‘ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ.. ಇರೋದ್ರೊಳಗೆ ಒಮ್ಮೆ ನೋಡು ಜೋಗಾದ್ ಗುಂಡಿ...’ ಹೀಗೊಮ್ಮೆ ಗುನುಗುನಿಸಿದಾಗ ಜೋಗ ಜಲಪಾತದ ಆಳ, ಅಬ್ಬರ ಕಣ್ಮುಂದೆ ಬರುತ್ತದೆ. ಆದರೆ ಈ ಜಲಪಾತದ ಜನನ ಹೇಗಾಯಿತು ಎಂಬುದೂ ಸೇರಿದಂತೆ ಜಗತ್ತಿನಲ್ಲಿರುವ ಅದ್ಭುತ ಜಲಪಾತಗಳ ವಿವರವನ್ನರಿಯಲು ಈ ಕೃತಿಯನ್ನೊಮ್ಮೆ ಓದಬೇಕು.
ಈ ಕೃತಿ ವೈಜ್ಞಾನಿಕ ಲೇಖನಗಳ ಸಂಗ್ರಹ. ಪತ್ರಿಕೆಗಳಿಗೆ ಬರೆದ ಲೇಖನಗಳ ಸಂಕಲನ. ಮೂಲತಃ ಭೂವಿಜ್ಞಾನ ತಜ್ಞರಾಗಿರುವ ಹೆಚ್.ಚಂದ್ರಶೇಖರ ಅವರ ಈ ಕೃತಿಯಲ್ಲಿನ ಲೇಖನಗಳು ಈ ವಿಷಯಕ್ಕೇ ಹೆಚ್ಚು ಒತ್ತು ನೀಡಿವೆ. ಮಂಡ್ಯ ಜಿಲ್ಲೆಯ ದೊಡ್ಡೇಗೌಡನ ಕೊಪ್ಪಲಿನಲ್ಲಿ 1972ರಲ್ಲಿ ಸಂಭವಿಸಿದ ಭೂಕಂಪ, ರಾಜ್ಯದಲ್ಲಿನ ಪುರಾತನ ಬಾವಿಗಳು, ಜಲಪಾತಗಳು, ಭೂಕಂಪದ ಸಂಭವ ಎಷ್ಟಿದೆ, ಖನಿಜ ಸಂಪತ್ತು, ಹಂಪಿಯ ಶಿಲೆ, ಇರ್ದೆಯ ಬಿಸಿ ನೀರಿನ ಬುಗ್ಗೆ ಮುಂತಾದ ವಿಷಯಗಳ ಕುರಿತ ಲೇಖನಗಳು ಇಲ್ಲಿವೆ. ಅಂಕಿ–ಅಂಶ, ನಕ್ಷೆಗಳು ಲೇಖನಗಳನ್ನು ಮತ್ತಷ್ಟು ಅರ್ಥೈಸಿಕೊಳ್ಳಲು ಪೂರಕವಾಗಿವೆ. ಹೀಗಾಗಿ ಇಲ್ಲಿ 50 ಲೇಖನಗಳಷ್ಟೇ ಇದ್ದರೂ, ಕೃತಿಯ ಗಾತ್ರ ಬೃಹತ್ ಆಗಿದೆ.
ಕರ್ನಾಟಕದ ಮಣ್ಣಿನಲ್ಲಿರುವ ಖನಿಜ ಸಂಪತ್ತನ್ನು ವಿವರಿಸುವ ಲೇಖನದಲ್ಲಿ ‘ಬಹುರತ್ನಾ ವಸುಂಧರಾ’ ಎಂಬ ಕನ್ನಡ ಕವಿತೆಯ ಮೂಲಕ ಲೇಖಕರು ವರ್ಣನೆಗೆ ಇಳಿಯುತ್ತಾರೆ. ಇದೇ ರೀತಿ ಕನ್ನಡ ಕವಿಗಳ ಕವಿತೆಗಳು ಹಲವು ಲೇಖನಗಳಲ್ಲಿ ಉಲ್ಲೇಖಿಸಲ್ಪಡುತ್ತವೆ. ಇದು ಅವರ ಸಾಹಿತ್ಯ ಪ್ರೀತಿಯ ಸಂಕೇತವಾಗಿದೆ.
ಕೃತಿ: ಜೋಗ ಜಲಪಾತದ ಜನನ ಮತ್ತು ಇತರ ಜನಪ್ರಿಯ ಲೇಖನಗಳು
ಲೇ: ಡಾ.ಹೆಚ್.ಚಂದ್ರಶೇಖರ
ಪ್ರ: ಸಪ್ನ
ಸಂ: 080–40114455
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.