ಅಕ್ಷರ ವಂಚಿತ ಸಮುದಾಯದಿಂದ ಬಂದು, ಕಷ್ಟಗಳ ನಡುವೆ ತೊಳಲಾಡಿ ಕರ್ನಾಟಕ ಹಾಗೂ ಜಮ್ಮು ಮತ್ತು ಕಾಶ್ಮೀರದ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಜಸ್ಟೀಸ್ ಎಂ. ರಾಮಕೃಷ್ಣ ಅವರ ಬದುಕನ್ನು ತೆರೆದಿಟ್ಟಿದೆ ಈ ಅಭಿನಂದನಾ ಗ್ರಂಥ.
ರಾಮಕೃಷ್ಣ ಅವರ ಬಾಲ್ಯದಲ್ಲಿ (ಮಾಗಡಿ ರಸ್ತೆಯ ಗೋಪಾಲಪುರ) ತಳ ಸಮುದಾಯದವರ ಪೈಕಿ ನಾಲ್ಕಕ್ಷರ ಕಲಿತವರಲ್ಲಿ ಇವರೇ ಪ್ರಮುಖರು. ಹಾಗಾಗಿ ಅಂದು ರಾಮಕೃಷ್ಣ ಅವರನ್ನು ಇಸ್ಕೂಲಪ್ಪ ಎಂದು ಅವರ ಓರಗೆಯವರು ಕರೆಯುತ್ತಿದ್ದರಂತೆ. ಆ ಕಾರಣಕ್ಕೆ ಕೃತಿಗೆ ‘ಇಸ್ಕೂಲಪ್ಪ’ ಎಂದು ಹೆಸರಿಸಲು ಹಲವರು ಚರ್ಚಿಸಿ ನಿರ್ಧರಿಸಿದೆವು ಎಂದಿದ್ದಾರೆ ಸಂಪಾದಕರು.
ನಿಷ್ಕಳಂಕವಾಗಿ ಸೇವಾವಧಿಯನ್ನು ಪೂರೈಸಿ, ಸಾಮಾಜಿಕ ನೆಲೆಯಲ್ಲಿ ತುಳಿತಕ್ಕೆ ಒಳಗಾದವರು, ಬಡವರು ಮತ್ತು ಮಹಿಳೆಯರ ಮೇಲೆ ವಿಶೇಷ ಕಾಳಜಿ ಹೊಂದಿದ ವ್ಯಕ್ತಿತ್ವ ಈ ಕೃತಿಯಲ್ಲಿ ಅನಾವರಣಗೊಂಡಿದೆ. ವಿವಿಧ ಲೇಖಕರು, ಕವಿಗಳು ಅಭಿಮಾನಿಗಳು ರಾಮಕೃಷ್ಣ ಅವರ ಬಹುಮುಖಿ ಬದುಕಿನ ಚಿತ್ರಣವನ್ನು ಕಟ್ಟಿ ಕೊಟ್ಟಿದ್ದಾರೆ. 45 ಲೇಖನಗಳಲ್ಲಿ ಅವರ ವ್ಯಕ್ತಿತ್ವ ಚಿತ್ರಿತವಾಗಿದೆ. ಅಕ್ಷರವೊಂದನ್ನೇ ಅಕ್ಕರೆಯಿಂದ ಪ್ರೀತಿಸಿದವರು ಯಾವುದೇ ಎತ್ತರಕ್ಕೆ ಏರಬಹುದು ಎಂಬುದನ್ನು ಹೇಳಲು ಹೊರಟ ಸ್ಫೂರ್ತಿದಾಯಕ ಬರಹಗಳು ಇಲ್ಲಿವೆ.
ಕೃತಿ: ಇಸ್ಕೂಲಪ್ಪ (ಜಸ್ಟೀಸ್ ಎಂ. ರಾಮಕೃಷ್ಣ ಅಭಿನಂದನಾ ಗ್ರಂಥ)
ಸಂ.: ಜಾಂಬವ ಎಂ. ಗಂಗಾಧರ್
ಪ್ರ: ಆದಿಜಾಂಬವ ಜಾಗೃತಿ, ಬೆಂಗಳೂರು
ಸಂ: 9901750002
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.