ADVERTISEMENT

ದಾದಾಪೀರ್ ಜೈಮನ್ ಬರೆದ ಕವಿತೆ: ಅಕ್ಷರ ಅಕ್ಷಯ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2021, 19:30 IST
Last Updated 30 ಅಕ್ಟೋಬರ್ 2021, 19:30 IST
ಕಲೆ: ಸುರೇಶ ಅರ್ಕಸಾಲಿ
ಕಲೆ: ಸುರೇಶ ಅರ್ಕಸಾಲಿ   

ಮೊದಲ ಸಲ
ಕಾಗದದ ಎದೆಯೊಳಗೆ
ಅಕ್ಷರ ಕಣ್ಣು ತೆರೆದಾಗ
ಕನಸಿನಲಿ ಕಳೆದುಹೋದ ಕಂದ
ಸಿಕ್ಕಿಬಿಟ್ಟಂಥ ರೋಮಾಂಚನವಾಗುತ್ತದೆ ಲೋಕಕ್ಕೆ

ಅಕ್ಷರ ತೊಟ್ಟಿಲೊಳಗೆ
ತೊದಲು ನುಡಿವಾಗ
ಲೋಕದಾತ್ಮದ ಒಳದನಿ
ಕ್ಷೀಣವಾಗಿ ಕೇಳಿಸುತ್ತದೆ

ಅಕ್ಷರ ಅಂಬೆಗಾಲಿಟ್ಟು
ಹೊಸ ಹಾದಿ ಮೂಡಿದಾಗ
ಲೋಕದ ಹೊಟ್ಟೆಯೊಳಗೆ
ಚಿಟುಗು ಮುಳ್ಳು ಮಿಸುಕಾಡುತ್ತದೆ

ADVERTISEMENT

ಲೋಕವೇ ಕೊರೆದಿಟ್ಟ
ಸಾಲುಗಳ ನಡುವಲ್ಲಿ
ಗತ್ತಿನಲಿ ನಡೆಯುತ್ತಾ
ಕವಿತೆಯಾದಾಗ
ಲೋಕದ ಕಣ್ಣು ಕೆಂಪಾಗುತ್ತದೆ

ಕಬ್ಬಿಣ ಕತ್ತಲ ಸರಳಿನ ಸೆರೆಮನೆಯೊಳಗೆ
ಬಂಧಿಸಿದಾಗೆಲ್ಲ
ಅಕ್ಷರ ಕಾಗದದಿಂದ ಮೇಲೆದ್ದು
ಹಾಡಾಗುತ್ತದೆ

ಹಾಡಿನ ಹೆಜ್ಜೆಯ ಹಿಡಿಯದೆ
ಸೋಲಲು
ಬೂಟುಗಾಲಿನ ಬಂದೂಕುಗಳು ಗುಂಡಿಕ್ಕುವಾಗ
ಹಾಡು ಗಾಳಿಯಲ್ಲಿ ಬೆರೆತುಹೋಗುತ್ತದೆ

ಬದುಕಲೆಂದು ಲೋಕ ಉಸಿರಾಡುವಾಗ
ತೂರಿಬಿಡುತ್ತದೆ
ದೇಹದ ಆತ್ಮದೊಳಗೆ
ಆತ್ಮದ ದೇಹದೊಳಗೆ
ಅಲ್ಲಿಂದ ಲೋಕ ನಂಬುವ
ಜನ್ಮ ಜನ್ಮಾoತರದವರೆಗೂ
ಅಕ್ಷರ ಅಕ್ಷಯವಾಗುತ್ತಲೇ ಇರುತ್ತದೆ
ಕವಿತೆ ಹಾಡು ಉಸಿರಾಗುತ್ತಾ
ಕನ್ನಡಿ ಹಿಡಿಯುತ್ತಲೇ ಇರುತ್ತದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.