ADVERTISEMENT

ಮೊದಲ ಓದು | ಮನುಷ್ಯತ್ವಕ್ಕೆ ಮುಖ ಮಾಡುವ ಬರಹಗಳು

​ಪ್ರಜಾವಾಣಿ ವಾರ್ತೆ
Published 21 ಮೇ 2023, 0:19 IST
Last Updated 21 ಮೇ 2023, 0:19 IST
   

‘ಮನುಷ್ಯ ಜಾತಿ ತಾನೊಂದೆ ವಲಂ’ ಎಂಬ ಪಂಪನ ಪ್ರಸಿದ್ಧ ನುಡಿಯನ್ನೇ ಶೀರ್ಷಿಕೆಯಾಗಿ ಹೊಂದಿರುವ ಬರಗೂರರ ನೂತನ ಕೃತಿ ಮನುಷ್ಯ ಧರ್ಮವನ್ನು ತಿಳಿಸಿಕೊಡುವ ಕಿರು ಲೇಖನಗಳ ಸಂಗ್ರಹ.  ‘ಮನುಷ್ಯ ಜಾತಿ ತಾನೊಂದೆ ವಲಂ’ ಎಂಬ ಮಾತು ಸಾರ್ವಕಾಲಿಕ ಆದರ್ಶವಾದ ಒಂದು ಮೌಲ್ಯವೇ ಆಗಿದೆ. ಧರ್ಮಕ್ಕೊಂದು ಕಾವ್ಯ, ರಾಜಕಾರಣಕ್ಕೊಂದು ಕಾವ್ಯವನ್ನು ಕಟ್ಟಿಕೊಟ್ಟ ಪಂಪ, ಧರ್ಮ ಮತ್ತು ರಾಜಕಾರಣಗಳನ್ನು ಬೆರೆಸಬಾರದೆಂಬ ಆದರ್ಶವನ್ನು ತನ್ನ ಕಾವ್ಯಾಭಿವ್ಯಕ್ತಿಯ ವಿಂಗಡನೆಯ ವಿಧಾನದಲ್ಲೇ ಅನುಷ್ಠಾನಕ್ಕೆ ತಂದಿದ್ದಾನೆ’ ಎಂದು ಬರಗೂರರು ಲೇಖಕರ ನುಡಿಯಲ್ಲೇ ಹೇಳುತ್ತಾರೆ. 

ಕೃತಿಯಲ್ಲಿ ಒಟ್ಟು 15 ಲೇಖನಗಳಿವೆ. ‘ಬೇರೆ ಬೇರೆ ಸಂದರ್ಭದಲ್ಲಿ ಬರೆದ ಲೇಖನಗಳಿವು’ ಎಂಬುದನ್ನು ಲೇಖಕರು ಪ್ರಾರಂಭದಲ್ಲಿಯೇ ಹೇಳುತ್ತಾರೆ. ‘ಮನುಷ್ಯರು ಬೇಕಾಗಿದ್ದಾರೆ, ಹುಡುಕೋಣ ಬನ್ನಿ’ ಎಂಬ ಮೊದಲ ಲೇಖನದಲ್ಲಿ, ದೇವರು ಮತ್ತು ಮನುಷ್ಯರ ಸಂಬಂಧವನ್ನು ನಿರ್ವಚಿಸುವ ಮತ್ತು ಪ್ರತ್ಯೇಕಿಸುವ ಚಿಂತನಾ ಪರಂಪರೆಯುಳ್ಳ ದೇಶದಲ್ಲಿ ಮನುಷ್ಯರು ಮೂಲೆಗುಂಪಾಗುತ್ತಿರುವ ಕುರಿತಾಗಿನ ಕಳಕಳಿ ಕಾಣುತ್ತದೆ. ದೇಹ ರಾಜಕಾರಣದ ದಾಳವಾಗಿ ಮಹಿಳೆ ಶೋಷಿತಳಾಗುತ್ತಿರುವ ಕುರಿತಾದ ಕಳಕಳಿಯೊಂದು ಕೃತಿಯಲ್ಲಿ ಕಾಣಿಸುತ್ತದೆ. ದ್ವೇಷದಿಂದ ಮುಕ್ತ ದೇಶದ ಕನಸು ಕೃತಿಯಲ್ಲಿ ಕಾಣುತ್ತದೆ. ಒಟ್ಟಾರೆಯಾಗಿ ಜಾತಿ, ಧರ್ಮ, ದೇವರು, ಆಚರಣೆಗಳಿಂದಾಗಿ ಮರೆಯಾಗುತ್ತಿರುವ ಮಾನವೀಯತೆಯ ಕುರಿತಾದ ಕಳಕಳಿ ಇಡೀ ಕೃತಿಯಲ್ಲಿ ಅಭಿವ್ಯಕ್ತವಾಗಿದೆ. ಬರಗೂರರ ಆಳವಾದ ಚಿಂತನೆ, ಸುಲಲಿತ ಬರವಣಿಗೆ, ಗಟ್ಟಿಯಾದ ಆಶಯ ಅವರೆಲ್ಲ ಕೃತಿಗಳಂತೆ ಇದರಲ್ಲಿಯೂ ಗಟ್ಟಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT