ADVERTISEMENT

ದಂಗೆ ಏಳುತ್ತವೆ ಕವಿತೆಗಳೂ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2019, 19:30 IST
Last Updated 16 ನವೆಂಬರ್ 2019, 19:30 IST
ಕಲೆ: ಎಸ್‌.ವಿ. ಹೂಗಾರ
ಕಲೆ: ಎಸ್‌.ವಿ. ಹೂಗಾರ   

1

ರಸ್ತೆಗಳ ಎದೆಯ ಮೇಲೆ ದಿಂಡುರುಳುತ್ತಾ ಸಾಗುವ
ಗಜಗಾತ್ರದ ಲಾರಿಗಳ ತುಂಬೆಲ್ಲಾ
ಬಡ ಕೂಲಿ ಕಾರ್ಮಿಕರು
ಸಿರಿವಂತರ ಹೆಣ ಸಿಂಗರಿಸುವ ವೀರ ಬಾಹುಗಳು
ನಗರದ ಫ್ಯಾಕ್ಟರಿಗಳ ಅಪಾಯಕಾರಿ ತ್ಯಾಜ್ಯವನ್ನೆಲ್ಲಾ
ಒಡಲಲ್ಲಿ ಹೊತ್ತು ಹರಿವ ನಿರ್ಲಕ್ಷಿತ ನದಿಗಳು
ಶೋಕದಲ್ಲಿ ನಿರಂತರ ಬೇಯುವ
ಕೃಷ್ಣವಾತ್ಸಲ್ಯೆ ದೇವಕಿಯಂತೆ ಹಳ್ಳಿಗಳು
ರಕ್ಕಸ ಗಾತ್ರದ ಯಂತ್ರಗಳ‍ಪಾದದಡಿ
ಕೇಶಮುಂಡನಗೊಂಡ ವಿಧವೆಯಂತೆ ನೆಲ

ಒಂದು ಸಸಿಯಾಗಿ ಮೊಳಕೆಯೊಡೆಯಲಾಗುವುದಿಲ್ಲ
ಶ್ರೀಗಂಧದ ಅರಮನೆಯನ್ನು ಕಟ್ಟಿಸಿದರೂ
ಭಾರೀ ಬೆಲೆಯ ಹಂಸತೂಲಿಕಾತಲ್ಪವಿದ್ದರೂ
ಕೊನೆಗೊಂದು ದಿನ ವಿಶ್ರಮಿಸಲು ಮಣ್ಣು

ADVERTISEMENT

2

ಕಾಲನ ಲೀಲೆಯಲ್ಲಿ
ಸುಖ ಮತ್ತು ಹತಾಶೆಗಳ ಸಮಪಾಕದ ಊಟಕ್ಕಾಗಿ
ಸರದಿ ನಿಂತ ಪಯಣಿಗರು ನಾವು
ಪಾಪದೂಷಿತ ಮುಗುಳುನಗೆ ಬೀರಿ
ಪಾಪಗಳ ಸರಮಾಲೆ ಧರಿಸಿ ದೇವರ ದಿವ್ಯದರ್ಶನಕ್ಕಾಗಿ
ಸರದಿಯಲಿ ನಿಂತ ಭಕ್ತರು ನಾವು
ಪವಿತ್ರಾತ್ಮನಿಗಾಗಿ ಸಮೂಹಗಾನ ಹಾಡುತಾ
ಭಕ್ತಿಯೆಂಬುದು ಆಟಿಕೆಯ ಆತ್ಮ

3

ಭವಿಷ್ಯತ್ತಿನ ಹೊಳೆಯ ಅಲೆಯಲಿ
ಸುಳಿಗಾಳಿಗೆ ಸಿಕ್ಕು ಸುಡುಗುವ
ದುರ್ಬಲ ಸೂರ್ಯ
ಎಲ್ಲ ಋತುಗಳೂ ಗುಮಾನಿಯಿಂದ ನೋಡುತ್ತಿವೆ
ತಮಗಿಂತ ಹೆಚ್ಚು ಬಾಳದ ನರಮನುಜನ ಬುದ್ಧಿಮತ್ತೆಯನು

ನಮ್ಮ ರಕ್ತನಾಳಗಳಲ್ಲಿ ಮಲಗಿರುವ ಅತೃಪ್ತರು
ತಾಯ್ನುಡಿಯಲ್ಲಿ ನಿಡುಸುಯ್ದಾಗ
ದಂಗೆ ಏಳುತ್ತವೆ ಕವಿತೆಗಳೂ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.