ADVERTISEMENT

ಕವನ: ದೀನಾನಾಥ್ ಗೌತಮ್

ಪ್ರತಿಭಾ ನಂದಕುಮಾರ್
Published 19 ಆಗಸ್ಟ್ 2023, 23:30 IST
Last Updated 19 ಆಗಸ್ಟ್ 2023, 23:30 IST
 ಟ್ಯಾಕ್ಸಿ
ಟ್ಯಾಕ್ಸಿ   

ಹಿಂದಿ ಮೂಲ: ಬದರಿ ನಾರಾಯಣ್ ಕನ್ನಡಕ್ಕೆ: ಪ್ರತಿಭಾ ನಂದಕುಮಾರ್

ಹಣೆಯ ಮೇಲೆ ಚಂದನ

ತುಟಿಗಳಲ್ಲಿ ಮಂದಹಾಸ

ADVERTISEMENT

ಮುಂಬೈನಲ್ಲಿ ಟ್ಯಾಕ್ಸಿ ಚಲಾಯಿಸುತ್ತಾನೆ

ದೀನಾನಾಥ್

ಅವನ ಹಣೆಯ ಮೇಲೆ ಕಪ್ಪು ಗುಂಗುರ ಸುರುಳಿ

ಹಿಂದೆ ನೀಳ ಜುಟ್ಟು


ಅವನ ಜುಟ್ಟು ನೋಡಿ ನಾನಂದೆ

ಪಂಡಿತಜಿ, ಸ್ವಲ್ಪ ಗಾಡಿ ಬೇಗ ಓಡಿಸಿ

ನಾನು ಸ್ವಲ್ಪ ಬೇಗ ತಲುಪಬೇಕು.


ಟ್ಯಾಕ್ಸಿಯ ವೇಗ ಹೆಚ್ಚಿಸುತ್ತಾ

ದೀನಾನಾಥ್ ಹೇಳಿದ -

ಸರ್, ನಾನು ಪಂಡಿತ್ ಅಲ್ಲಾ

ನಾನು ಎಸ್ಸಿ

ಯುಪಿಯವನು


ನನ್ನ ಊಹೆ ತಪ್ಪಾಗಿದ್ದದ್ದು ನೋಡಿ

ಸ್ವಲ್ಪ ತಬ್ಬಿಬ್ಬಾಗಿ ಮತ್ತೆ ಹೇಳಿದೆ

ಹಾಗಾದರೆ ತಾವು ಬಹಳ ಪೂಜಾಪಾಠ ಮಾಡುತ್ತಿರಬಹುದು


ಇಲ್ಲಾ ಸಾಹಿಬ್, ನಾನು ಬರೀ ನನ್ನ ತಂದೆತಾಯಿಗಳ

ಪೂಜೆ ಮಾಡುತ್ತೀನಿ. ಆದರೇ

ರಸ್ತೆಯಲ್ಲಿ ಯಾವುದೇ ಮಂದಿರ ಮಸೀದಿ ಎದುರಾದರೂ

ತಲೆ ಬಾಗಿಸುತ್ತೇನೆ ಸರ್.


ಮತ್ತೆ ಮತ್ತೆ ನನ್ನ ಊಹೆ ತಪ್ಪಾಗುತ್ತಿದ್ದು

ನನ್ನ ಸಾಮಾಜಿಕ ಜ್ಞಾನಕ್ಕೆ

ಧಕ್ಕೆ ಆಗುತ್ತಿತ್ತು.

ನಾನು ನನ್ನ ಅಜ್ಞಾನ ಮುಚ್ಚಿಡಲು ಹೇಳಿದೆ -

ಏನೂ ಅಗತ್ಯವಿಲ್ಲ

ಮಂದಿರಕ್ಕೆ ಹೋಗುವುದರಿಂದಲೇ

ಒಬ್ಬ ಒಳ್ಳೇ ಹಿಂದೂ ಆಗುವುದಿಲ್ಲ.

ಅವನು ಮುಗುಳ್ನಗುತ್ತಾ ಹೇಳಿದ

ಸಾಹಬ್! ನನ್ನ ಹೆಸರು ದೀನಾನಾಥ್ ಗೌತಮ್

ನಾನು ಬೌದ್ಧ ಧರ್ಮಿ

ಆದರೆ ಅದೂ ನನಗೆ ಮೊದಲು ಗೊತ್ತೇ ಇರಲಿಲ್ಲ

ಈಗ ಮುಂಬೈಗೆ ಬಂದ ಮೇಲೇನೇ ಗೊತ್ತಾಗಿದ್ದು!


ನಾನಂದೆ - ಧನ್ಯ ಭಾರತ ದೇಶ

ಇದನ್ನು ಒಂದು ಟೆಂಪ್ಲೇಟ್‌ನಿಂದ ಅರ್ಥಮಾಡಿಕೊಳ್ಳಲಾಗುವುದಿಲ್ಲ

ಇದನ್ನು ಒಂದು ಮಾದರಿಯಿಂದ ತಿಳಿಯಲಾಗುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.