ವೃತ್ತಿಯಿಂದ ಅಂಚೆ ಇಲಾಖೆಯಲ್ಲಿದ್ದರೂ ಪತ್ರಿಕೋದ್ಯಮದೊಂದಿಗೆ ನಿರಂತರ ನಂಟು ಹೊಂದಿರುವ ಡಾ.ಅಮ್ಮಸಂದ್ರ ಸುರೇಶ್ ಮಾಧ್ಯಮ, ಪತ್ರಿಕೋದ್ಯಮ ಕುರಿತಾದ ಅಧ್ಯಯನಯೋಗ್ಯ ಕೃತಿಗಳಿಂದಲೇ ಚಿರಪರಿಚಿತರು. ಅವರು ಕನ್ನಡ ಪತ್ರಿಕೋದ್ಯಮವನ್ನು ಸುಮಾರು 2 ಶತಮಾನಗಳಿಂದ ಮುನ್ನಡೆಸಿಕೊಂಡು ಬಂದ ಒಂದಷ್ಟು ಶ್ರೇಷ್ಠ ಪತ್ರಕರ್ತರು, ಸಂಪಾದಕರನ್ನು ಪರಿಚಯಿಸುವ ‘ಪತ್ರಿಕೋದ್ಯಮದ ತೇರು ಎಳೆದವರು’ ಎಂಬ ನೂತನ ಕೃತಿಯನ್ನು ಪ್ರಕಟಿಸಿದ್ದಾರೆ. ಕನ್ನಡ ಪತ್ರಿಕೋದ್ಯಮಕ್ಕೆ 179 ವರ್ಷಗಳ ಭವ್ಯ ಇತಿಹಾಸವಿದೆ ಎಂದು ಲೇಖಕರು ಕೃತಿಯಲ್ಲಿ ಹೇಳುತ್ತಾರೆ. ಕನ್ನಡದ ಮೊದಲ ಪತ್ರಿಕೆ ಮಂಗಳೂರು ಸಮಾಚಾರ ಪ್ರಾರಂಭವಾಗಿದ್ದು 1843ರಲ್ಲಿ. ಅಲ್ಲಿಂದ ಇಲ್ಲಿತನಕ ಪತ್ರಿಕೋದ್ಯಮದ ತೇರು ಎಳೆದ ಅನೇಕ ಮಹನೀಯರಿದ್ದಾರೆ. ಅವರ ಕಿರುಪರಿಚಯ ಈ ಕೃತಿಯಲ್ಲಿದೆ.
‘ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ, ಸಂಶೋಧಕರಿಗೆ ಮತ್ತು ಪತ್ರಕರ್ತರಿಗೆ ಇದೊಂದು ಅತ್ಯುತ್ತಮ ಪರಾಮರ್ಶನ ಗ್ರಂಥವಾಗಿದೆ. ಸ್ವಾತಂತ್ರ್ಯ ಪೂರ್ವದಿಂದ ಇದುವರೆಗೂ ಪತ್ರಿಕೋದ್ಯಮದಲ್ಲಿ ದುಡಿದ–ದುಡಿಯುತ್ತಿರುವ ಮಹನೀಯರನ್ನು ಪರಿಚಯಿಸುವ ಕೃತಿ’ ಎಂದು ಬೆನ್ನುಡಿಯಲ್ಲಿ ಮಾನಸಗಂಗೋತ್ರಿಯ ಡಾ.ಸಿ.ಕೆ.ಪುಟ್ಟಸ್ವಾಮಿಯವರು ಹೇಳುತ್ತಾರೆ.
ಮಂಗಳೂರು ಸಮಾಚಾರದ ಪ್ರವರ್ತಕ ಹರ್ಮನ್ ಮೊಗ್ಲಿಂಗ್ ಅವರಿಂದ ಪ್ರಾರಂಭಿಸಿ ಬಿ.ಗಣಪತಿವರೆಗೆ 55 ಪತ್ರಕರ್ತರ ಕುರಿತಾದ ವಿವರ, ಸಾಧನೆಯ ಪರಿಚಯ ಈ ಕೃತಿಯಲ್ಲಿ ಸಿಗುತ್ತದೆ. ಭಾಷ್ಯಂ ಭಾಷ್ಯಾಚಾರ್ಯ, ಡಿ.ಜಿ.ಗುಂಡಪ್ಪ, ಸೀತಾರಾಮಶಾಸ್ತ್ರಿಗಳು, ಸಿದ್ದವನಹಳ್ಳಿ ಕೃಷ್ಣಶರ್ಮರಿಂದ ರಾಜಶೇಖರ್ ಕೋಟಿ, ನಾಗೇಶ್ ಹೆಗಡೆಯವರಂತಹ ಪತ್ರಕರ್ತರ ಮಾಹಿತಿ, ಸಾಧನೆಗಳ ಕಿರುಪರಿಚಯ ಇಲ್ಲಿದೆ.
ಪತ್ರಿಕೋದ್ಯಮದ ತೇರು ಎಳೆದವರು
ಲೇ:ಡಾ.ಅಮ್ಮಸಂದ್ರ ಸುರೇಶ್
ಪ್ರ:ಎನ್.ಕೆ.ಎಸ್.ಪ್ರಕಾಶನ
ಸಂ:9741815817 ಪು:308 ಬೆ:400
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.