ನಾ ಮೋಡವಾದರೆ
ಈ ವಸುಂಧರೆಯ ಕಥೆಯನ್ನು
ಕವಿತೆಯನಾಗಿಸುತ್ತೇನೆ
ಸದಾ ಹರಿವ ಅರಿವಾಗುತ್ತೇನೆ
ಹಸಿರ ಅರಿವೆಯೂ ಆಗಿ
ಖರೆ ಕಾವ್ಯ ಜಗತ್ತು ನಿರ್ಮಿಸುತ್ತೇನೆ
ಮರ ಗಿಡಗಂಟಿಗಳ
ಕೊರಳ ನಾದವನೇ
ನಾಡಗೀತೆಯನಾಗಿಸಿ
ಅಜ್ಜಿ ನೂತ ಕೌದಿಯನೇ
ಜಗದ ಧ್ವಜವನಾಗಿಸಿಯೂ
ಈ ನೆಲದ ಕಡ ತೀರಿಸಲೆತ್ನಿಸುತ್ತೇನೆ;
ಈ ಮನುಕುಲವನೊಂದೇ ಅಲ್ಲ,
ಸಕಲ ಪ್ರಕೃತಿ ಕುಡಿಗಳನೆಲ್ಲ ಕೂಡಿಸಿ
ಬೆವರ ಬಕುತಿಗೆ ತಕ್ಕ ಪ್ರತಿಫಲ
ದೊರಕುವಂತೆ ಕರಗಿ
ನಾನೂ ಹಗುರಾಗುತ್ತೇನೆ;
ಸಾರ್ಥಕ್ಯ ಪಡೆಯುತ್ತೇನೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.