ADVERTISEMENT

ಅಂದಿನ ಮೊಳಕೆಯೇ ಇಂದಿನ ಮರ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2019, 19:47 IST
Last Updated 22 ಮಾರ್ಚ್ 2019, 19:47 IST
ಕಲೆ: ಭಾವು ಪತ್ತಾರ್
ಕಲೆ: ಭಾವು ಪತ್ತಾರ್   

ಶತಾಯುಷಿಯೊಬ್ಬನನ್ನು ಸಂದರ್ಶಿಸುತ್ತಪತ್ರಕರ್ತ ಕೇಳಿದ:

‘ಇಂದಿಗೆ ನಿಮಗೆ ನೂರು ವರ್ಷ ಆಯಿತಲ್ಲ. ಈ ದೀರ್ಘಾಯುಷ್ಯದ ಗುಟ್ಟೇನು?’

ಅದಕ್ಕೆ ಆ ವೃದ್ಧ ಕೊಟ್ಟ ಉತ್ತರ: ‘ಮುಖ್ಯವಾದ ಕಾರಣ ಎಂದರೆ – ನಾನು ನೂರು ವರ್ಷಗಳ ಹಿಂದೆ ಹುಟ್ಟಿದ್ದೇ!’

ADVERTISEMENT

* * *

ಇದೊಂದು ಸಾಧಾರಣ ಜೋಕ್‌ ಎಂದೆನಿಸಬಹುದು. ಆದರೆ ಆಲೋಚಿಸಿದರೆ ಇದರ ಸೂಕ್ಷ್ಮತೆ ಅರಿವಾಗುತ್ತದೆ.

ನೀವು ಸಾವಿರ ಕಿಲೋಮೀಟರ್‌ಗಳ ದೂರದಲ್ಲಿರುವ ಊರನ್ನು ಪ್ರಯಾಣ ಮಾಡಿ ತಲುಪಿದ್ದೀರಿ ಎಂದಿಟ್ಟುಕೊಳ್ಳಿ. ಈ ಸಾವಿರ ಕಿಲೋಮೀಟರ್‌ಗಳ ಗುರಿಯನ್ನು ಮುಟ್ಟಲು ನೀವು ಏನು ಮಾಡಿದಿರಿ? ಮೊದಲಿಗೆ – ಗುರಿಯನ್ನು ಮುಟ್ಟಬೇಕೆಂಬ ಸಂಕಲ್ಪಮಾಡಿ ಹೊರಟದ್ದು. ಎರಡನೆಯದು – ಒಂದೊಂದೇ ಹೆಜ್ಜೆಯನ್ನು ಇಟ್ಟು ರಸ್ತೆಯನ್ನು ಕ್ರಮಿಸಿದ್ದು.

ಅಂತೆಯೇ ಜೀವನ ಕೂಡ. ಎಂದರೆ ನಮ್ಮ ಕಣ್ಣಿಗೆ ಯಶಸ್ಸು ಮಾತ್ರ ಕಾಣಿಸುತ್ತದೆ. ಆದರೆ ಅದರ ಹಿಂದಿರುವ ಆರಂಭ, ಅದರ ಜೊತೆಗೆ ಸಾಗಿದ ಪ್ರಯತ್ನ–ಸಾಧನೆಗಳು ಕಾಣವು. ಪರೀಕ್ಷೆಯಲ್ಲಿ ರ‍್ಯಾಂಕ್‌ ಬರಲು ಕಾರಣ ನಾವು ಬರೆದ ಪರೀಕ್ಷೆ ಮಾತ್ರವೇ ಕಾರಣವಲ್ಲವಷ್ಟೆ. ನಾವು ವರ್ಷಗಳ ಮೊದಲು ಶಾಲೆಗೆ ಸೇರಿದ್ದು, ಅಕ್ಷರಗಳನ್ನು ಕಲಿತಿದ್ದು, ದಿನವೂ ಪಾಠ ಕೇಳಿದ್ದು, ಶ್ರದ್ಧೆಯಿಂದ ಓದಿದ್ದು – ಹೀಗೆ ನಿರಂತರ ಪ್ರಯತ್ನದ ಫಲವಾಗಿಯೇ ಪರೀಕ್ಷೆಯಲ್ಲಿ ನಮಗೆ ಯಶಸ್ಸು ಸಿಗಲು ಸಾಧ್ಯ, ಅಲ್ಲವೆ?

ನೂರು ವರ್ಷ ಎನ್ನುವುದು ಎಂದೋ ಒಂದು ದಿನ ಧುತ್ತೆಂದು ನಮ್ಮ ಮುಂದೆ ನಿಲ್ಲುವುದಿಲ್ಲವಷ್ಟೆ. ಒಂದೊಂದು ಕ್ಷಣವೂ ದಿನವೂ ಸೇರಿ ನೂರು ವರ್ಷಗಳ ಚಕ್ರ ಸುತ್ತಿದ ಮೇಲೆ ಅದು ನೂರು ವರ್ಷ ಎನಿಸಿಕೊಳ್ಳುವುದು. ಹೀಗಾಗಿ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎಂದಾದರೆ ನಾವು ನಿರಂತರವಾಗಿ ಅದಕ್ಕಾಗಿ ಶ್ರಮ ಪಡಬೇಕು. ನೂರು ವರ್ಷದ ಮರ ಕೂಡ ನೂರು ವರ್ಷದ ಹಿಂದೆ ಚಿಗುರೊಡೆದ ಮೊಳಕೆಯೇ ಆಗಿತ್ತು ಎನ್ನುವುದನ್ನು ಮರೆಯಬಾರದಷ್ಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.