

ನಾ ಮೋಡವಾದರೆ
ಈ ವಸುಂಧರೆಯ ಕಥೆಯನ್ನು
ಕವಿತೆಯನಾಗಿಸುತ್ತೇನೆ
ಸದಾ ಹರಿವ ಅರಿವಾಗುತ್ತೇನೆ
ಹಸಿರ ಅರಿವೆಯೂ ಆಗಿ
ಖರೆ ಕಾವ್ಯ ಜಗತ್ತು ನಿರ್ಮಿಸುತ್ತೇನೆ
ಮರ ಗಿಡಗಂಟಿಗಳ
ಕೊರಳ ನಾದವನೇ
ನಾಡಗೀತೆಯನಾಗಿಸಿ
ಅಜ್ಜಿ ನೂತ ಕೌದಿಯನೇ
ಜಗದ ಧ್ವಜವನಾಗಿಸಿಯೂ
ಈ ನೆಲದ ಕಡ ತೀರಿಸಲೆತ್ನಿಸುತ್ತೇನೆ;
ಈ ಮನುಕುಲವನೊಂದೇ ಅಲ್ಲ,
ಸಕಲ ಪ್ರಕೃತಿ ಕುಡಿಗಳನೆಲ್ಲ ಕೂಡಿಸಿ
ಬೆವರ ಬಕುತಿಗೆ ತಕ್ಕ ಪ್ರತಿಫಲ
ದೊರಕುವಂತೆ ಕರಗಿ
ನಾನೂ ಹಗುರಾಗುತ್ತೇನೆ;
ಸಾರ್ಥಕ್ಯ ಪಡೆಯುತ್ತೇನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.