಾರತದ ಸಮಾಜ ಮತ್ತು ಮತ ಸುಧಾರಕರು’. ಚರಿತ್ರೆಯ ಅಧ್ಯಯನದಲ್ಲಿ ತೊಡಗಿಸಿಕೊಂಡಿರುವ, ಈಗಾಗಲೇ ಚರಿತ್ರೆ ಕುರಿತು ಕೆಲ ಕೃತಿಗಳನ್ನು ರಚಿಸಿರುವ ಡಾ.ಎ.ಸಿ.ನಾಗೇಶ, ಎಚ್‌.ಪರಮೇಶ್ವರ ಈ ಕೃತಿಯ ಲೇಖಕರು.

‘ಚರಿತ್ರೆಯ ನಿರ್ಮಾಪಕರು ಆಯಾ ಕಾಲಘಟ್ಟಗಳಲ್ಲಿ ಜನತಾ ಸಮೂಹವೇ ಆದ್ದರಿಂದ ಯಾವುದೋ ಒಬ್ಬ ಧೀರೋದಾತ್ತ ವ್ಯಕ್ತಿ ಇಡೀ ಇತಿಹಾಸಕ್ಕೆ ತಿರುವು ನೀಡಬಹುದೆಂಬ ಮಿಥ್ಯೆಯನ್ನು ಪುರಸ್ಕರಿಸುವಂತಿಲ್ಲ. ಆದಾಗ್ಯೂ ತಮ್ಮ ಚಿಂತನೆ ಮತ್ತು ಕ್ರಿಯೆಗಳಿಂದ ಅನೇಕ ಮಹಾನ್‌ ವ್ಯಕ್ತಿಗಳು ಸಮುದಾಯದ ಆಶೋತ್ತರಗಳನ್ನು ಪ್ರತಿಫಲಿಸಿರುವುದುಂಟು’ ಎಂದು ಕೃತಿಯ ಬೆನ್ನುಡಿಯಲ್ಲಿ ಡಾ.ಜಿ.ರಾಮಕೃಷ್ಣ ಹೇಳಿದ್ದಾರೆ. 

ಕೃತಿಯನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ. ಮೊದಲನೇ ಭಾಗದಲ್ಲಿ ಪ್ರಾಚೀನ ಭಾರತದ ಸಾಮಾಜಿಕ ಮತ್ತು ಧಾರ್ಮಿಕ ಸುಧಾರಕರ ಕುರಿತ ಮಾಹಿತಿಯಿದೆ. ಇದರಲ್ಲಿ ಜೈನಮತ ಸಂಸ್ಥಾಪಕ ವರ್ಧಮಾನ ಮಹಾವೀರ ಹಾಗೂ ಬೌದ್ಧಮತದ ಸ್ಥಾಪಕ ಮಹಾತ್ಮ ಬುದ್ಧರ ಕುರಿತಾದ ಒಂದಷ್ಟು ವಿಚಾರಗಳಿವೆ. ಈ ಎರಡೂ ಮತಗಳ ಉಗಮ, ಬೆಳವಣಿಗೆ ಮತ್ತು ಪತನದವರೆಗಿನ ಸಾಕಷ್ಟು ವಿಚಾರಗಳನ್ನು ಲೇಖಕರು ಈ ಭಾಗದಲ್ಲಿ ವಿವರಿಸಿದ್ದಾರೆ.

ADVERTISEMENT

ಎರಡನೇ ಭಾಗದಲ್ಲಿ ಮಧ್ಯಕಾಲೀನ ಭಾರತದ ಸಾಮಾಜಿಕ ಮತ್ತು ಮತ ಸುಧಾರಕರ ಬಗ್ಗೆ ಮಾಹಿತಿ ಇದೆ. ಈ ಅಧ್ಯಾಯದಲ್ಲಿ ಶಂಕರಾಚಾರ್ಯ, ರಾಮಾನುಜಾಚಾರ್ಯರಿಂದ ಹಿಡಿದು ರಮಾನಂದರವರೆಗಿನ ಸುಧಾರಕರ ಮಾಹಿತಿ ಲಭಿಸುತ್ತದೆ. ಬಳಿಕ ಅಕ್ಬರ್‌, ಔರಂಗಜೇಬನ ಕಾಲದ ಧಾರ್ಮಿಕ ಬದಲಾವಣೆಗಳ ಬಗ್ಗೆ ಲೇಖಕರು ಬರೆಯುತ್ತಾರೆ. ಭಕ್ತಿ ಚಳವಳಿಗಳ ಪ್ರಭಾವವನ್ನೂ ಹೇಳುತ್ತಾರೆ. ಕೊನೆಯ ಅಧ್ಯಾಯದಲ್ಲಿ 19–20 ಶತಮಾನದ ಸುಧಾರಕರ ಬಗ್ಗೆ ಮಾಹಿತಿ ಸಿಗುತ್ತದೆ. ಒಟ್ಟಾರೆಯಾಗಿ ಅಧ್ಯಯನ ಆಸಕ್ತರಿಗೆ ಸಾಕಷ್ಟು ವಿಚಾರ ಒದಗಿಸುವ ಕೃತಿ.

ಭಾರತದ ಸಮಾಜ ಮತ್ತು ಮತ ಸುಧಾರಕರು

ಲೇ:ಡಾ.ಎ.ಸಿ.ನಾಗೇಶ, ಎಚ್‌.ಪರಮೇಶ್ವರ

ಪ್ರ: ಚಿರಂತ್‌ ಪ್ರಕಾಶನ

ಸಂ: 8453338360‌

ಪು: 152

ಬೆ: 225

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.