ADVERTISEMENT

ಡಾ.ಮುಮ್ತಾಜ್ ಬೇಗಂ ಕವಿತೆ: ಕೆಂಡದ ಮುತ್ತು

ಡಾ.ಮುಮ್ತಾಜ್ ಬೇಗಂ ಗಂಗಾವತಿ
Published 18 ಡಿಸೆಂಬರ್ 2021, 19:30 IST
Last Updated 18 ಡಿಸೆಂಬರ್ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹೊಟ್ಟೆಗೆ ರೊಟ್ಟಿ ಸುಡಲೆಂದು
ಹಂಚ ಮೇಲೆ ಹಾಕಿದರೆ
ಚರಕ್ಕ್ ಎಂದು ಎಳೆಯ ಕೈಗೆ
ಕೆಂಡದ ಮುತ್ತು
ಹಂಚಿಗೂ ನನ್ನ ಮೇಲೆ
ಶತಮಾನದ ಸಿಟ್ಟು

ಕೆಲಸವಿಲ್ಲದ ಗೃಹಿಣಿ
ಸಾಂಬರಿಗೊಂದಿಷ್ಟು ಘಮ
ಹರಡಲು, ಒಗ್ಗರಣೆ
ಎಣ್ಣೆಯೊಳಗಣ ಜೀರಿಗೆ
ಕಣ್ಣಿಗೆ ಸಿಡಿದು, ನೋಡುವ
ನೋಟ ಮಸುಕಾಗಿ
ಕಣ್ಣೊಳಗೆ ಹೂವ ಹೊತ್ತವಳು

ಬೇಕೆಂದಾಗ ಸಂಭೋಗಕ್ಕೆ
ಸಜ್ಜುಗೊಂಡು, ಇಲ್ಲದಿರೆ ಒದೆ ತಿಂದು
ಹೆಣ್ಣತನಕೆ ಬಂಜೆತನದ ಕುತ್ತು
ಬೇಕಿಲ್ಲದಿದ್ದರು ಬಸಿರು
ಹೊತ್ತು ತಿರುಗಲೇ ಬೇಕು
ಸಾವಿನ ಮನೆ ಬಾಗಿಲು ತಟ್ಟಿ ಬಂದು
ಜನ್ಮಕ್ಕೆ ಜನ್ಮ ಕೊಟ್ಟವಳಿಗೆ
ಸೂತಕದ ಛಾಯೆ ಅಂಟಿಸಿದರು

ADVERTISEMENT

ನಿಗಿ ನಿಗಿ ಉರಿವ ಒಲೆಯ
ಮುಂದಿನ ನನ್ನ ಮಾತು
ಬೆವರಿನೊಳಗೆ ಸೋತು
ಬೆಂಕಿಯಲಿ ಬೆವರು
ಆವಿ ಆಯಿತು ನೋಡು
ಬೆಂಕಿ ಬೆಳಕಾಗುವುದಾದರು ಎಂತು..!!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.