ADVERTISEMENT

ಮೊದಲ ಓದು | ಬೇಸಾಯದ ಬರಹಗಳಲ್ಲಿ ಮಣ್ಣಿನ ಘಮಲು

ಪ್ರಜಾವಾಣಿ ವಿಶೇಷ
Published 21 ಜನವರಿ 2023, 22:00 IST
Last Updated 21 ಜನವರಿ 2023, 22:00 IST
ಮಣ್ಣು ಕಥನ
ಮಣ್ಣು ಕಥನ   

ಈ ಕೃತಿಯನ್ನು ಕೈಗೆತ್ತಿಕೊಂಡು ಪುಟ ತಿರುವಿದರೆ ಹಲವು ಬೆಳೆ ಬೆಳೆಯುವ ತೋಟ, ಗದ್ದೆಗಳಲ್ಲಿ ರೈತನೊಬ್ಬನ ಜೊತೆ ಚರ್ಚಿಸುತ್ತಾ, ಸ್ವಾರಸ್ಯಕರ ಘಟನೆಗಳನ್ನು ಕೇಳುತ್ತಾ ಸುತ್ತಾಡಿಬಂದ ಅನುಭವ.

ನೀರಿನಿಂದ ಪ್ರಾರಂಭವಾಗಿ ರೈತರ ಆತ್ಮಹತ್ಯೆ, ಸಾವಯವ ಕೃಷಿ, ಹಸಿರುಬೇಲಿ, ಕೃಷಿಯಲ್ಲಿನ ಕೆಲವು ಬೇಡವುಗಳು, ವಿಶಿಷ್ಟ ಬೇಸಾಯ ಪದ್ಧತಿಗಳು, ಕೃಷಿಕರ ಅನುಭವಗಳು ಹಾಗೂ ಅವರ ಪುಟ್ಟ ಸಂದರ್ಶನಗಳು... ಹೀಗೆ ಕೃಷಿಯಲ್ಲಿರುವ ವೈವಿಧ್ಯವನ್ನೇ ಇಲ್ಲಿನ ಬರಹಗಳಲ್ಲೂ ಕಾಣಬಹುದು. ಪ್ರಸ್ತುತ ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿರುವ ಕೃಷ್ಣಮೂರ್ತಿ ಬಿಳಿಗೆರೆಯವರು ಸಾವಯವ ಕೃಷಿ ಮತ್ತು ಮಳೆನೀರಿನ ಚಳವಳಿಗಳಲ್ಲಿ ಕ್ರಿಯಾಶೀಲರಾಗಿರುವವರು. ಮಕ್ಕಳ ನಾಟಕಗಳು, ಮಕ್ಕಳ ಕಥೆ, ಹಾಡುಗಳ ಸಾಹಿತ್ಯಕೃಷಿಯಲ್ಲಿ ತೊಡಗಿದ್ದ ಇವರು ಕೆಲ ಕೃಷಿ ಸಾಹಿತ್ಯಕ್ಕೂ ಲೇಖನಿ ಹಿಡಿದಿದ್ದಾರೆ. ಮಣ್ಣಿನ ಜೊತೆಗಿನ ನಂಟು ಇವರನ್ನು ಹೊಲ–ಗದ್ದೆ–ತೋಟಗಳಲ್ಲಿ ಸುತ್ತಾಡಿಸಿದೆ.

ಕೃತಿಯ ಆರಂಭದಲ್ಲಿ ಪ್ರಸ್ತುತ ಜಾಗತಿಕವಾಗಿ ಚರ್ಚೆಯಲ್ಲಿರುವ ನೀರಿನ ಕೊರತೆಯ ನಾನಾ ಮಗ್ಗಲುಗಳನ್ನು ಅವರು ಅನಾವರಣಗೊಳಿಸುತ್ತಾ ಸಾಗಿದ್ದಾರೆ. ಉಳುವವನ ಕೈಯಲ್ಲಿರುವ ಭೂಮಿ ಹವ್ಯಾಸಿ ಕೃಷಿಕರ, ಕ್ಷಣಕಾಲದ ಹಸಿರು ಪ್ರೀತಿ ಹೊತ್ತವರ ಕೈಸೇರುತ್ತಿರುವುದ ಅಪಾಯವನ್ನೂ ಸೂಕ್ಷ್ಮವಾಗಿ ಬಿಳಿಗೆರೆಯವರು ಇಲ್ಲಿ ಉಲ್ಲೇಖಿಸಿದ್ದಾರೆ. ‘ಕಾವೇರಿಯ ಸಾವಿಗೆ...’ ಅಧ್ಯಾಯದಲ್ಲಿ ಲೇಖಕರು ಮುಂದಿಟ್ಟಿರುವ ಒಳನೋಟ ಗಂಭೀರವಾಗಿ ಚಿಂತಿಸಬೇಕಾದ ವಿಷಯ. ‘ಕೋತಿ ಹಿಡಿಸಿದ ಕತೆ’ಯಲ್ಲಿ ಕೋತಿಗಳ ಸ್ವಾರಸ್ಯಕರ ಗುಂಪುಗಾರಿಕೆಯನ್ನು ಅವರು ವರ್ಣಿಸಿದ್ದಾರೆ. ಬರಹಗಳಲ್ಲಿ ಆಪ್ತತೆ ಇದೆ.

ADVERTISEMENT

ಕೃಷಿ ಸಾಹಿತ್ಯದಲ್ಲಿ ಇದೊಂದು ಉಲ್ಲೇಖಾರ್ಹ ಕೃತಿ. ಸುಸ್ಥಿರ ಕೃಷಿ ಪಯಣಕ್ಕೆ ಹೆಜ್ಜೆ ಇಡಲು ಇಚ್ಚಿಸುವವರಿಗೆ ಪಠ್ಯದಂತಿರುವ ಈ ಕೃತಿ, ಕೃಷಿ ಆಸಕ್ತರಿಗೂ ಮಣ್ಣಿನ ಪರಿಮಳ ನೀಡಿದೆ.

ಕೃತಿ: ಮಣ್ಣು ಕಥನ

ಲೇ: ಕೃಷ್ಣಮೂರ್ತಿ ಬಿಳಿಗೆರೆ

ಪ್ರ: ನಮ್ಮ ಪ್ರಕಾಶನ, ಬಿಳಿಗೆರೆ

ಸಂ: 9481490975

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.