ADVERTISEMENT

ಪುಸ್ತಕ ವಿಮರ್ಶೆ | ಅಂತರಂಗದ ಬೆಳಕಿನ ಅಕ್ಷರ

ಪ್ರಜಾವಾಣಿ ವಿಶೇಷ
Published 8 ಏಪ್ರಿಲ್ 2023, 22:15 IST
Last Updated 8 ಏಪ್ರಿಲ್ 2023, 22:15 IST
   

ಖುಷಿಯಾಗಿರುವುದೇ ಬದುಕಿನ ಉದ್ದೇಶ ಅನ್ನುವುದು ಎಲ್ಲರ ಮನದೊಳಗಿದೆ. ಆದರೆ ಆ ಖುಷಿಗಾಗಿ ಇಂದಿನ ಇರುವಿಕೆಯನ್ನು ಎಷ್ಟೋ ಬಾರಿ ಕಳೆದುಕೊಂಡಿರುತ್ತೇವೆ. ಮತ್ತೆ ಪರಿತಪಿಸುತ್ತೇವೆ. ಇಂತಹ ಅದೆಷ್ಟೋ ಸಂಗತಿಗಳನ್ನು ಲೇಖಕರು ಹೆಕ್ಕಿ ಒಂದೆಡೆ ಬರಹ ಗುಚ್ಛ ಕಟ್ಟಿಕೊಟ್ಟಿದ್ದಾರೆ. ಅಂತರಂಗದ ಮಾತುಗಳಿಗೆ ಕಿವಿಯಾಗಬಲ್ಲವರೊಬ್ಬರು ಸಾಕು. ಧ್ವನಿವರ್ಧಕ ಏಕೆ ಬೇಕು? ಎಂದು ಪ್ರಶ್ನಿಸುತ್ತಲೇ ಮನುಷ್ಯ ಸಂಬಂಧಗಳು ಪರಸ್ಪರ ಕಿವಿಯಾಗಲೇಬೇಕಾದ ಅಗತ್ಯವನ್ನು ಅಲ್ಲಲ್ಲಿ ಒತ್ತಿ ಹೇಳಿದ್ದಾರೆ.

ಎಲ್ಲ ಲೇಖನಗಳು ಒಂದಲ್ಲ ಒಂದು ಬಗೆಯಲ್ಲಿ ನಮ್ಮ ಬದುಕಿಗೆ ಹತ್ತಿರವಾಗುತ್ತವೆ. ಉದಾಹರಣೆಗೆ ನಾವು ನಾವಾಗೋದು ಯಾವಾಗ? ಲೇಖನವು ಮನುಷ್ಯ ಸಂಬಂಧಗಳು ಜಾಳಾಗುತ್ತಿರುವುದು, ಅಸ್ತಿತ್ವ ಕಳೆದುಕೊಂಡ ಪತ್ರಗಳು, ಅಕ್ಷರ ಸಾಲುಗಳು, ಕಾಡುವ ನೆನಪುಗಳು ಇತ್ಯಾದಿ ವಿಷಯಗಳನ್ನು ಒಳಗೊಂಡಿದೆ. ಪುಟ್ಟ ಮಗುವಿಗೆ ಸಂಸ್ಕೃತಿ, ಸಂಸ್ಕಾರ, ಸಹಜವಾಗಿಯೇ ಸಾಂಸ್ಕೃತಿಕ ಲೋಕ ಪರಿಚಯಿಸುವ ಪರಿಯನ್ನೂ ಸ್ವಾನುಭವದಿಂದ ದಾಖಲಿಸಿದ್ದಾರೆ. ಅಪ್ಪನೆಂಬ ಅಂತರಂಗ, ಅಪ್ಪ ಎಂಬ ಮಹಾ ಒಗಟು... ಇಂಥ ಲೇಖನಗಳು ಅಮ್ಮನಷ್ಟೇ ಮೌಲ್ಯ ಅಪ್ಪನಿಗೂ ಸಿಗಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿವೆ.

ಬದುಕಿನ ಉದ್ದೇಶಕ್ಕೆ ಸರಿಯಾದ ಪೂರ್ವತಯಾರಿ, ಸ್ನೇಹ, ಅಹಂ ನಿಯಂತ್ರಣದ ಅಗತ್ಯತೆ (ನಾನು ಹೋದರೆ ಹೋದೇನು..), ಸಾಮಾಜಿಕ ಮಾಧ್ಯಮಗಳ ಮಾಯಾ ಬಜಾರು, ತಂತ್ರಜ್ಞಾನದ ಬಲೆಯಲ್ಲಿ ಬಂಧಿಯಾಗಿ ಯಂತ್ರವಾಗಿಬಿಡುವ ಮನುಷ್ಯ ಇಂತಹ ಹಲವು ವಿಷಯಗಳನ್ನು ಚರ್ಚಿಸಿದ್ದಾರೆ. ಲೇಖಕರ ಅಧ್ಯಾಪನದ ಅನುಭವವೂ ಇಲ್ಲಿ ಮಿಳಿತವಾಗಿದೆ. ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನದ ಕೈಪಿಡಿ. ಯುವಜನರಿಗೊಂದಿಷ್ಟು ಜೀವನ ಮಾರ್ಗದರ್ಶಿ. ಪುಟ್ಟ ಪುಟ್ಟ ಲೇಖನಗಳು ಒಂದು ಗುಕ್ಕಿನಲ್ಲಿ ಓದಿಸಿಕೊಂಡು ಹೋಗುತ್ತವೆ.

ನಮ್ಮೊಳಗಿದೆ ಗೆಲುವಿನ ಬೆಳಕು
ಲೇ: ಸಿಬಂತಿ ಪದ್ಮನಾಭ
ಪ್ರ: ಅಂಕುರ್‌ ಮೀಡಿಯಾ ಪಬ್ಲಿಕೇಶನ್ಸ್‌ ತುಮಕೂರು
ಸಂ: 9449525854

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.